Karnataka Assembly election 2023: ಪ್ರಜಾಧ್ವನಿ ಕಾಂಗ್ರೆಸ್ನ ಅಂತಿಮ ಯಾತ್ರೆ: ದಾವಣಗೆರೆಯಲ್ಲಿ ಜೋಶಿ ವ್ಯಂಗ್ಯ
ದಾವಣಗೆರೆ, ಜನವರಿ, 22: ದಾವಣಗೆರೆ ರಾಜಕಾರಣದ ಶಕ್ತಿ ಕೇಂದ್ರವಾಗಿದೆ. ಫೆಬ್ರವರಿ ಕೊನೆ ವಾರ, ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಬಿಜೆಪಿ ಐತಿಹಾಸಿಕ ಸಮಾವೇಶ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಹಾಗೆಯೇ ಕಾಂಗ್ರೆಸ್ಗೆ ಪ್ರಜಾಧ್ವನಿಯೇ ಅಂತಿಮ ಯಾತ್ರೆ ಆಗಲಿದೆ ಎಂದು ವ್ಯಂಗ್ಯವಾಡಿದರು.
ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯುವ ಸಮಾವೇಶ ಇತಿಹಾಸ ಸೃಷ್ಟಿಸಲಿದೆ ಎಂದು ತಿಳಿಸಿದರು. ಹಾಗೆಯೇ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಯಾವ ಕೊಡುಗೆ ನೀಡಿಲ್ಲ. ರಾಜಸ್ತಾನ, ಛತ್ತೀಸ್ ಗಡದಲ್ಲಿ ಜನಪರ ಆಡಳಿತ ನೀಡಿಲ್ಲ. ಭರವಸೆಗಳು ಏನಾದವು? ಯಾವ ಭರವಸೆಯನ್ನೂ ಕೂಡ ಈಡೇರಿಸಿಲ್ಲ.ಇನ್ನು ರಾಜಕೀಯದಲ್ಲಿ ಪ್ರಬುದ್ಧರಾಗಿರದ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿದೆ. ಪ್ರಜಾಧ್ವನಿ ಯಾತ್ರೆ ಸುಳ್ಳಿನಿಂದ ಕೂಡಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುಳ್ಳಿನ ಭರವಸೆ ನೀಡುತ್ತಿರುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ತುರ್ತು ಪರಿಸ್ಥಿತಿ ಹೇರಿತ್ತು. ಕುಟುಂಬ ರಾಜಕಾರಣಕ್ಕೆ ಮನ್ನಣೆ ಕೊಟ್ಟಿತ್ತು ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಅಭಿಯಾನಕ್ಕೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.
ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು?
ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಜಾಧ್ವನಿ ಹುಡುಕಿಕೊಂಡು ಹೊರಟಿದೆ. ಎಲ್ಲಿಯೂ ಅಸ್ತಿತ್ವ ಇಲ್ಲ. 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಈಗ ಹೇಳುತ್ತಿರುವ ಕಾಂಗ್ರೆಸ್ ನಾಯಕರು, 2013ರಿಂದ 18ರವರೆಗೆ ಅಧಿಕಾರದಲ್ಲಿ ಇದ್ದಾಗ ಯಾಕೆ ಕೊಡಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಬಿಹಾರ ರಾಜ್ಯಗಳು ಮೂರು ಕತ್ತಲಿನಲ್ಲಿ ಕಳೆದದಿದ್ದವು. ಇದನ್ನು ಅವರು ಮರೆತಿದ್ದಾರೆ ಎಂದು ಟಾಂಗ್ ನೀಡಿದರು.
ಜನರಿಗೆ ಟೋಪಿ ಹಾಕುತ್ತಾ ಬಂದಿದ್ದಾರೆ
ಕಾಂಗ್ರೆಸ್ ಈ ದೇಶದಲ್ಲಿ ಅಧಿಕಾರದಲ್ಲಿ ಇದ್ದಾಗ ದುಡ್ಡು ಕೊಟ್ಟರೂ ಕರೆಂಟ್ ಸಿಗುತ್ತಿರಲಿಲ್ಲ. ಜನರಿಗೆ ಟೋಪಿ ಹಾಕುತ್ತಾ, ಮೋಸ ಮಾಡುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮುಕ್ತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮನೆ ಮನೆಗೆ ತಲುಪಿಸದ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಭಾಷಣ ತಲುಪಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಕಳೆದ ಬಾರಿ ಸ್ಪಷ್ಟ ಬಹುಮತ ಬಂದಿಲ್ಲ
ಬಿಜೆಪಿಯಲ್ಲಿ ಉತ್ತಮ ಕೆಲಸ ಮಾಡುವವರೇ ನಾಯಕರು. ಕಳೆದ ಬಾರಿ ಸ್ಪಷ್ಟ ಬಹುಮತ ಬಂದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬರಬೇಕಾದರೆ ನೀವೆಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು. ಆಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಪ್ರಜಾಧ್ವನಿ ಕಾಂಗ್ರೆಸ್ನ ಅಂತಿಮ ಯಾತ್ರೆ
11 ಬಾರಿ ರಾಜ್ಯದ ಬಜೆಟ್ ಮಂಡಿಸಿದ್ದೇನೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕ್ಷೇತ್ರವೇ ಸರಿಯಾಗಿ ಇಲ್ಲ. ಚಾಮುಂಡೇಶ್ವರಿಯಲ್ಲಿ ಸೋತರು. ಈಗ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೊಡೆತಕ್ಕೆ ಸಿದ್ದರಾಮಯ್ಯ ತಡೆದುಕೊಳ್ಳಲು ಆಗುತ್ತಿಲ್ಲ. ಪ್ರಜಾಧ್ವನಿ ಕಾಂಗ್ರೆಸ್ನ ಅಂತಿಮ ಯಾತ್ರೆ ಎಂದು ಲೇವಡಿ ಮಾಡಿದ ಅವರು, ಕುಕ್ಕರ್ ಬಾಂಬ್ ಮತ್ತು ಡಿ.ಕೆ. ಶಿವಕುಮಾರ್ ಅಣ್ಣತಮ್ಮಂದಿರು ಇದ್ದಂತೆ ಎಂದು ಹೇಳಿದರು. ಇನ್ನು ಜೆಡಿಎಸ್ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ಪ್ರಾಬಲ್ಯ ಹೊಂದಿದೆ. ಇದೊಂದು ಕುಟುಂಬ ಪಕ್ಷವಾಗಿದೆ. ಎಚ್. ಡಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬದವರೇ ಇದ್ದಾರೆ. ಇನ್ನು ಕೆಲವರು ಸೇರಿದರೆ ನವಗ್ರಹದ ಕುಟುಂಬದ ಪಕ್ಷ ಆಗಲಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಉತ್ತರ ಮಂಡಲದ ಅಧ್ಯಕ್ಷ ಸಂಗನ ಗೌಡ್ರು, ಸಂಸದ ಜಿ. ಎಂ. ಸಿದ್ದೇಶರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ರಾಜ್ಯ ಉಪಾಧ್ಯಕ್ಷ ಜಗದೀಶ್, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಡಾ. ಎ.ಹೆಚ್. ಶಿವವಯೋಗಿಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸುಧಾ ಜಯ ರುದ್ರೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ದೂಡಾ ಅಧ್ಯಕ್ಷ ಎ.ವೈ ಪ್ರಕಾಶ್, ಪಾಲಿಕೆ ಸದಸ್ಯರಾದ ಕೆ. ಎಂ. ವೀರೇಶ್, ಎಸ್. ಟಿ. ವೀರೇಶ್, ಉಮಾ ಪ್ರಕಾಶ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.