ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ರದ್ದು
ಹಾಸನ, ಜುಲೈ 04 : ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸಕಲೇಶಪುರದ ಬಳಿ ಗುಡ್ಡ ಕುಸಿದಿದ್ದು, ರೈಲ್ವೆ ಹಳಿಯ ಮೇಲೆ ಮಣ್ಣು ಬೀಳುತ್ತಿರುವ ಕಾರಣ ಸಂಚಾರ ರದ್ದಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರುವಾಗಿಲು ಬಳಿ ಮಳೆಯ ಕಾರಣ ಗುಡ್ಡ ಕುಸಿದಿದೆ. ಬೆಂಗಳೂರು-ಮಂಗಳೂರು ಮಾರ್ಗದ 86ನೇ ಮೈಲಿ ಸಮೀಪದಲ್ಲಿ ಇರುವ ರೈಲ್ವೆ ಸುರಂಗ ಮಾರ್ಗದ ದ್ವಾರದ ಬಳಿಕ ಮಣ್ಣು ಕುಸಿದು ಬಿದ್ದಿದೆ.
ರೈಲ್ವೆ ಇಲಾಖೆ ಸಿಬ್ಬಂದಿಗಳು ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಣ್ಣು ಕುಸಿಯಬಹುದು ಎಂಬ ಕಾರಣದಿಂದಾಗಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರೈಲು ಹಳಿಗೆ ಯಾವುದೇ ಅಪಾಯವಿಲ್ಲ. ಶೀಘ್ರವೇ ರೈಲು ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಮಳೆಯಾಗದಿದ್ದರೂ ಗುಡ್ಡ ಕುಸಿಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
2018ರ ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದಿತ್ತು. ಇದರಿಂದಾಗಿ ಉಭಯ ನಗರಗಳ ನಡುವಿನ ರೈಲು ಸಂಚಾರ ಸುಮಾರು 3 ತಿಂಗಳ ಕಾಲ ಸ್ಥಗಿತಗೊಂಡಿತ್ತು.











Click it and Unblock the Notifications