ದಾವಣಗೆರೆ: ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಕಿ ಪತಿ ಕೊಲೆ
ದಾವಣಗೆರೆ, ಅಕ್ಟೋಬರ್ 16: ಆಹಾರದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಮೂವರ ಜೊತೆ ಸೇರಿ ಪತಿಯ ಕೊಲೆ ಮಾಡಿದ ಮಹಿಳೆಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಜಗಳೂರು ಪಟ್ಟಣದ ಹೊರವಲಯದ ಬಿದರಕೆರೆ ರಸ್ತೆಯಲ್ಲಿ ನಡೆದ ಎಗ್ ರೈಸ್ ವ್ಯಾಪಾರಿ ಬಸವರಾಜಪ್ಪ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವ ಪೊಲೀಸರು, ಈ ನಾಲ್ವರು ಆರೋಪಿಗಳನ್ನು ನಿನ್ನೆ ಬಂಧಿಸಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಬಸವರಾಜಪ್ಪನ ಪತ್ನಿ ಭಾಗ್ಯಮ್ಮ, ಜಗಳೂರು ತಾಲ್ಲೂಕಿನ ಗುಡ್ಡದ ನಿಂಗನಹಳ್ಳಿ ಗ್ರಾಮದ ಅಂಜಿನಪ್ಪ, ಚೌಡಪ್ಪ, ಆಟೊ ಚಾಲಕ ಮಾರುತಿ ಅವರನ್ನು ಬಂಧಿಸಲಾಗಿದೆ.
'ಬಸವರಾಜಪ್ಪ ಅವರಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು. ಇದನ್ನು ಪತ್ನಿ ಭಾಗ್ಯಮ್ಮ ಪ್ರಶ್ನಿಸುತ್ತಿದ್ದರು. ಇದರಿಂದ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ಭಾಗ್ಯಮ್ಮ ಪತಿಯ ಕೊಲೆಗೆ ಯೋಜಿಸಿದ್ದರು. ಎಗ್ ರೈಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜಿನಪ್ಪ, ಆಟೊ ಚಾಲಕ ಮಾರುತಿ, ಜೌಡಪ್ಪರಿಗೆ ಪತಿಯನ್ನು ಕೊಲೆ ಮಾಡಿದರೆ 1 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಸಂಚು ರೂಪಿಸಿದ್ದರು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದೇ ಅ.13ರ ಮಂಗಳವಾರ ರಾತ್ರಿ ಬಸವರಾಜಪ್ಪ ಎಗ್ ರೈಸ್ ವ್ಯಾಪಾರ ಮುಗಿಸಿ ಮನೆಗೆ ಹೋಗಿದ್ದರು. ಕೊಲೆಗೆ ಸಂಚು ಹೂಡಿದ್ದ ಭಾಗ್ಯಮ್ಮ ಪತಿಗೆ ತಿಳಿಯದಂತೆ ರಾಗಿ ಮುದ್ದೆಯಲ್ಲಿ 10 ನಿದ್ರೆ ಮಾತ್ರೆ ಹಾಕಿದ್ದರು. ಊಟ ಮುಗಿಸಿ ಬಸವರಾಜಪ್ಪ ಗಾಢ ನಿದ್ದೆಗೆ ಜಾರಿದ್ದಾಗ ಬಂದ ಅಂಜಿನಪ್ಪ, ಆಟೊ ಚಾಲಕ ಮಾರುತಿ ಸಹಕಾರದಿಂದ ಬಸವರಾಜಪ್ಪನನ್ನು ಬಿದರಕೆರೆ ರಸ್ತೆಗೆ ಕರೆತಂದು ಅಲ್ಲಿ ಚೌಡಪ್ಪನೊಂದಿಗೆ ಸೇರಿ ಬಸವರಾಜಪ್ಪನ ಕತ್ತು ಕೊಯ್ದು ಕೊಲೆ ಮಾಡಿದ್ದರು.
ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications