ಲಾಠಿ ಚಾರ್ಜ್, ಪೊಲೀಸರ ಬಗ್ಗೆ ಕ್ರಮ ಕೈಗೊಳ್ಳಿ ಎಂದ ಕೋರ್ಟ್
ಬೆಂಗಳೂರು, ಆಗಸ್ಟ್ 03 : ಧಾರವಾಡ ಜಿಲ್ಲೆಯ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್ ಬಗ್ಗೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ಆಗಸ್ಟ್ 5ರೊಳಗೆ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚನೆ ಕೊಟ್ಟಿದೆ.
ಬುಧವಾರ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು, 'ಲಾಠಿ ಚಾರ್ಜ್ ಪ್ರಕರಣದಲ್ಲಿ ಪೊಲೀಸ್ ಪೇದೆಗಳನ್ನು ಮಾತ್ರ ಅಮಾನತು ಮಾಡಿದರೆ ಸಾಲದು, ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು' ಎಂದು ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದಾರೆ.[ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]
'ಪೊಲೀಸರ ವರ್ತನೆ ಒನಕೆ ಓಬವ್ವನಂತಿತ್ತು. ಓಬವ್ವ ರಾಜ್ಯದ ಹಿತಕ್ಕಾಗಿ ಕಿಂಡಿಯಲ್ಲಿ ನಿಂತು ವೈರಿಗಳ ಮೇಲೆ ದಾಳಿ ಮಾಡಿದಳು. ಪೊಲೀಸರು ಸುತ್ತಲೂ ಜೀಪುಗಳನ್ನು ನಿಲ್ಲಿಸಿ, ಅಮಾಯಕರನ್ನು ನಡುವೆ ಸಿಲುಕಿಸಿ ಲಾಠಿ ಪ್ರಹಾರ ಮಾಡಿದ್ದಾರೆ' ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.[ಯಮನೂರು ಸಂತ್ರಸ್ತರಿಗೆ ಶೆಟ್ಟರ್ ಸಾಂತ್ವನ]
ಅಮಾನತು ಮಾಡಲಾಗಿದೆ : ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ಜುಲೈ 29ರಂದು ಯಮನೂರಿನಲ್ಲಿ ಲಾಠಿ ಚಾರ್ಜ್ ನಡೆದಿತ್ತು. ಮಹಿಳೆಯರು, ವೃದ್ಧರ ಮೇಲೆಯೂ ಪೊಲೀಸರು ಹಲ್ಲೆ ನಡೆಸಿದ್ದರು.[ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು]
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೆಹರು ಓಲೇಕಾರ ಅವರನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಲೋಹಾರ ಮತ್ತು ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 2ರಂದು ಆರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪೊಲೀಸರ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ ಆದೇಶ ನೀಡಿದ್ದಾರೆ. ಎಡಿಜಿಪಿ ಕಮಲ್ ಪಂತ್ ಅವರು ತನಿಖೆ ನಡೆಸುತ್ತಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಅವರಿಗೆ ಸೂಚನೆ ನೀಡಲಾಗಿದೆ.