ದಾವಣಗೆರೆ: ಕಂಟೈನ್ಮೆಂಟ್ ವಲಯದಲ್ಲಿ ಹೆಚ್ಚಿದ ಕೊರೊನಾ ಸೋಂಕಿತರು
ದಾವಣಗೆರೆ, ಮೇ 31: ದಾವಣಗೆರೆ ನಗರದ ಕಂಟೈನ್ಮೆಂಟ್ ವಲಯಗಳಲ್ಲೇ ಹೆಚ್ಚಿನ ಕೊರೊನಾ ವೈರಸ್ ಸೋಂಕಿತರು ಕಂಡುಬಂದಿದ್ದಾರೆ. ಕಂಟೈನ್ಮೆಂಟ್ ವಲಯದಲ್ಲಿ ಸೋಂಕಿತರ ಸಂಪರ್ಕದಿಂದ ಕೊರೊನೊ ವೈರಸ್ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 17 ಕ್ಕೆ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಸಂಜೆ ಬಂದ ವರದಿಯಂತೆ ದಾವಣಗೆರೆ ನಗರದಲ್ಲಿ 150 ಕೊರೊನಾ ವೈರಸ್ ಸೋಂಕಿತರಿದ್ದಾರೆ. ದಾವಣಗೆರೆಯ ಕೋವಿಡ್ ಆಸ್ಪತ್ರೆಯಿಂದ ಒಟ್ಟು 104 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಂಟೈನ್ಮೆಂಟ್ ಪ್ರದೇಶದಲ್ಲಿ ಸೋಂಕಿತರು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ವ್ಯಾಪಕ ಫ್ಲೂ ಸರ್ವೇ ಮಾಡಲಾಗುತ್ತಿದೆ. ಜಾಲಿ ನಗರವೊಂದರಲ್ಲೇ ಸುಮಾರು 77 ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಪತ್ತೆಯಾಗಿವೆ.

ದಾವಣಗೆರೆಯ ಹಳೇ ಭಾಗದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕು ಕಳೆದ ಕೆಲ ದಿನಗಳಿಂದ ನಗರದ ಪ್ರತಿಷ್ಠಿತ ಬಡಾವಣೆಗಳಿಗೂ ಹಬ್ಬಿದೆ. ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆ , ತರಳಬಾಳು ನಗರ, ಬಸವರಾಜ ಪೇಟೆ , ಶೇಖರಪ್ಪ ಬಡಾವಣೆ ಹೊಸ ಕಂಟೈನ್ಮೆಂಟ್ ವಲಯಗಳಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಸಕ್ರೀಯ ಪ್ರಕರಣಗಳಿವೆ.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೆರೆಬಿಳಚಿ ಗ್ರಾಮಸ್ಥರು
ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮದ ಇಬ್ಬರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಈ ಗ್ರಾಮದ ಇಬ್ಬರು ಯುವಕರಿಗೆ ಸೋಂಕು ಪತ್ತೆ ಆಗಿತ್ತು. ಮಹಾರಾಷ್ಟ್ರದಿಂದ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ನಂತರ ಅವರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ವರದಿಯಲ್ಲಿ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೆರೆಬಿಳಚಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಇದೀಗ ಗ್ರಾಮದ ಸೋಂಕಿತರಿಬ್ಬರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇದರಿಂದಾಗಿ ಕಂಟೈನ್ಮೆಂಟ್ ವಲಯ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications