ದಾವಣಗೆರೆ: ಡಿಸಿಸಿ ಅಧ್ಯಕ್ಷ ಸ್ಥಾನದಿಂದ ಹೆಚ್. ಬಿ. ಮಂಜಪ್ಪನನ್ನು ವಜಾಗೊಳಿಸಿ; ಕಾಂಗ್ರೆಸ್ ಮುಖಂಡರ ಆಗ್ರಹ
ದಾವಣಗೆರೆ, ಸೆಪ್ಟೆಂಬರ್, 20: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ನಿಭಾಯಿಸುವಲ್ಲಿ ವಿಫಲರಾಗಿರುವ ಹೆಚ್.ಬಿ. ಮಂಜಪ್ಪನವರನ್ನು ಕೂಡಲೇ ವಜಾ ಮಾಡಬೇಕು ಎಂದು ಕಾಂಗ್ರೆಸ್ನ ಗುಂಪೊಂದು ದಾವಣಗೆರೆಯಲ್ಲಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಈ ಬಗ್ಗೆ ಮಾತನಾಡಿ, ''ಕಳೆದ ಏಳು ವರ್ಷಗಳಲ್ಲಿ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿದೆ. ಸರಿಯಾಗಿ ಕೆಲಸ ಮಾಡದ ಮಂಜಪ್ಪನವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಅವರನ್ನು ಪಕ್ಷದಿಂದ ವಜಾ ಮಾಡಿ, ಪಕ್ಷದ ನಿಷ್ಠಾವಂತರು ಹಾಗೂ ಉತ್ತಮ ಕೆಲಸ ಮಾಡುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿಗೆ ಒತ್ತಾಯ ಮಾಡುತ್ತೇವೆ'' ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಆಗಲಿಲ್ಲ. ಅದೇ ರೀತಿಯಲ್ಲಿ ಪುರಸಭೆ, ನಗರಸಭೆಯಲ್ಲಿಯೂ ಹೇಳಿಕೊಳ್ಳುವಂತಹ ಸಾಧನೆ ಪಕ್ಷದಿಂದ ಆಗಿಲ್ಲ. ಕೆಲವರು ಪಕ್ಷಕ್ಕೆ ಏನು ಮಾಡಿದ್ದಾರೆ ಎಂದು ಕೇಳುವ ಮೂಲಕ, ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಿರುವ ಮಂಜಪ್ಪ ಅವರು, ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ನಿಂದ ಗೆದ್ದು ಸದಸ್ಯರಾಗಿದ್ದರು. ಆಗ ಜೆ.ಎನ್. ಶ್ರೀನಿವಾಸ್ ಹಾಗೂ ಅವರ ಪತ್ನಿ ಶ್ವೇತಾ ಶ್ರೀನಿವಾಸ್ ಗೈರು ಹಾಜರಾದಾಗ ಯಾಕೆ ನೊಟೀಸ್ ನೀಡಲಿಲ್ಲ. ಈಗ ಡಾ.ವೈ.ರಾಮಪ್ಪನವರನ್ನು ಉಚ್ಛಾಟನೆ ಮಾಡಿದ್ದು ಯಾಕೆ? ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯನಾ? ಎಂದು ಪ್ರಶ್ನಿಸಿದರು.

ಗುಲಾಮರಂತೆ ಕೆಲಸ ಮಾಡಿದರೆ ಪಕ್ಷ ಬೆಳೆಯಲ್ಲ
ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ಬಿಟ್ಟು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ಬಿಡಬೇಕು. ಚಿಂತನ - ಮಂಥನ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ಗೆ ಕೆಟ್ಟ ಮಾತುಗಳಿಂದ ನಿಂದಿಸಿದ್ದರು. ಇದನ್ನು ಮಂಜಪ್ಪನವರು ನೋಡಿಕೊಂಡು ಸುಮ್ಮನಿದ್ದರು. ಆಗ ಏನು ಮಾಡುತ್ತಿದ್ದರು? ಯಾರದ್ದೋ ಗುಲಾಮರಂತೆ ಅಧ್ಯಕ್ಷರಾಗಿ ಕೆಲಸ ಮಾಡಿದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ.

ಪಕ್ಷವನ್ನು ಒತ್ತೆ ಇಡುವ ಕಲಸ ಆಗುತ್ತಿದೆ
ಹಣ, ಶ್ರೀಮಂತಿಕೆ ಹೊಂದಿರುವವರಿಂದ ಪಕ್ಷ ಕಟ್ಟಲು ಆಗುವುದಿಲ್ಲ. ಈ ರೀತಿಯ ಅವಶ್ಯಕತೆ ಕಾಂಗ್ರೆಸ್ಗೆ ಇಲ್ಲ. ಮಂಜಪ್ಪ ಅವರಿಂದ ತುಂಬಾ ಲಾಭ ಪಡೆದಿದ್ದಾರೆ. ಆದರೆ ನಾವ್ಯಾರು ಅವರಿಂದ ಲಾಭ ಪಡೆದುಕೊಂಡಿಲ್ಲ. ಶ್ರೀಮಂತರ ಮನೆ ಬಾಗಿಲಿಗೆ ಹೋಗಿ ಪಕ್ಷ ಒತ್ತೆ ಇಡಲಾಗಿದೆ ಎಂದು ಆರೋಪಿಸಿದರು.

ದಾವಣಗೆರೆಯಲ್ಲಿ ಯಾವ ಹೈಕಮಾಂಡ್ ಇಲ್ಲ
ಅವರು ಶಾಮನೂರು ಶಿವಶಂಕರಪ್ಪನವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಯಾವ ಹೈಕಮಾಂಡ್ ಇಲ್ಲ. ನಮಗಿರುವುದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಹೈಕಮಾಂಡ್ ಮಾತ್ರ. ಯಾರ ಬಗ್ಗೆಯೂ ವ್ಯಕ್ತಿಗತವಾಗಿ ನಮ್ಮ ವಿರೋಧ ಇಲ್ಲ. ಪಕ್ಷ ಬೆಳೆಯುವುದು ನಮ್ಮ ಉದ್ದೇಶವಾಗಿದೆ. ನಿಷ್ಠಾವಂತರನ್ನು ಗುರುತಿಸಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ ಆಗಿದೆ. ಈ ಕೆಲಸ ಆಗದಿರುವುದು ಎಲ್ಲರಿಗೂ ಬೇಸರ ತಂದಿದೆ. ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ನಾಲ್ಕು ಗೋಡೆಗಳ ಮಧ್ಯೆ ಪರಿಹರಿಸಿಕೊಳ್ಳಬಹುದಾದ ವಿಚಾರ ಬೀದಿಗೆ ಬರಲು ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಗುಡುಗಿದರು.

ನಾವು ದುಡಿದ ಹಣದಲ್ಲಿ ಖರ್ಚು ಮಾಡಿದ್ದೇವೆ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ನಾವೆಲ್ಲ ಏನು ಕೊಡುಗೆ ನೀಡಿದ್ದೇವೆ, ಎಷ್ಟು ಖರ್ಚು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಲು ನಾವು ರಕ್ತ ಸುರಿಸಿದ್ದೇವೆ. ಬೆದರಿಕೆಗೆ ಲೆಕ್ಕಿಸದೇ ಹೋರಾಟ ನಡೆಸಿದ್ದೇವೆ. ನಾವು ದುಡಿದ ಹಣದಲ್ಲಿ ಖರ್ಚು ಮಾಡಿದ್ದೇವೆ. ನಾವ್ಯಾರು ಶಾಸಕ, ಸಂಸದರಾಗಿಲ್ಲ. ನಮಗೆ ಟಿಕೆಟ್ ಕೊಟ್ಟಿಲ್ಲ. ಸುಖಾಸುಮ್ಮನೆ ನಿಂದನೆ ಮಾಡುವುದು ತಪ್ಪು. ಎಲ್ಲಾ ಸಮುದಾಯದವರು ಮತ ಹಾಕಿದ ಪರಿಣಾಮ ಮಂಜಪ್ಪ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 4 ಲಕ್ಷದ 85 ಸಾವಿರ ಮತಗಳು ಬಂದಿವೆ. ಮುಸ್ಲಿಮರು ಮತ ಚಲಾಯಿಸಿದ್ದಾರೆ. ಅಬ್ದುಲ್ ಜಬ್ಬಾರ್ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರೊಬ್ಬ ಪಕ್ಷದ ಹಿರಿಯ ನಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಾಜಕುಮಾರ್, ಹಾಲೇಶ್, ಕಡತಿ ತಿಪ್ಪಣ್ಣ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್, ರೆಹಮತ್ ಉಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.











Click it and Unblock the Notifications