ದಾವಣಗೆರೆ: ದೇಶದೆಲ್ಲೆಡೆ ಸದ್ದು ಮಾಡುತ್ತಿದೆ ಶಾಲಾ ಮಕ್ಕಳು ರಚಿಸಿದ "ವರ್ಲ್ಡ್ ಕಪ್ ನಮ್ಮದು" ವಿಡಿಯೋ
ದಾವಣಗೆರೆ, ಅಕ್ಟೋಬರ್, 22: ವಿಶ್ವಕಪ್ ಕ್ರಿಕೆಟ್ ಜ್ವರ ಎಲ್ಲೆಡೆ ಶುರುವಾಗಿದೆ. ದಾವಣಗೆರೆಯ ಸಿದ್ಧಗಂಗಾ ವಿದ್ಯಾರ್ಥಿಗಳು ರೂಪಿಸಿರುವ ವರ್ಲ್ಡ್ ಕಪ್ ನಮ್ಮದು ಎಂಬ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಜಗತ್ತಿನಾದ್ಯಂತ 2023ರ ಐಸಿಸಿ ಪುರುಷರ ವರ್ಲ್ಡ್ ಕಪ್ ಬಗ್ಗೆ ಕುತೂಹಲ ಮೂಡುತ್ತಿದೆ. ಭಾರತದ ವಿವಿಧ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಕ್ರಿಕೆಟ್ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ಗೆಲುವಿಗಾಗಿ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳು ಶುಭ ಕೋರುತ್ತಿದ್ದಾರೆ. 12 ವರ್ಷಗಳ ಹಿಂದೆ ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯ ಮಕ್ಕಳು ಕ್ರಿಕೆಟ್ ಗೆಲುವಿಗಾಗಿ ಸಮರ್ಪಿಸಿದ್ದ, "ಗೆದ್ದು ಬಾ ಇಂಡಿಯಾ" ಹಾಡಿನ ಮೂಲಕ ಶುಭ ಹಾರೈಸಿ ಕ್ಯಾಪ್ಟನ್ ಧೋನಿ ತಂಡದವರು ಕ್ರಿಕೆಟ್ ವರ್ಲ್ಡ್ ಕಪ್ ತಮ್ಮದಾಗಿಸಿಕೊಂಡಾಗ ಕುಣಿದು ಕುಪ್ಪಳಿಸಿದ್ದರು.

ಈಗ ಮತ್ತೊಮ್ಮೆ ಗೆಲುವಿಗಾಗಿ ತಮ್ಮ ಉತ್ತೇಜನಾ ಪೂರ್ವಕ ಹಾಡು ವರ್ಲ್ಡ್ ಕಪ್ ನಮ್ಮದು ಎಂದು ಹಾಡಿ ಕುಣಿದು ಸ್ಪೂರ್ತಿ ತುಂಬುತ್ತಿದ್ದಾರೆ. ಈ ಸ್ಪೂರ್ತಿದಾಯಕ ವಿಡಿಯೋ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ. ನಿನ್ನೆ ತಮ್ಮ ಕಛೇರಿಯಲ್ಲಿ ವಿಡಿಯೋ ಬಿಡುಗಡೆಗೊಳಿಸಿ ಸಂಭ್ರಮ ಹಂಚಿಕೊಂಡ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ರ ಅವರು, ಸಿದ್ಧಗಂಗಾ ಮಕ್ಕಳ ಕ್ರಿಯಾಶೀಲತೆಗೆ, ಕ್ರೀಡಾ ಮನೋಭಾವಕ್ಕೆ ಶ್ಲಾಘನೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಮಕ್ಕಳ ಸಾಮರ್ಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು.
ಸಿದ್ದಗಂಗಾ ಸ್ಕೂಲ್ನ YouTubeಚಾನಲ್ ವೀಕ್ಷಣೆಯ ಮೂಲಕ ಹದಿನೈದು ಸಾವಿರಕ್ಕೂ ಹೆಚ್ಚು ವೀಕ್ಷಕರು ವೀಡಿಯೋ ವೀಕ್ಷಿಸಿ ತಮ್ಮ ಕ್ರಿಕೆಟ್ ಪ್ರೇಮದ ಮೂಲಕ ಭಾರತ ತಂಡವನ್ನು ಬೆಂಬಲಿಸುತ್ತಿದ್ದಾರೆ. ಡಾ.ಜಯಂತ್ ಅವರ ಪರಿಕಲ್ಪನೆ, ನಿರ್ದೇಶನ, ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ "ವರ್ಲ್ಡ್ ಕಪ್ ನಮ್ಮದು" ಹಾಡಿಗೆ ಮಾನಸ ವಿ.ಎಸ್ ಮತ್ತು ಪ್ರಶಾಂತ್ ಅವರು ಧ್ವನಿ ನೀಡಿದ್ದಾರೆ. ಕೊರಿಯೋಗ್ರಫಿ ಸುಮನ್ರವರದು.
ರೈಸಿಂಗ್ ಟ್ಯಾಲೆಂಟ್ ಸ್ಟುಡಿಯೋದ ಸಿಕಂದರ್ ಅವರು ರೆಕಾರ್ಡಿಂಗ್ ಮಾಡಿದ್ದಾರೆ. ಸಮೀರ್ನ ಅತ್ಯದ್ಭುತ ಕ್ಯಾಮೆರಾ ವರ್ಕ್ ಹಾಗೂ ಎಡಿಟಿಂಗ್ ಈ ವಿಡಿಯೋದ ಹೈಲೈಟ್. ಕಿರಿಯ, ಹಿರಿಯ ವಿದ್ಯಾರ್ಥಿಗಳೇ ಸೇರಿ ಮಾಡಿರುವ ಈ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಲೆಯ 2,000 ವಿದ್ಯಾರ್ಥಿಗಳು ಈ ವಿಡಿಯೋ ರೆಕಾರ್ಡಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ವೀಡಿಯೋಗಾಗಿ ಯಕ್ಷಗಾನ ಮೇಕಪ್ ಮಾಡಿದವರು ಹಟ್ಟಿಯಂಗಡಿ ಆನಂದ ಶೆಟ್ಟರು ಮತ್ತು ಬೇಳೂರು ಸಂತೋಷ್ ಶೆಟ್ಟರು. ಬೃಂದಾ ಮತ್ತು ಶಾಲಾ ಕಾಲೇಜಿನ ಶಿಕ್ಷಕ ಮತ್ತು ಪಾಲಕರು ಮಕ್ಕಳನ್ನು ವೈವಿಧ್ಯಮಯ ಉಡುಪುಗಳಿಂದ ಸಿಂಗಾರಗೊಳಿಸಿ ಹಾಡಿನ ಮೆರುಗು ಹೆಚ್ಚಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಅವರ ಜೊತೆಗೆ ಹಿರಿಯ ವಿದ್ಯಾರ್ಥಿಗಳಾದ ಹರ್ಷ, ಮನು, ಸಾಮ್ರಾಟ್, ನರೇಂದ್ರರವರು ಈ ವಿಡಿಯೋ ಚಿತ್ರೀಕರಣದಲ್ಲಿ ಸಹಕರಿಸಿದ್ದಾರೆ.
ಮಕ್ಕಳೇ ಮಾಡಿರುವ ಈ ವೀಡಿಯೋ ವೀಕ್ಷಿಸಿ ಭಾರತ ತಂಡವನ್ನು ಉತ್ತೇಜಿಸಿ. ಈ ಬಾರಿಯ ವರ್ಲ್ಡ್ ಕಪ್ ಭಾರತ ಗೆಲ್ಲುವುದು ಖಂಡಿತ ಎಂಬುದು ಎಲ್ಲರ ವಿಶ್ವಾಸ.
ಅಂದಾಜು ವೆಚ್ಚ 40 ಸಾವಿರ ರೂಪಾಯಿ ವೆಚ್ಚದಲ್ಲಿ ಶ್ರೀ ಸಿದ್ಧಗಂಗಾ ಶಾಲಾ ಆವರಣ, ಎಂ.ಎಸ್.ಎಸ್ ಸ್ಮಾರಕ ಆನಗೋಡು, ಕೊಂಡಜ್ಜಿಯ ಎಂಎಸ್ಎಸ್ ತರಬೇತಿ ಕೇಂದ್ರದಲ್ಲಿ ಶೂಟಿಂಗ್ ಮಾಡಲಾಗಿದೆ.
ಡಾ. ಜಯಂತ್ ಸಂಗೀತ ನೀಡಿದ್ದರೆ, ವಿ.ಎಸ್.ಮಾನಸ ಮತ್ತು ಪ್ರಶಾಂತ್ ಹಾಡಿದ್ದಾರೆ. ಸಮೀರ ಮತ್ತು ವಸಂತ ವಿಡಿಯೋ ಚಿತ್ರೀಕರಿಸಿದ್ದು, ಸಮೀರ ಎಡಿಟಿಂಗ್ ಮಾಡಿದ್ದು, ಸುಮನ್ ಅವರ ಕೋರಿಯಾಗ್ರಫಿ ಇದೆ. ರೈಸಿಂಗ್ ಟ್ಯಾಲೆಂಡ್ ಸ್ಟುಡಿಯೋ ಸಹಕಾರ ಇದೆ ಎಂದು ಸಿದ್ದಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ ಡಿ ಸೌಜ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ ಡಿ ಸೌಜ, ನಿರ್ದೇಶಕ ಡಾ. ಜಯಂತ್, ಹಿರಿಯ ವಿದ್ಯಾರ್ಥಿ ವಿ. ಎಸ್. ಮಾನಸ, ಮನು, ಮನುಶ್ರೀ, ಪಾಲಕರಾದ, ಸಿಕಂದರ, ವಿದ್ಯಾರ್ಥಿಗಳಾದ ಸಮೀರ್, ಸಿಂಚನ, ಲಾಸ್ಯ, ಧನುಶ್ರೀ ನಾಡಿಗೇರ್ ಇವರು ಹಾಜರಿದ್ದರು.











Click it and Unblock the Notifications