ನನ್ನ ಮೇಲೆ ತೂಗುಕತ್ತಿ ತೂಗ್ತಾ ಇದೆ, ಆದ್ರೂ ಯಾವುದಕ್ಕೂ ಹೆದರಲ್ಲ: ಸ್ವಪಕ್ಷೀಯರ ವಿರುದ್ಧ ರೇಣುಕಾಚಾರ್ಯ ಕಿಡಿ
ದಾವಣಗೆರೆ, ಸೆಪ್ಟೆಂಬರ್ 10: ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನ ಮೇಲೆ ತೂಗುಕತ್ತಿ ತೂಗುತ್ತಾ ಇದೆ. ನೊಟೀಸ್ಗೆ ಉತ್ತರ ಕೊಡುವುದಿಲ್ಲ. ಗ್ರಾಮ ಪಂಚಾಯಿತಿ ಗೆಲ್ಲೋಕೆ ಆಗದೇ ಇರುವವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ನಮ್ಮ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಉಚ್ಚಾಟನೆ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆದ ಮೇಲೆ ಬಿ.ಎಸ್ ಯಡಿಯೂರಪ್ಪ ಅವರನ್ನು ಈಗ ಮುಂದೆ ತಂದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಯಡಿಯೂರಪ್ಪ ನೋಡದ ಹಳ್ಳಿ ಇಲ್ಲ. ಗ್ರಾ.ಪಂ ಗೆಲ್ಲೋಕೆ ಆಗದೇ ಇರುವುದು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದರು.

ಈಗ ಮತ ಬೇಕು ಅಂತ ಬಿಎಸ್ ಯಡಿಯೂರಪ್ಪ ನಾಯಕತ್ವ ಎಂದು ಹೇಳುತ್ತಿದ್ದಾರೆ. ನಾನು ಕೂಡ ಎಂಪಿ ಚುನಾವಣೆಯ ಟಿಕೆಟ್ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ.ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನ ಹೋರಾಟ ಯಾರ ವಿರುದ್ಧ ಕತ್ತಿ ಮಸಿಯೋಕೆ ಅಲ್ಲ. ಸಂಘಟನೆ ಉಳಿಯೋಕೆ ಕೆಲಸ ಮಾಡುತ್ತೇನೆ ಎಂದರು.
ಮಾಡಾಳು ವಿರುಪಾಕ್ಷಪ್ಪರನ್ನು ಭೇಟಿ ಮಾಡುತ್ತೇನೆ. ನನ್ನ ಬಗ್ಗೆ ರೆಬೆಲ್ ರೇಣುಕಾಚಾರ್ಯ ಎಂದು ಕರೆದುಕೊಳ್ಳಲಿ ನಾನು ಹೆದರುವುದಿಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಿ. ಈಗ ನಿಮಗೆ ಯಡಿಯೂರಪ್ಪ ಬೇಕಿದೆ ಎಂದು ಗರಂ ಆದರಲ್ಲದೇ, ಮಾಜಿ ಶಾಸಕ ಗುರುಸಿದ್ದನಗೌಡ ಉಚ್ಚಾಟನೆ ಕುರಿತು ಮಾತನಾಡಿದ ಅವರು ನೋಟೀಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ ಎಂದಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಓಡಾಟ ಮಾಡಿ ಪಕ್ಷ ಕಟ್ಟಿದವರು ಗುರುಸಿದ್ದನಗೌಡ್ರು. ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ದ ಕೆಲಸ ಮಾಡಿದರೆ ನೋಟೀಸ್ ನೀಡಬೇಕು. ಆದರೆ ಯಾವುದೇ ನೊಟೀಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡ್ರನ್ನು ಕುಟುಂಬಸ್ಥರನ್ನು ಉಚ್ಚಾಟನೆ ಮಾಡಿದ್ದಾರೆ. ಡಾ.ರವಿಕುಮಾರ್ ಕೂಡ ಲೋಕಾಸಭಾ ಚುನಾವಣೆ ಟಿಕೆಟ್ ಅಕಾಂಕ್ಷಿ. ಅವರು ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದು ಖಂಡನೀಯ ಎಂದು ಹೇಳಿದರು.
ಮಾಜಿ ಸಚಿವ ರವೀಂದ್ರನಾಥ, ಮಾಜಿ ಶಾಸಕ ಗುರುಸಿದ್ದನಗೌಡ್ರು ಅಂತವರನ್ನು ಮೂಲೆಗುಂಪು ಮಾಡುತ್ತಾರೆ. ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ. ಸಚಿವ ಸ್ಥಾನ ತಪ್ಪಿಸಿದರು. ಏಕಪಕ್ಷೀಯವಾಗಿ ಜಿಲ್ಲಾ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.
ದೇಶಕ್ಕೆ ನರೇಂದ್ರ ಮೋದಿ ಹೇಗೋ ರಾಜ್ಯಕ್ಕೆ ಯಡಿಯೂರಪ್ಪ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ಮಹಾನ್ ನಾಯಕ. ವ್ಯವಸ್ಥಿತವಾಗಿ ಯಡಿಯೂರಪ್ಪ ನವರನ್ನು ಇಳಿಸುವ ಕೆಲಸ ಮಾಡಿದ್ದರು. ನಮ್ಮವರೇ ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು ಎಂದು ರಾಜ್ಯ ಮುಖಂಡರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications