ಧಾರವಾಡದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಕೇಂದ್ರ ತಂಡ
ಧಾರವಾಡ, ನವೆಂಬರ್ 18 : ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಧಾರವಾಡದಲ್ಲಿ ಪರಿಶೀಲನೆ ನಡೆಸಿದೆ. ಜಿಲ್ಲೆಯ ಹಿಂಗಾರು ಹಂಗಾಮಿನ ಬರಪರಿಸ್ಥಿತಿ ಕುರಿತು ವಾಸ್ತವದ ಅಧ್ಯಯನ ನಡೆಸಲಾಗಿದೆ.
ಸಿಪಿಡಿಓಟಿಐ ನಿರ್ದೇಶಕ ಡಾ.ಮಹೇಶ್ ಅವರ ನೇತೃತ್ವದ ಬರ ಅಧ್ಯಯನ ತಂಡದಲ್ಲಿ ಸಿಡಬ್ಲೂಸಿ ನಿರ್ದೇಶಕರಾದ ಓ.ಆರ್.ಕೆ. ರೆಡ್ಡಿ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನೀತಾ ತಹಿಲೈನಿ ಅವರು ಇದ್ದಾರೆ.
ಅಧ್ಯಯನ ತಂಡ ನವೆಂಬರ್ 17ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಬರ ಅಧ್ಯಯನ ಕೈಗೊಂಡಿತು. ಜಿಲ್ಲೆಯ ಹಿಂಗಾರು ಹಂಗಾಮಿನ ಬರಪರಿಸ್ಥಿತಿ ಕುರಿತು ವಾಸ್ತವದ ಅಧ್ಯಯನ ನಡೆಸಿತು.
'ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರದ ಸೂತ್ರಗಳನ್ವಯ ಒಂದು ವಾರದೊಳಗೆ ಅಧ್ಯಯನದ ವರದಿ ಸಲ್ಲಿಸಲಾಗುವದು. ಬರುವ ಸೋಮವಾರ ರಾಜ್ಯದ ಎಲ್ಲ ಅಧ್ಯಯನ ತಂಡಗಳ ಸಭೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ' ಎಂದು ಡಾ.ಮಹೇಶ್ ಕುಮಾರ ಹೇಳಿದರು.

ನಾಶವಾದ ಬೆಳೆಗಳು
ಕೇಂದ್ರ ತಂಡವು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ ವ್ಯಾಪ್ತಿಯ ಹೊಲಗಳಲ್ಲಿ ಮೆಣಸಿನಕಾಯಿ, ಹತ್ತಿ ಬೆಳೆ ಹಾನಿಯಾಗಿರುವ ಬಗ್ಗೆ ಖುದ್ದಾಗಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯಿತು. ನಲವಡಿಯಲ್ಲಿ ಕೃಷಿ ನಿರ್ಮಿಸಲಾಗಿರುವ ಕೃಷಿಹೊಂಡವನ್ನು ವೀಕ್ಷಿಸಿದ ತಂಡ ಬರ ಎದುರಿಸಲು ರೂಪಿಸಲಾಗಿರುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿತು.

ಕೈ ಮುಗಿದ ರೈತ
ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ ಪರಿಣಾಮಕಾರಿಯಾಗಿ ವಿವರಿಸಿದ ನವಲಗುಂದ ತಾಲೂಕಿನ ನಲವಡಿಯ ಹಿರಿಯ ರೈತ ಅಶೋಕ ರಾಮಪ್ಪ ಮುದರಡ್ಡಿ, ಒಂದು ಹಂತದಲ್ಲಿ ಗದ್ಗದಿತರಾಗಿ ಕೈ ಮುಗಿದು ಪರಿಹಾರಕ್ಕಾಗಿ ಕೋರಿದಾಗ ನೆರೆದಿದ್ದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಮನ ಕರಗಿತು.

ಒಂದು ಹನಿ ಮಳೆಯೂ ಆಗಿಲ್ಲ
ಧಾರವಾಡ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ನವೆಂಬರ್ ನಲ್ಲಿ ಒಂದು ಹನಿಯೂ ಮಳೆ ಆಗಿಲ್ಲ, ಜಿಲ್ಲೆಯ ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಿರುವ ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ಕೆಂಪು ಮೆಣಸಿನಕಾಯಿ, ಉಳ್ಳಾಗಡ್ಡಿ ಯನ್ನು 97, 98 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು, 84, 414 ಹೆಕ್ಟೇರ ಪ್ರದೇಶದಲ್ಲಿ ಬೆಳೆ ಶೇ.50 ಕ್ಕೂ ಹೆಚ್ಚು ಹಾನಿಯಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಒದಗಿಸಿದರು.

ತಂಡದಲ್ಲಿ ಯಾರಿದ್ದರು?
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ,ಜಿಪಂ ಸಿಇಓ ಡಾ.ಸತೀಶ ಬಿ.ಸಿ., ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಉಪನಿರ್ದೇಶಕ ಡಾ.ರಾಮಚಂದ್ರ ಮಡಿವಾಳರ ಮುಂತಾದವರು ತಂಡದ ಜೊತೆಗಿದ್ದರು.












Click it and Unblock the Notifications