ಬೇಲೂರಲ್ಲಿ ಹೊಟ್ಟೆಪಾಡಿಗಾಗಿ ತರಕಾರಿ ವ್ಯಾಪಾರಕ್ಕಿಳಿದ ಟ್ಯಾಕ್ಸಿ ಡ್ರೈವರ್
ಹಾಸನ, ಮೇ 06: ಕೊರೊನಾ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಲಾಕ್ ಡೌನ್ ಘೋಷಿಸಿದ ಕಾರಣದಿಂದಾಗಿ ಬದುಕು ನಡೆಸುವ ಅನಿವಾರ್ಯತೆಯಿಂದ ಕೆಲವರು ತಮ್ಮ ವೃತ್ತಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಪ್ರವಾಸೋದ್ಯಮ ಸಂಪೂರ್ಣ ನಿಷ್ಕ್ರಿಯಗೊಂಡಿದ್ದರಿಂದ ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ ಟ್ಯಾಕ್ಸಿ ಚಾಲಕರ ಬದುಕು ಹೈರಾಣಾಗಿದೆ. ಕೆಲವರು ತಮ್ಮ ನಿತ್ಯದ ಬದುಕನ್ನು ಸಾಗಿಸುವ ಸಲುವಾಗಿ ಹೆಣಗಾಡುತ್ತಿದ್ದಾರೆ. ಸದ್ಯಕ್ಕೆ ಪ್ರವಾಸೋದ್ಯಮ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಿರುವ ಕಾರಣ ಮುಂದೆ ಹೇಗೆ ಜೀವನ ಸಾಗಿಸುವುದು ಎಂಬ ಚಿಂತೆಯಲ್ಲಿ ಕೆಲವರು ಕಾಲ ಕಳೆಯುತ್ತಿದ್ದರೆ, ಮತ್ತೆ ಕೆಲವರು ಅನಿವಾರ್ಯ ಕಾರಣಗಳಿಂದ ಉದ್ಯೋಗ ಬದಲಿಸಿ ವ್ಯಾಪಾರಕ್ಕಿಳಿದಿರುವುದು ಕಂಡು ಬಂದಿದೆ.
ಬೇಲೂರಿನಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರುದ್ರೇಶ್ ಎಂಬುವರು ಲಾಕ್ ಡೌನ್ ಆದ ಕಾರಣದಿಂದ ಜೀವನ ಸಾಗಿಸಲು ಇದೀಗ ತರಕಾರಿ ವ್ಯಾಪಾರಕ್ಕಿಳಿದಿದ್ದು, ಅದರಿಂದ ಸಂಸಾರ ಸಾಗಿಸುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ಲಾಕ್ ಡೌನ್ ನಿಂದಾಗಿ ಟ್ಯಾಕ್ಸಿ ಚಾಲನೆ ಮಾಡಿ ಬದುಕುವುದು ಸಾಧ್ಯವಾಗುತ್ತಿಲ್ಲ. ಜತೆಗೆ ನಾವು ತುಂಬಾ ಕಷ್ಟದಲ್ಲಿದ್ದೇವೆ. ನಮ್ಮ ಹಿರಿಯ ಅಣ್ಣ ತರಕಾರಿ ವ್ಯಾಪಾರ ಮಾಡುತ್ತಿದ್ದು, ನಮಗೆ ಇದೀಗ ಕೆಲಸ ಇಲ್ಲದ ಕಾರಣ ನಾನು ಕೂಡ ತರಕಾರಿ ವ್ಯಾಪಾರ ಮಾಡಲು ಆರಂಭಿಸಿದ್ದೇನೆ.

ವಾಹನವನ್ನು ಸಾಲ ಮಾಡಿ ಖರೀದಿಸಿದ ಕಾರಣ ಪ್ರತಿ ತಿಂಗಳ ಕಂತು ಹಣ ಕಟ್ಟಬೇಕಾಗಿರುವುದರಿಂದ ಏನಾದರೊಂದು ಕೆಲಸ ಮಾಡಲೇ ಬೇಕಾಗಿದೆ. ಹೀಗಾಗಿ ತರಕಾರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ.
ಒಂದೂವರೆ ತಿಂಗಳಿಂದ ಲಾಕ್ ಡೌನ್ ಆಗಿರುವ ಕಾರಣ ಟ್ಯಾಕ್ಸಿ, ಆಟೋ ಓಡಿಸಿಕೊಂಡು ಜೀವನ ಮಾಡುತ್ತಿರುವ ಚಾಲಕರ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಸಾಲ ಮಾಡಿಕೊಂಡು ಜೀವನ ಸಾಗಿಸಬೇಕಾದ ಅನಿವಾರ್ಯತೆವುಂಟಾಗಿದೆ. ಬಹಳಷ್ಟು ಮಂದಿ ವ್ಯಾಪಾರಿಗಳು ಈಗಿನ ಪರಿಸ್ಥಿತಿಗನುಗುಣವಾಗಿ ಜನರಿಗೆ ಅಗತ್ಯವಿರುವ ವಸ್ತುಗಳ ವ್ಯಾಪಾರವನ್ನು ಮಾಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ.












Click it and Unblock the Notifications