"ಕಿಕ್" ಮತ್ತು "ಶಾಕ್" ಒಂದಾದ್ರೆ ಕಾಂಗ್ರೆಸ್ ಸರ್ಕಾರ ಪತನ ಖಚಿತ: ಎಂ.ಪಿ.ರೇಣುಕಾಚಾರ್ಯ ಭವಿಷ್ಯ
ದಾವಣಗೆರೆ, ಜೂನ್, 22: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭರವಸೆಗಳು ಸೋಲಿಸಿವೆ. ಚುನಾವಣೆಯಲ್ಲಿ ಸೋತಿರಬಹುದು. ಆದರೆ ಜನರ ದೃಷ್ಟಿಯಲ್ಲಿ ಗೆದ್ದಿದ್ದೇನೆ. ವಿದ್ಯುತ್ ಬಿಲ್ 5 ಪಟ್ಟು ಹೆಚ್ಚಾಗಿದೆ. ಮದ್ಯದ ದರವೂ ದುಪ್ಪಟ್ಟಾಗಿದೆ. ಆದರೆ ಕಿಕ್ ಮತ್ತು ಶಾಕ್ ಒಂದಾದರೆ ಕಾಂಗ್ರೆಸ್ ಸರ್ಕಾರ ಪತನ ಖಚಿತ. ಜನರು ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಭವಿಷ್ಯ ನುಡಿದರು.
ನಗರದ ರೇಣುಕಾಮಂದಿರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಸೋತಿರಬಹುದು, ಆದರೆ ಸತ್ತಿಲ್ಲ. ತಾಂತ್ರಿಕವಾಗಿ ಸೋಲು ಕಂಡಿದ್ದೇವೆ. ನಾವು ಸೋತಿದ್ದೇವೆ ಎಂಬ ಭಾವನೆ ಬಂದರೆ 25 ವರ್ಷ ಹಿಂದಕ್ಕೆ ಹೋದಂತಾಗುತ್ತದೆ. ಕಾಂಗ್ರೆಸ್ನ ಬಿಟ್ಟಿ ಭರವಸೆಗಳು, ಪಕ್ಷದ ಕೆಲ ತಪ್ಪು ನಿರ್ಧಾರದಿಂದ ಹಿನ್ನೆಡೆಯಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸೋಣ. ಇಂದಿನ ಸೋಲು ನಾಳೆಯ ಗೆಲುವು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ನಡೆಸಲು ಕಾಂಗ್ರೆಸ್ಗೆ ಇಷ್ಟ ಇಲ್ಲ. ಲೋಕಸಭಾ ಚುನಾವಣೆ ಬರುತ್ತಿದೆ. ಈಗಿನಿಂದಲೇ ನಾವೆಲ್ಲರೂ ಸಜ್ಜಾಗೋಣ. ಸೋತಿದ್ದೇವೆಂದು ಮನೆಯಲ್ಲಿ ಕೂರಬೇಡಿ. ನಾನು ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಗ್ರಾಮಗಳಿಗೆಲ್ಲಾ ಹೋಗಿ ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರದ ಮೋಸದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಯಲ್ಲಿ ಅತ್ತೆ-ಸೊಸೆ ನಡುವೆ ಗಲಾಟೆ
ಇನ್ನು ಶಕ್ತಿ ಪ್ರಯಾಣವೂ ಎಲ್ಲರಿಗೂ ಸಿಗುತ್ತಿಲ್ಲ. ಮನೆಯಲ್ಲಿ ಅತ್ತೆ-ಸೊಸೆ ನಡುವೆ ಗಲಾಟೆ ಆಗುವಂತೆ ಮಾಡಿದೆ. ಮನೆ ಯಜಮಾನಿ ಸೇರಿದಂತೆ ನಾಲ್ವರು ಮಹಿಳೆಯರು ಇರುತ್ತಾರೆ. ಅವರಿಗೆ ಕೊಡುವುದಿಲ್ಲ ಎಂದರೆ ಹೇಗೆ? ಎಲ್ಲರಿಗೂ ತಲಾ 2 ಸಾವಿರ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.
ಹಳ್ಳಿಗಳಿಗೆ ಹೋದರೆ ಕಾಂಗ್ರೆಸ್ನ ಗ್ಯಾರಂಟಿಗಳಿಂದ ಆಗಿರುವ ಪರಿಸ್ಥಿತಿ ಅನಾವರಣಗೊಳ್ಳುತ್ತದೆ. ಗ್ಯಾರಂಟಿ ಕಾರ್ಡ್ ಸೈನ್ ಮಾಡಿಕೊಟ್ಟಿದ್ದೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂಬ ಘೋಷಣೆ ಮಾಡಿದ್ದರಾ? ಈಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪ ಮಾಡಲು ಶುರು ಮಾಡಿರುವ ಕಾಂಗ್ರೆಸ್ನ ಕುತಂತ್ರ ರಾಜಕಾರಣಕ್ಕೆ ಜನರು ಸೊಪ್ಪು ಹಾಕುವುದಿಲ್ಲ ಎಂದು ಕಿಡಿಕಾರಿದರು.
ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತಿದೆ. 10 ಕೆ.ಜಿ.ಅಕ್ಕಿ ಕೊಡಿ, ವಿದ್ಯುತ್ ಫ್ರೀ ನೀಡಿ, ಕೆಲ ಬಸ್ಗಳು ತಡೆರಹಿತ ಎಂಬ ಬೋರ್ಡ್ ಹಾಕಿಕೊಂಡು ಸಂಚರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ನಿಲುಗಡೆ ಆಗುತ್ತಿಲ್ಲ. ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಎಂದಿದ್ದರೂ ಯಾಕೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಕಿಡಿಕಾರಿದರು.
ಕಾರ್ಯಕರ್ತರಿಂದ ಅಸಮಾಧಾನ
ಇನ್ನು ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿದರೆ ಮಾತನಾಡಿದ ಬಹುತೇಕರು ಪಕ್ಷದ ಕೆಲ ನಿರ್ಧಾರಗಳು, ಮುಖಂಡರಿಂದಲೇ ಸೋಲು ಕಾಣುವಂತಾಯಿತು ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಇನ್ನು ಜಗಳೂರು ಮಾಜಿ ಶಾಸಕ ಎಸ್. ವಿ.ರಾಮಚಂದ್ರಪ್ಪ ಅವರಂತೂ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಹೇಳಿದರು. ಹಾಗೆಯೇ ಮಾಜಿ ಸಿಎಂ ಯಡಿಯೂರಪ್ಪ ಅವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಬಿಜೆಪಿ ಬಲಿಷ್ಠ ಆಗಿರಲಿದೆ. ಯಾರೂ ಪಕ್ಷವನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಗೋವಿಂದ ಕಾರಜೋಳ ಅವರಂತೂ ವೇದಿಕೆಯಲ್ಲಿ ಮೇಲಿರುವ ನಮ್ಮಿಂದಾನೇ ಸೋಲಾಗಿರುವುದು. ವೇದಿಕೆಯ ಮುಂಭಾಗ ಕುಳಿತಿರುವ ಕಾರ್ಯಕರ್ತರಿಂದ ಅಲ್ಲ. ಅಲ್ಲದೆ ಪಕ್ಷದ ಕೆಲ ತೀರ್ಮಾನಗಳು ಕೂಡ ಸೋಲಿಗೆ ಕಾರಣವಾಯಿತು ಎಂದು ಬೇಸರ ಹೊರಹಾಕಿದರು.
ರೇಣುಕಾಚಾರ್ಯ ಅವರದ್ದೂ ಇದೇ ಅಭಿಮತವಾಗಿದೆ. ಪಕ್ಷದ ಕೆಲ ನಿರ್ಧಾರಗಳಿಂದ ಸೋತಿದ್ದೇವೆ. ಹಾಗೆಂದ ಮಾತ್ರಕ್ಕೆ ಮನೆಯಲ್ಲಿ ಕೂರದೇ ಮತ್ತೆ ಪಕ್ಷ ಸಂಘಟಿಸೋಣ. ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಂದು ಹೇಳಲು ಮನಸು ಬರುತ್ತಿಲ್ಲ. ಅವರೂ ಈಗಲೂ ರಾಜ್ಯದ ಜನರ ದೃಷ್ಟಿಯಲ್ಲಿ ಮುಖ್ಯಮಂತ್ರಿ ಅವರೇ ಎಂದು ಕೊಂಡಾಡಿದರು.
ಕಾರ್ಯಕರ್ತರಿಂದಲೇ ಪಕ್ಷ ಬೆಳೆದಿರುವುದು
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಾರ್ಯಕರ್ತರಿಂದಲೇ ಪಕ್ಷ ಬೆಳೆದಿರುವುದು. ಮತದಾರರು ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ. 150ರಿಂದ ಮೂರು ಸಾವಿರ ಮತಗಳ ಅಂತರದಿಂದ 52 ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇವರೆಲ್ಲಾ ಗೆದ್ದಿದ್ದರೆ ಪಕ್ಷ ಸರಳ ಬಹುಮತದಿಂದ ಅಧಿಕಾರಕ್ಕೆ ಬರುತಿತ್ತು. ಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಜಾರಿಗೆ ಬರುವವರೆಗೆ ಬಿಡುವುದು ಬೇಡ. ಈಡೇರಿಸಲು ಆಗದೇ ಕಾಂಗ್ರೆಸ್ನವರೇ ಅಧಿಕಾರ ಬಿಟ್ಟು ಹೋಗಬೇಕು. ಆ ರೀತಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ. ಲಿಂಗಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ನವೀನ್, ಮಾಜಿ ಸಚಿವ ನಾಗೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ನಾಗರಾಜ್, ಕಲ್ಲೇಶ್, ಹರಿಹರ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.












Click it and Unblock the Notifications