ಒಂದು ಜನಾಂಗವನ್ನು ಹೀಗೆ ಎತ್ತಿಕಟ್ಟುವುದು ಸರಿಯಲ್ಲ; ಸಿದ್ದೇಶ್ವರ್
ದಾವಣಗೆರೆ, ಏಪ್ರಿಲ್ 20: "ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಖಂಡನೀಯ. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ನಮ್ಮನ್ನು ರಕ್ಷಣೆ ಮಾಡುವವರು. ಅವರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದು ವಿಷಾದಕರ" ಎಂದಿದ್ದಾರೆ ಸಂಸದ ಜಿ.ಎಂ ಸಿದ್ದೇಶ್ವರ್.
"ದಾವಣಗೆರೆಯಲ್ಲಿಯೂ ಮುಸ್ಲಿಂ ಬಾಂಧವರಿದ್ದಾರೆ. ಎಲ್ಲರೂ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಕೊರೊನಾ ಮಾರಕ ಸೋಂಕು. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು" ಎಂದು ಸಲಹೆ ನೀಡಿದರು.
"ಶಾಸಕ ಜಮೀರ್ ಅಹಮದ್ ಅವರು ಯಾವಾಗಲೂ ಸುಳ್ಳನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಅವರ ಮನೆ ವಾಚ್ ಮನ್ ಆಗುತ್ತೇನೆ ಎಂದಿದ್ದರು. ಇಂದಿನವರೆಗೂ ಆ ಮಾತು ನಡೆಸಿಲ್ಲ. ಸುಮ್ಮನೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಗರಂ ಆಗುವುದು ಸರಿಯಲ್ಲ. ಜನಾಂಗವನ್ನು ಎತ್ತಿಕಟ್ಟುವುದು ಒಳ್ಳೆಯದಲ್ಲ. ತಪ್ಪಿತಸ್ಥರ ಮೇಲೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ವಿಚಾರಣೆ ನಡೆಸಿ ಗೃಹ ಸಚಿವರು, ಸಿಎಂ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಹೇಳಿದರು.

ಈ ವೇಳೆ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಎಸ್.ಟಿ ವಿರೆಶ್, ರಾಕೇಶ್ ಜಾಧವ್ ಮತ್ತಿತರರಿದ್ದರು.












Click it and Unblock the Notifications