ಬಸವರಾಜ ಬೊಮ್ಮಾಯಿ ಆಡಳಿತ; ಸಚಿವರು ಹೇಳಿದ್ದೇನು?
ದಾವಣಗೆರೆ, ಅಕ್ಟೋಬರ್ 22; "ನಮ್ಮಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಉಳಿದವರು ಬಾಯಿ ಮುಚ್ಚಿಕೊಂಡು ಇರಬೇಕು ಅಷ್ಟೇ" ಎಂದು ಕ್ರೀಡಾ ಹಾಗೂ ಯುವಜನ, ರೇಷ್ಮೆ ಸಚಿವ ನಾರಾಯಣಗೌಡ ಹೇಳಿದರು.
ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂರು ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ನಾನು ಪ್ರಧಾನಿ ಅವರನ್ನು ಅಭಿನಂದಿಸುತ್ತೇನೆ. ಕೊರೊನಾ ಲಸಿಕೆ ಸಿಗಲ್ಲ ಎಂಬ ಟೀಕೆ ಟಿಪ್ಪಣಿ ಕೇಳಿ ಬಂದಿತ್ತು. ಬೇರೆ ದೇಶಕ್ಕೂ ಕೊಟ್ಟು, ನಮ್ಮ ದೇಶದವರಿಗೂ ಲಸಿಕೆ ನೀಡಲಾಗುತ್ತಿದೆ. ಚಿಕ್ಕಮಕ್ಕಳಿಗೂ ಲಸಿಕೆ ನೀಡಲು ಒಪ್ಪಿಗೆ ಸಿಕ್ಕಿದೆ" ಎಂದರು.
"ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಒಳ್ಳೆಯ ಕೆಲಸ ಮಾಡಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೇರೆಯವರು ಸುಮ್ಮನಿರಬೇಕು" ಎಂದು ಹೇಳಿದರು.
"ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಉಳಿದವರು ಬಾಯಿ ಮುಚ್ಚಿಕೊಂಡು ಇರಬೇಕು ಅಷ್ಟೇ. ಯಡಿಯೂರಪ್ಪ ಕೆ. ಆರ್. ಪೇಟೆ ಜನ್ಮಭೂಮಿಯ ಸುಪುತ್ರರು. ಚಿಕ್ಕಪುಟ್ಟ ಸಮಸ್ಯೆಗಳಾಗುತ್ತವೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ" ಎಂದು ನಾರಾಯಣಗೌಡ ತಿಳಿಸಿದರು.

"ನಾವು ಒಗ್ಗಟ್ಟಾಗಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ಕೂರಿಸಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಓಡಾಡಿ ಯಡಿಯೂರಪ್ಪ ಮುಂಬರುವ ದಿನಗಳಲ್ಲಿ 140 ರಿಂದ 150 ಸೀಟು ತರುತ್ತೇವೆ ಎಂದು ಹೇಳಿದ್ದಾರೆ. ಕಳೆದ 17 ವಿಧಾನಸಭಾ ಉಪಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಗೆಲ್ಲುವಲ್ಲಿ ಯಡಿಯೂರಪ್ಪರ ಶ್ರಮ ಬಹಳ ದೊಡ್ಡದಿದೆ. ಅವರ ನೇತೃತ್ವದಲ್ಲಿಯೇ ಮುನ್ನಡೆಯುತ್ತೇವೆ" ಎಂದು ಕೆ. ಸಿ. ನಾರಾಯಣ ಗೌಡ ಹೇಳಿದರು.
ಉಪ ಚುನಾವಣೆ; ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಅವರೆಲ್ಲಾ ಏನು ಎಲೆ, ಅಡಿಕೆ ಕೊಡುತ್ತಿದ್ದರೆ ಅಭಿನಂದಿಸುತ್ತೇನೆ. ಇಬ್ಬರ ಕಿತ್ತಾಟದಿಂದ ಸರ್ಕಾರವನ್ನೇ ಕಳೆದುಕೊಂಡವರು ಅವರು" ಎಂದು ವ್ಯಂಗ್ಯವಾಡಿದರು.
"ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಯಡಿಯೂರಪ್ಪರ ನೇತೃತ್ವದಲ್ಲಿ ನಡೆಯುತ್ತಿದೆ. ಕಠಿಣ ಇದೆ ಎಂದು ಹೇಳಿಲ್ಲ. ಒಂದು ವೇಳೆ ಹೇಳಿದ್ದರೂ ನಾವೆಲ್ಲರೂ ಹೆಚ್ಚಾಗಿ ಒಟ್ಟಾಗಿ ಇನ್ನೂ ಜಾಸ್ತಿ ಕೆಲಸ ಮಾಡಲಿ ಎಂಬ ಕಾರಣಕ್ಕೆ ಹೇಳಿರಬಹುದು" ಎಂದರು.
"ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು. ಆರ್ಎಸ್ಎಸ್ನಿಂದ ಕುಮಾರಸ್ವಾಮಿ ಪಾಠ ಕಲಿಯಬೇಕು ಎಂಬುದಷ್ಟೇ ನಾನು ಹೇಳುತ್ತೇನೆ. ಯಾವ ಬಗ್ಗೆ ಆರೋಪ ಮಾಡುವುದಕ್ಕೂ ಹೋಗುವುದಿಲ್ಲ. ಚುನಾವಣೆಯಲ್ಲಿ ಗಿಮಿಕ್ ಮಾಡಲಿಕ್ಕೆ ಕುಮಾರಸ್ವಾಮಿ ಈ ರೀತಿ ಮಾತನಾಡಿರಬಹುದು" ಎಂದು ಹೇಳಿದರು.
ಭೈರತಿ ಬಸವರಾಜು ವಿಶ್ವಾಸ; ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, "ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಈ ಕ್ಷೇತ್ರಗಳಲ್ಲಿ ನಾವೇ ಗೆಲ್ಲೋದು. ಎಲ್ಲಾ ಸುಲಲಿತವಾಗಿ ನಡೆಯುತ್ತಿದೆ. ಪಕ್ಷದ ನಾಯಕರೆಲ್ಲರೂ ಪ್ರಚಾರ ಮಾಡುತ್ತಿದ್ದೇವೆ. ಜನರ ಒಲವು ನಮ್ಮ ಕಡೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಎರಡೂ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಲಿದ್ದು, ಸಂಶಯವೇ ಬೇಡ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಿದೆ ಎಂಬುದಾಗಿ ಯಡಿಯೂರಪ್ಪರು ಎಲ್ಲಿಯೂ ಹೇಳಿಲ್ಲ. ಆಗ ಆ ರೀತಿ ಹೇಳಿರಬಹುದು. ಆದರೆ ಈಗ ಪರಿಸ್ಥಿತಿ ಬೇರೆನೇ ಇದೆ. ಜನರು ಖಂಡಿತವಾಗಿಯೂ ನಮ್ಮ ಪರವಾಗಿಯೇ ಇದ್ದಾರೆ" ಎಂದರು.












Click it and Unblock the Notifications