'ಆಂದೋಲನ, ಭಯೋತ್ಪಾದನೆಯನ್ನು ತಿರಸ್ಕರಿಸಿದ ಅಸ್ಸಾಂ': ಅಮಿತ್ ಶಾ
ಗುವಾಹಟಿ, ಜು.26: ಆಂದೋಲನ ಹಾಗೂ ಭಯೋತ್ಪಾದನೆಯನ್ನು ಮತ್ತೆ ಒಂದೇ ತಕ್ಕಡಿಯಲ್ಲಿ ತೂಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ, "ಅಸ್ಸಾಂನಲ್ಲಿ ಮಾರ್ಚ್-ಏಪ್ರಿಲ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ರಾಜ್ಯದ ಜನರು ಆಂದೋಲನ ಹಾಗೂ ಭಯೋತ್ಪಾದನೆಯನ್ನು ತಿರಸ್ಕರಿಸಿ ಅಭಿವೃದ್ಧಿಯನ್ನು ಆಯ್ಕೆ ಮಾಡಿದ ಪ್ರತೀಕ" ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಮೊದಲನೇ ಬಾರಿ ಈಶಾನ್ಯಕ್ಕೆ ಎರಡು ದಿನಗಳ ಭೇಟಿಯ ಕೊನೆಯ ದಿನದಂದು ಗುವಾಹಟಿಯಲ್ಲಿ ಭಾನುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಮಾತನಾಡಿದರು.
"ಅಸ್ಸಾಂನ ಸಾವಿರಾರು ಯುವಕರು ಆಕ್ರೋಶದಿಂದ ಪ್ರಾಣ ಕಳೆದುಕೊಂಡಿದ್ದಾರೆ, ಆದರೆ ಅಸ್ಸಾಂಗೆ ಏನೂ ಸಿಗಲಿಲ್ಲ. ಎರಡನೇ ಬಾರಿಗೆ ಸರ್ಕಾರವನ್ನು ರಚಿಸುವ ನಮ್ಮ ಪಕ್ಷದ ಬಗ್ಗೆ ನನ್ನ ವಿಶ್ಲೇಷಣೆ ಏನೆಂದರೆ, ಅಸ್ಸಾಂ ಆಂದೋಲನ ಮತ್ತು ಆತಂಕವಾದವನ್ನು (ಭಯೋತ್ಪಾದನೆ) ತಿರಸ್ಕರಿಸಿದೆ ಹಾಗೂ ಅಭಿವೃದ್ದಿಯ ಮಾರ್ಗ ಆರಿಸಿದೆ," ಎಂದಿದ್ದಾರೆ.

2024 ರ ವೇಳೆಗೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಸರ್ಕಾರದ ಎರಡನೇ ಅವಧಿ ಮುಗಿಯುವ ಮೊದಲು, ಕಳೆದ ವರ್ಷ ಜನವರಿಯಲ್ಲಿ ಸಹಿ ಹಾಕಿದ ಬೊಡೋಲ್ಯಾಂಡ್ ಒಪ್ಪಂದದ ಎಲ್ಲಾ ಷರತ್ತುಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. "ಅಸ್ಸಾಂನ ದಕ್ಷಿಣ ಬೆಟ್ಟಗಳ ಕಾರ್ಬಿ ಆಂಗ್ಲಾಂಗ್ನಲ್ಲಿ ಉಗ್ರರೊಂದಿಗಿನ ಶಾಂತಿ ಪ್ರಕ್ರಿಯೆಯು ಸಹ ಕೊನೆಗೊಳ್ಳಲಿದೆ," ಎಂದು ಕೂಡಾ ಮಾಹಿತಿ ನೀಡಿದರು.
ಬಿಜೆಪಿ ಸರ್ಕಾರದ ಪ್ರಚಾರಕ್ಕಾಗಿ ಅಸ್ಸಾಂಗೆ ಅಮಿತ್ ಶಾ ಹಲವಾರು ಬಾರಿ ಭೇಟಿ ನೀಡಿದ್ದರು. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಈ ಸಮಯದಲ್ಲಿ "ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಂದೋಲನ ಹಾಗೂ ಭಯೋತ್ಪಾದನೆ ಮುಕ್ತಗೊಳಿಸಿ ಬಿಜೆಪಿ ನೇತೃತ್ವದ ಸರ್ಕಾರವನ್ನು ನಿರ್ಮಿಸಲು ಬದ್ಧ," ಎಂದು ಹೇಳಿದ್ದರು.
ಬದ್ರುದ್ದೀನ್ ಅಜ್ಮಲ್ರ ಎಐಯುಡಿಎಫ್ ಸೇರಿದಂತೆ ಕನಿಷ್ಠ 10 ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ಗೆ ಬಿಜೆಪಿಯ ಮಿತ್ರಪಕ್ಷ ಬಿಪಿಎಫ್ ಸೇರಿಕೊಂಡರೂ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಕೇಂದ್ರದ ವಿವಾದಾತ್ಮಕ ಪೌರತ್ವ ಕಾಯ್ದೆಯ ವಿರುದ್ಧದ ಚಳುವಳಿಯಿಂದ ಹೊರಹೊಮ್ಮಿದ ಹಲವಾರು ಪ್ರಾದೇಶಿಕ ಸಂಘಟನೆಗಳು ಸಹ ಸ್ಪರ್ಧೆಯಲ್ಲಿದ್ದವು.
"ಈ ವರ್ಷ ಚುನಾವಣೆಗೆ ಮುಂಚಿತವಾಗಿ ಅಸ್ಸಾಂ ಹಲವಾರು ಹೊಸ ಪಕ್ಷಗಳ ಹುಟ್ಟಿಗೆ ಸಾಕ್ಷಿಯಾಯಿತು. ಆ ಪಕ್ಷಗಳು ತಮ್ಮನ್ನು ಮತದಾರರಿಗೆ ಸಾಬೀತುಪಡಿಸಲು ಸಹ ಪ್ರಯತ್ನಿಸಿದ್ದಾರೆ. ಆದರೆ ಅಸ್ಸಾಂನ ಜನರು ಬಿಜೆಪಿಯೊಂದಿಗೆ ಇದ್ದರು," ಎಂದು ಅಮಿತ್ ಶಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications