Darshan Thoogudeepa: ಹೊನ್ನಾಳಿ-ನ್ಯಾಮತಿಯಲ್ಲಿ ರೇಣುಕಾಚಾರ್ಯ ಪರ ಡಿ ಬಾಸ್ ಭರ್ಜರಿ ಮತಬೇಟೆ, ನೆರೆದ ಅಭಿಮಾನಿಗಳ ದಂಡು
ದಾವಣಗೆರೆ, ಮೇ, 06: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ನಾಯಕರ ಪರ ಕನ್ನಡ ಸಿನಿ ರಂಗವೇ ಪ್ರಚಾರಕ್ಕಿಳಿದಿದೆ. ಅದೇ ರೀತಿ ಹೊನ್ನಾಳಿ - ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಪಿ.ರೇಣುಕಾಚಾರ್ಯರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ದರ್ಶನ್ ಅವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.
ಹೊನ್ನಾಳಿ - ನ್ಯಾಮತಿ ವಿಧಾನಸಭಾ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿದೆ. ಶುಕ್ರವಾರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಪರ ಪ್ರಚಾರ ನಡೆಸಿದ್ದರು. ಈ ವೇಳೆ ರೇಣುಕಾಚಾರ್ಯ ವಿರುದ್ಧ ವಾಗ್ಬಾಣಗಳ ಸುರಿಮಳೆಗೈದಿದ್ದರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು. ಹಾಗೆಯೆ ಇಂದು ದರ್ಶನ್ ಅವರನ್ನು ಕರೆಯಿಸಿ ರೋಡ್ ಶೋ ನಡೆಸುವ ಮೂಲಕ ತಿರುಗೇಟು ನೀಡುವ ಪ್ರಯತ್ನವನ್ನು ರೇಣುಕಾಚಾರ್ಯ ಮಾಡಿದರು.

ರೇಣುಕಾಚಾರ್ಯ ಪತ್ನಿ, ಪುತ್ರಿ ಹಾಗೂ ಪುತ್ರರ ಜೊತೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ವೇಳೆ ಜನಜಂಗುಳಿಯೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ದರ್ಶನ್ ಪರ ಘೋಷಣೆಗಳು ಮುಗಿಲು ಮುಟ್ಟಿದವು. ನೆಚ್ಚಿನ ನಟನನ್ನು ನೋಡಲು ಹಳ್ಳಿ ಹಳ್ಳಿಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ದರ್ಶನ್ ಮಾತನಾಡಿದರೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಜೈಕಾರ ಮೊಳಗಿತ್ತು.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ನಟ ದರ್ಶನ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಜನರ ಪರವಾಗಿ ಕೆಲಸ ಮಾಡುವ ರೇಣುಕಾಚಾರ್ಯ ಅವರನ್ನು ಗೆಲ್ಲಿಸಿ. ಅವರಿಗೆ ಮತ ನೀಡುವ ಮೂಲಕ ಜಯಶಾಲಿಯಾಗುವಂತೆ ಮಾಡಿ ಎಂದು ಮನವಿ ಮಾಡಿದರು.
ಕೊರೊನಾ ಸಂದರ್ಭದಲ್ಲಿ ನಿಮ್ಮ ಜೊತೆ ಯಾರು ಇದ್ದರು. ಆಂಬುಲೆನ್ಸ್, ಕೊರೊನಾ ಲಸಿಕೆ, ಆಕ್ಸಿಜನ್ ಸೇರಿದಂತೆ ಜನರ ಮಧ್ಯೆಯೇ ಇದ್ದು ರೇಣುಕಾಚಾರ್ಯ ಸೇವೆ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನಿಮಗಾಗಿ ಕೆಲಸ ಮಾಡುತ್ತಾರೆ. ಅಧಿಕಾರ ಇಲ್ಲದಿದ್ದರೂ ಬಡವರು, ಮತದಾರರಿಗಾಗಿ ಸೇವೆ ಮಾಡಿದರು. ಇಷ್ಟು ಸೇವೆ ಮಾಡಿದವರನ್ನು ನೋಡಿದ್ದು ಕಡಿಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉತ್ತಮವಾಗಿ ಕೆಲಸ ಮಾಡಿದವರು ರೇಣುಕಾಚಾರ್ಯ ಅವರು. ನಿಮಗೆ ಸ್ಪಂದಿಸುವಂತಹ ಜನಪ್ರತಿನಿಧಿಯನ್ನು ಗೆಲ್ಲಿಸಿ. ಯಾವುದೇ ಕಾರಣಕ್ಕೂ ತಪ್ಪು ಮಾಡಲು ಹೋಗಬೇಡಿ. ಆದರೆ ಮಾನವೀಯತೆಯುಳ್ಳ ರೇಣುಕಾಚಾರ್ಯ ಅವರನ್ನು ಭರ್ಜರಿ ಮತಗಳ ಅಂತರದಿಂದ ಗೆಲ್ಲಿಸುತ್ತೀರಾ ಎಂದುಕೊಂಡಿದ್ದೇನೆ ಎಂದರು.
ನ್ಯಾಮತಿಯಲ್ಲೂ ಡಿ ಬಾಸ್ ಹವಾ
ಇನ್ನು ನ್ಯಾಮತಿ ಪಟ್ಟಣದಲ್ಲಿಯೂ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹವಾ ಜೋರಾಗಿತ್ತು. ಚುನಾವಣಾ ಪ್ರಚಾರದ ರೋಡ್ ಶೋ ದಲ್ಲಿ ಪಾಲ್ಗೊಂಡು ರೇಣುಕಾಚಾರ್ಯರ ಪರ ಮತಯಾಚಿಸಿದರು. ಈ ಸಂಧರ್ಭದಲ್ಲಿ ಸಹಸ್ತ್ರಾರು ಸಂಖ್ಯೆಯಲ್ಲಿ ಕ್ಷೇತ್ರದ ಜನರು, ದರ್ಶನ್ ಅಭಿಮಾನಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಇನ್ನು ಹೊನ್ನಾಳಿ ಮತ್ತು ನ್ಯಾಮತಿ ಪಟ್ಟಣದಲ್ಲಿ ರೋಡ್ ಶೋ ಹೋಗುವ ಮಾರ್ಗದುದ್ದಕ್ಕೂ ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಯುವಕರಂತೂ ದರ್ಶನ್ ಕೈ ಬೀಸುತ್ತಿದ್ದಂತೆ ಹುಚ್ಚೆದ್ದು ಕುಣಿದರು. ಅಲ್ಲದೆ ಡಿ ಬಾಸ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ಹೊನ್ನಾಳಿ ಹುಲಿ ರೇಣುಕಾಚಾರ್ಯ, ಜೈ ಜೈ ಬಿಜೆಪಿ ಎಂಬ ಘೋಷಣೆಗಳನ್ನು ಮೊಳಗಿಸಿದರು.












Click it and Unblock the Notifications