ಚಿತ್ರಗಳು : ಧಾರವಾಡದಲ್ಲಿ ಸಾಹಿತ್ಯ ಜಾತ್ರೆಯ ತಯಾರಿ
ಧಾರವಾಡ, ಡಿಸೆಂಬರ್ 21 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡ ಸಜ್ಜಾಗುತ್ತಿದೆ. ಜನವರಿ 4, 5 ಮತ್ತು 6ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಹಿತ್ಯ ಜಾತ್ರೆ ನಡೆಯಲಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೃಷಿ ವಿಶ್ವವಿದ್ಯಾಲದ ಆವರಣಕ್ಕೆ ಭೇಟಿ ನೀಡಿ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಮುಖ್ಯ ವೇದಿಕೆ, ಪ್ರತಿನಿಧಿಗಳ ನೋಂದಣಿ ಕೇಂದ್ರ, ಪುಸ್ತಕ ಮಳಿಗೆ, ಊಟದ ಪೆಂಡಾಲ್ ನಿರ್ಮಿಸುವ ಸ್ಥಳಗಳನ್ನು ವೀಕ್ಷಿಸಿದರು.
ಮುಖ್ಯ ವೇದಿಕೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ವೇದಿಕೆಯಲ್ಲಿ ಆಸಿನರಾಗುವ ಗಣ್ಯರ ಹೆಸರುಗಳನ್ನು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ನೀಡುವಂತೆ ಕಸಾಪ ಪದಾಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಅಲಂಕಾರ, ವೇದಿಕೆ ಸುತ್ತ ಮತ್ತು ಸಮ್ಮೇಳನದ ಸ್ಥಳದಲ್ಲಿ ಸ್ವಚ್ಚತೆ, ಧ್ವನಿವರ್ಧಕ ಅಳವಡಿಕೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ಸೌಲಭ್ಯದ ಕುರಿತು ಮಾಹಿತಿ ಪಡೆದರು.
'ಸಾಹಿತ್ಯ ಸಮ್ಮೇಳನ ಜನರ ಉತ್ಸವವಾಗಿ ನಡೆಯಬೇಕು. ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ ನೀಡಿದೆ. ಹೆಚ್ಚಿನ ಅನುದಾನ ಅಗತ್ಯವೆನಿಸಿದರೆ ಪರಿಶೀಲಿಸಿ ಸರಕಾರದಿಂದ ಬಿಡುಗಡೆ ಮಾಡಲು ಕ್ರಮ ಕೈಕೊಳ್ಳಲಾಗುವುದು' ಎಂದು ಸಚಿವರು ಭರವಸೆ ನೀಡಿದರು.

ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, 'ಮುಖ್ಯ ವೇದಿಕೆಯಲ್ಲಿ ಸುಮಾರು 50 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ತೊಂದರೆ ಆಗದಂತೆ ರಸ್ತೆ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು.

ದೇಣಿಗೆ ನೀಡಿದರೆ ಸ್ವೀಕಾರ
'ಯಾವುದೇ ರೀತಿಯಿಂದ ಅನವಶ್ಯಕ ವೆಚ್ಚವಾಗದಂತೆ ಜವಾಬ್ದಾರಿ ವಹಿಸಬೇಕಿದೆ. ಕೈಗಾರಿಕೆ, ಕಾರ್ಖಾನೆ, ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದರೆ ಸ್ವೀಕಾರ ಮಾಡಲಾಗುತ್ತದೆ. ಯಾವುದೇ ರೀತಿಯ ಒತ್ತಾಯವಿಲ್ಲ' ಎಂದು ಆರ್.ವಿ.ದೇಶಪಾಂಡೆ ಹೇಳಿದರು.

ಜನವರಿ 4ರಂದು ಉದ್ಘಾಟನೆ
ಜನವರಿ 4ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಮತ್ತು ನಾಡಧ್ವಜಾರೋಹಣ ನಡೆಯಲಿದೆ. ನಂತರ 8.30ಕ್ಕೆ ಕರ್ನಾಟಕ ಕಾಲೇಜು ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿ 11 ಗಂಟೆಗೆ ಸಮ್ಮೇಳನದ ಮುಖ್ಯ ವೇದಿಕೆ ಇರುವ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣಕ್ಕೆ ಬಂದು ತಲುಪುತ್ತದೆ. ನಂತರ 84ನೇ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.

ಅರ್ಥಪೂರ್ಣ ಗೋಷ್ಠಿಗಳು
ಸಮ್ಮೇಳನದ ಮೂರು ದಿನಗಳ ಕಾಲ ಮುಖ್ಯ ವೇದಿಕೆ ಮತ್ತು ಎರಡು ಸಮನಾಂತರ ವೇದಿಕೆಗಳಲ್ಲಿ ಅರ್ಥಪೂರ್ಣವಾದ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅದ್ಯತೆ ನೀಡಲಾಗುತ್ತದೆ. ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳಲ್ಲಿ ಭಾಗವಹಿಸಲಿರುವ ಸರ್ಕಾರಿ ಇಲಾಖೆಯಡಿ ರಚನೆಗೊಂಡಿದರುವ ಮಹಿಳಾ ಸ್ವಸಹಾಯ ಗುಂಪುಗಳಿಗೆ ಅವರ ಉತ್ಪಾದಕತೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಸುಮಾರು 40 ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.












Click it and Unblock the Notifications