ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ. ಜಿ. ಈಶ್ವರಪ್ಪ ಸಂದರ್ಶನ
ದಾವಣಗೆರೆ, ಡಿಸೆಂಬರ್ 18: ಶಿಕ್ಷಣ ತಜ್ಞ, ಜಾನಪದ ವಿದ್ವಾಂಸ ಡಾ. ಎಂ. ಜಿ. ಈಶ್ವರಪ್ಪ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗು 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರನ್ನು ಜನರೂ ಈಗಲೂ 'ಈಶ್ವರಪ್ಪ ಮೇಷ್ಟ್ರು' ಎಂದೇ ಪ್ರೀತಿಯಿಂದ ಕರೆಯುತ್ತಾರೆ. 38 ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದಿರುವ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.
1950ರಲ್ಲಿ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯಲ್ಲಿ ಜನಿಸಿದ ಎಂ. ಜಿ. ಈಶ್ವರಪ್ಪ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎ, ಪಿಎಚ್ಡಿ ಮುಗಿಸಿದರು.
ಎಂ. ಜಿ. ಈಶ್ವರಪ್ಪ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಆದರೆ, ದಾವಣಗೆರೆ ಅವರ ಕಾರ್ಯಕ್ಷೇತ್ರವಾಯಿತು. 1987ರಿಂದ 90ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
2003ರಿಂದ 2006ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೆಂಬರ್ ಆಗಿ ಕೆಲಸ ನಿರ್ವಹಿಸಿದರು.

ಎಂ. ಜಿ. ಈಶ್ವರಪ್ಪ ಅವರು ಇಬ್ಬರು ಮಕ್ಕಳು ಇಂಜಿನಿಯರ್ಗಳು. ಪುತ್ರ ಪೃಥುವೈನ್ಯ ಅವರು ಹಿಂದೂಸ್ತಾನಿ ಸಂಗೀತಗಾರ. ಪುತ್ರಿ ಪತ್ರಲೇಖಾ ಹಾಗೂ ಪತ್ನಿ ಬಸಮ್ಮ ಅವರು ಈಶ್ವರಪ್ಪ ಅವರ ಯಶಸ್ಸಿಗೆ ಕೈಜೋಡಿಸಿದ್ದಾರೆ.
ಆರಂಭದಲ್ಲಿ ಡಿ. ಆರ್. ಎಂ ಕಾಲೇಜು ಆನಂತರ ಎಂ. ಎಸ್. ಬಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಈಶ್ವರಪ್ಪ ಅವರು ಬಳಿಕ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಸರಳ ಹಾಗೂ ಸಜ್ಜನಿಕೆಗೆ ಹೆಸರಾದ ಡಾ. ಎಂ. ಜಿ. ಈಶ್ವರಪ್ಪ ಅವರು ಒನ್ ಇಂಡಿಯಾದ ಜೊತೆ ಮಾತನಾಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ...
ಪ್ರಶ್ನೆ: ಶಿಕ್ಷಕನಾಗಬೇಕೆಂಬ ಒಲವು ಏಕೆ ಬಂತು?
ಈಶ್ವರಪ್ಪ : ಮೊದಲಿನಿಂದಲೂ ಶಿಕ್ಷಕನಾಗಬೇಕು ಎಂಬ ಆಸೆ ಇತ್ತು. ಪ್ರೌಢಶಾಲೆಯಲ್ಲಿದ್ದಾಗಲೇ ರಾಘವೇಂದ್ರರಾವ್ ಅವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ಅವರೇ ನನಗೆ ಪ್ರೇರಣೆ. ನನ್ನನ್ನು ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿ ಪೆನ್ ಅನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದ್ದರು. ಆಗಲೇ ನಾನು ಒಳ್ಳೆಯ ಮೇಷ್ಟ್ರಾಗಬೇಕು ಎಂದು ನಿರ್ಧರಿಸಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ಸಾ. ಶಿ. ಮರುಳಯ್ಯ, ಡಾ. ಸಿದ್ದಲಿಂಗಯ್ಯ, ಎಂ. ಆರ್. ಶಾಸ್ತ್ರಿ, ಅಬ್ದುಲ್ ಕಯ್ಯೂಬ್, ಮಾನಸ ಗಂಗೋತ್ರಿಯಲ್ಲಿ ಎಂಎ ಓದುತ್ತಿದ್ದಾಗ ಡಾ. ಎಲ್. ಬಸವರಾಜು, ಡಾ. ಹಾ. ಮ. ನಾಯಕ, ಎಚ್. ಎಂ. ಚನ್ನಯ್ಯ, ಸಿ. ಪಿ. ಕೃಷ್ಣಕುಮಾರ್, ವರದರಾಜ ರಾವ್, ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರಂತಹ ಮೇಧಾವಿ ಮೇಷ್ಟರ ಸಾಲು ಇತ್ತು. ಪಿಜಿ ಡಿಪ್ಲೊಮಾ ಇನ್ ಇಂಗ್ಲಿಷ್ ಸೇರಿದ ಮೇಲೆ ಡಾ. ಯು. ಆರ್. ಅನಂತಮೂರ್ತಿ ಅವರ ಶಿಷ್ಯನಾದೆ. ಅಂದಿನಿಂದಲೂ ಮೇಷ್ಟ್ರಾಗುವ ತುಡಿತ ಇತ್ತು.
ಪ್ರಶ್ನೆ : ಬೋಧನೆ ಖುಷಿ ತಂದ್ದಿದಿಯಾ ?
ಈಶ್ವರಪ್ಪ : ನನಗೆ ಪಾಠ ಮಾಡುವುದು ಎಂದರೆ ಖುಷಿ. ಪಂಪ, ರನ್ನ, ಬಸವಣ್ಣ, ಕುವೆಂಪು ಅವರ ಪದ್ಯಗಳು, ಕಾದಂಬರಿಗಳು, ಕಥೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದೆ. ವಿದ್ಯಾರ್ಥಿಗಳಿಂದ ತಕ್ಷಣ ಸಿಗುತ್ತಿದ್ದ ಪ್ರತಿಕ್ರಿಯೆಯಿಂದ ಬಹಳ ಸಂತೋಷವಾವಾಗುತ್ತಿತ್ತು. ಇದಕ್ಕೆ ಪೂರಕವಾಗಿಯೇ ನನ್ನ ಕೆಲಸಗಳು ನಡೆಯುತ್ತಿವೆ. ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ನಾನು ಅವುಗಳನ್ನು ಬೋಧನೆಗೆ ಬಳಸಿಕೊಳ್ಳುತ್ತಿದೆ. ಸಮಾಜ ಸುಧಾರಣೆ ಹಾಗೂ ಸ್ವಸ್ಥ ಬದುಕಿನ ಮನರಂಜನೆಗೆ ರಂಗಭೂಮಿಯನ್ನು ಬಳಸಿಕೊಳ್ಳುತ್ತಿದ್ದೆ.
ಪ್ರಶ್ನೆ : ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯೆ?
ಈಶ್ವರಪ್ಪ : ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಸಾಪ ಹಾಗೂ ಪ್ರತಿಮಾ ಸಭಾಗಳಲ್ಲಿ ಕನ್ನಡದ ಕೆಲಸ ಮಾಡಲು ಇನ್ನಷ್ಟು ಪ್ರೇರಣೆ ದೊರೆತಿದೆ. ರಂಗಭೂಮಿಯಲ್ಲೂ ಕನ್ನಡದ ಕೆಲಸ ಮಾಡುತ್ತಿದ್ದೇನೆ. ಕನ್ನಡದ ನಾಟಕಗಳು ನಡೆಯುತ್ತಿವೆ.
ಜಾನಪದದಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಜವಾಬ್ದಾರಿಯನ್ನು ಇತರರ ಜೊತೆ ಹಂಚಿಕೊಂಡು ಮುಂದೆ ಸಾಗುತ್ತೇನೆ. ನಾಟಕಗಳನ್ನು ಆಡುವುದು ದೊಡ್ಡ ಅನುಭವ. ಲಂಕೇಶ್, ಚಂಪಾ, ಕಾರ್ನಾಡರ ನಾಟಕಗಳನ್ನು ಆಡಿಸುವುದಕ್ಕೆ ಶ್ರಮ ಹಾಗೂ ಸಂಘಟನೆ ಬೇಕು. ಪ್ರೇಕ್ಷಕರಲ್ಲಿ ಅಭಿರುಚಿ ಮೂಡಿಸುವುದು ಶ್ರಮದ ಜೊತೆಗೆ ಸಂತೋಷ ನೀಡುತ್ತದೆ.












Click it and Unblock the Notifications