Karnataka Elections 2023 : ಸತ್ತೂರಿನಲ್ಲಿ ಹೊಲಿಗೆ ಯಂತ್ರ ವಿತರಣೆ ಆರೋಪ: ದಾಳಿ ವೇಳೆ ಪೊಲೀಸರಿಗೆ ಸವಾಲಾಕಿದ "ಕೈ" ಮುಖಂಡ
ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ ದೀಪಕ್ ಚಿಂಚೋರೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿದ್ದ ವೇಳೆ ವಿದ್ಯಾಗಿರಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಚಿಂಚೋರೆ ಪೊಲೀಸರಿಗೆ ಕ್ಲಾಸ್ ತೆಗೆದುಕ
ಧಾರವಾಡ, ಮಾರ್ಚ್, 22: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆ ರಾಜಕಾರಣಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್ ಮುಖಂಡ ಹಾಗೂ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ದೀಪಕ್ ಚಿಂಚೋರೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ವಿದ್ಯಾಗಿರಿ ಠಾಣೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಧಾರವಾಡದ ಸತ್ತೂರಿನಲ್ಲಿ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಮಾನದೇಶಿ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೀಪಕ್ ಚಿಂಚೋರೆ ಈ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ದಾಳಿ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು, ಚುನಾವಣೆ ಪ್ರಯುಕ್ತ ನೀವು ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದ್ದೀರಾ ಎಂದು ಪ್ರಶ್ನೆಸುವ ಮೂಲಕ ಕ್ಲಾಸ್ ತೆಗೆದುಕೊಂಡರು.

51 ಸಾವಿರ ರೂ. ಕೊಟ್ಟು ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದಾರೆ
ಈ ವೇಳೆ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಚಿಂಚೋರೆ, ಕಳೆದ ಒಂದು ವರ್ಷದಿಂದ ಇಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಯಂತ್ರಗಳ ಮೇಲೆ ಯಾರ ಹೆಸರೂ ಇಲ್ಲ, ಪಕ್ಷದ ಚಿಹ್ನೆ ಸಹ ಇಲ್ಲ. ಮಾನದೇಶಿ ಫೌಂಡೇಶನ್ ವತಿಯಿಂದ ಇದನ್ನು ನಡೆಸಲಾಗುತ್ತಿದೆ. ಬೆಲ್ಲದ್ ಸೂಚನೆ ಮೇರೆಗೆ ನೀವು ದಾಳಿ ಮಾಡಲು ಬಂದಿದ್ದೀರಿ. ಅವರೇ 51 ಸಾವಿರ ರೂಪಾಯಿ ಕೊಟ್ಟು ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದಾರೆ. ಅದನ್ನು ಮೊದಲು ತಡೆಯಿರಿ ಎಂದು ಸವಾಲಾಕಿದರು.
ಜಿಲ್ಲಾಧಿಕಾರಿಗಳ ಬಳಿ ದೂರವಾಣಿಯಲ್ಲಿ ಮಾತನಾಡಿದ ಚಿಂಚೋರೆ, ಇದು ಪಕ್ಷದ ಕಾರ್ಯಕ್ರಮವಲ್ಲ. ಪಕ್ಷದ ಚಿಹ್ನೆಯನ್ನೂ ಸಹ ಎಲ್ಲೂ ಬಳಸಿಲ್ಲ. ಒಂದು ವರ್ಷದಿಂದ ಈ ತರಬೇತಿ ನಡೆಸಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಪೊಲೀಸರು ಎಲ್ಲವನ್ನೂ ಪರಿಶೀಲಿಸಿದರು.
ಮದ್ಯ, ಹಣ ಹಂಚುವ ಕಾರ್ಯ
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಮದ್ಯ, ಹಣ ಹಂಚುವ ಕಾರ್ಯ ಹೆಚ್ಚಾಗಿದೆ. ಇದನ್ನರಿತ ಚಾಮರಾಜನಗರ ಅಬಕಾರಿ ಇಲಾಖೆಯು ಹೈ ಅಲರ್ಟ್ ಆಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಚುನಾವಣೆ ಹತ್ತಿರ ಬಂತೆಂದರೆ ಸಾಕು ಮದ್ಯ, ಹಣ ಹಂಚುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಎಚ್ಚೆತ್ತ ಅಬಕಾರಿ ಇಲಾಖೆ ಈಗಿನಿಂದಲೇ ಕಾರ್ಯಚರಣೆ ಮುಂದುವರೆಸಿದೆ.
ಬಂಧಿತರಾದವರ ವಿವರ
ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು, ಅಕ್ರಮ ಮದ್ಯ ಹಂಚಿಕೆ ಆಗಬಾರದೆಂದು ಈಗಿನಿಂದಲೇ ಅಲರ್ಟ್ ಆಗಿರುವ ಅಬಕಾರಿ ಇಲಾಖೆ ಕಳೆದ ಒಂದು ತಿಂಗಳಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 115 ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 58 ಜನರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ಕಡೆ ದಾಳಿ ನಡೆಸಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 58 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ 85 ಪ್ರಕರಣಗಳು ಕೂಡ ದಾಖಲಾಗಿದ್ದು, ಕಾರ್ಯಾಚರಣೆ ವೇಳೆ 96 ಲೀಟರ್ ಮದ್ಯ 1 ಲೀಟರ್ ಬಿಯರ್ ಸೇರಿದಂತೆ 3 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಶಪಡಿಸಿಕೊಂಡ ಮದ್ಯ, ವಾಹನಗಳ ಒಟ್ಟು ಮೌಲ್ಯವೂ ಒಂದೂವರೆ ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಹಳೇ ಹಾಗೂ ಹೊಸ ಆರೋಪಿಗಳು ಸೇರಿದಂತೆ ಒಟ್ಟು 40 ಆರೋಪಿಗಳಿಂದ ಬಾಂಡ್ ಅನ್ನು ಅಬಕಾರಿ ಇಲಾಖೆ ಪಡೆದಿದೆ. ಅಷ್ಟೇ ಅಲ್ಲದೇ ಕೊಳ್ಳೇಗಾಲ ತಾಲೂಕಿನಲ್ಲಿ 10, ಚಾಮರಾಜನಗರ ತಾಲೂಕಿನಲ್ಲಿ 12, ಗುಂಡ್ಲುಪೇಟೆ ತಾಲೂಕಿನಲ್ಲಿ 14 ಸೂಕ್ಷ್ಮ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.
ಯಳಂದೂರಿನ ಗುರುಕೃಪ ವೈನ್ಸ್ ಎಂಬ ಸನ್ನದಿಗೆ ದಿಢೀರ್ ದಾಳಿ ನಡೆಸಿ ದಾಸ್ತಾನು ಸಂಖ್ಯೆ ತಾಳೆಯಾಗದಿರುವುದರಿಂದ 1555 ಲೀಟರ್ ಮದ್ಯ, 670 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 8 ಲಕ್ಷ ರೂಪಾಯಿ ಎಂದು ಅಬಕಾರಿ ಆಯುಕ್ತರಾದ ನಾಗಶಯನ ಮಾಹಿತಿ ನೀಡಿದ್ದಾರೆ.












Click it and Unblock the Notifications