ಬಸವರಾಜ ಹೊರಟ್ಟಿ ಅಸ್ವಸ್ಥ, ಐಸಿಯುನಲ್ಲಿ ಚಿಕಿತ್ಸೆ
ಹುಬ್ಬಳ್ಳಿ, ನವೆಂಬರ್ 12 : ಮಾಜಿ ಶಿಕ್ಷಣ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಅಸ್ವಸ್ಥಗೊಂಡಿದ್ದು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ ತಿಳಿಸಿದ್ದಾರೆ.
'ಮಂಗಳವಾರದಿಂದಲೇ ತಂದೆಯವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ಬೆಳಗ್ಗೆ ಕಡಿಮೆ ರಕ್ತದೊತ್ತಡದಿಂದಾಗಿ ಮನೆಯಲ್ಲಿ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ವಸಂತ ಹೊರಟ್ಟಿ ಹೇಳಿದ್ದಾರೆ. [ಸಂಸದೀಯ ಕಾರ್ಯದರ್ಶಿಗಳ ಅಗತ್ಯವೇನಿದೆ? : ಹೊರಟ್ಟಿ]

ಆರೋಗ್ಯ ವಿಚಾರಿಸಿದ ಗೌಡರು : ಬಸವರಾಜ ಹೊರಟ್ಟಿಯವರ ಆರೋಗ್ಯದ ಕುರಿತು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ವಸಂತ ಹೊರಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ವಾಮಾಚಾರ ಶಂಕೆ : ಮುಂಬರುವ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಸವರಾಜ ಹೊರಟ್ಟಿ ಅವರು ಸ್ಪರ್ಧಿಸಲಿದ್ದಾರೆ. ಆದ್ದರಿಂದ, ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದರು.
ಇದರ ನಡುವೆ ಅವರ ಮನೆ ಮುಂದೆ ಭಾನುವಾರ ಲಿಂಬೆಹಣ್ಣು, ಎಲೆ, ಕುಂಕುಮವನ್ನು ಇಡಲಾಗಿತ್ತು. ಯಾರೋ ನಮ್ಮ ಮನೆ ಮುಂದೆ ವಾಮಾಚಾರ ಮಾಡಿದ್ದಾರೆ ಎಂದು ಹೊರಟ್ಟಿಯವರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಹೊರಟ್ಟಿ ಅವರ ಪುತ್ರ ವಸಂತ ಅವರು, 'ನಾವು ಇಂಥಹದ್ದನ್ನು ನಂಬುವುದೇ ಇಲ್ಲ' ಎಂದು ಹೇಳಿದ್ದಾರೆ.












Click it and Unblock the Notifications