ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್: ಅರುಣ್ ಸಿಂಗ್
ದಾವಣಗೆರೆ, ನವೆಂಬರ್ 9: ''ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಸ್ಐ, ಶಿಕ್ಷಕರ ನೇಮಕಾತಿ ಸೇರಿದಂತೆ ಹಲವು ರೀತಿಯ ಹಗರಣಗಳು ಆಗಿವೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಇದನ್ನು ಸಹಿಸದೇ ಕಾಂಗ್ರೆಸ್ ಆಧಾರರಹಿತ ಆರೋಪ ಮಾಡುತ್ತಿದೆ. ಯಾವ ವಿಷಯಗಳು ಇಲ್ಲದ ಕಾರಣ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ದೇಶಾದ್ಯಂತ ಬಿಜೆಪಿ ಪರ ಅಲೆ ಇದೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಿದೆ. ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಿಮಾಚಲ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಸಂಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲಿ 150 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸತೀಶ್ ಜಾರಕಿಹೊಳಿ ಬಹುಶಃ ಇತಿಹಾಸ ಓದಿಲ್ಲ: ಬಿ.ಸಿ ಪಾಟೀಲ್
40 ಪರ್ಸಂಟೈಸ್ ಆರೋಪ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಯಾಕೆ ತೆಗೆದಿದ್ದು? ಎಂದು ಕಿಡಿ ಕಾರಿದ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ ಅಂದ್ರೆ ಕಾಮನ್ ಮ್ಯಾನ್. ರೈತರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. ರೈತರ ಮಕ್ಕಳಿಗೆ ಶಿಷ್ಯವೇತನ ನೀಡಿದ್ದಾರೆ. ಸಿಎಂ ವಿರುದ್ಧ ಆರೋಪ ಮಾಡಿದರೆ ಅದು ಜನ ಸಾಮಾನ್ಯರ ವಿರುದ್ಧ ಆರೋಪ ಮಾಡಿದಂತೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಬಡ ಜನತೆಗೆ ನೀಡುವ ಅನ್ನ ಭಾಗ್ಯದ ಅಕ್ಕಿಯಲ್ಲಿ ಸಹ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ದಾವಣಗೆರೆ ರಾಜಕೀಯ ನಾಯಕರಿಗೆ ಇಷ್ಟವಾದ ತಾಣ
ದಾವಣಗೆರೆ ಎಲ್ಲಾ ನಾಯಕರಿಗೂ ಇಷ್ಟವಾದ ತಾಣ. ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಹೊರತಲ್ಲ. ದಾವಣಗೆರೆಗೆ ಯಾವಾಗ ಬರುತ್ತಾರೆ ಎಂಬ ದಿನಾಂಕ ನಿಗದಿಯಾಗಿಲ್ಲ ಎಂದ ಅರುಣ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಹಾಗೂ ಅತ್ಯುತ್ತಮ ಕೆಲಸಗಳು ಆಗುತ್ತಿವೆ. ಆಯುಷ್ಮಾನ್ ಭಾರತ್, ರೈತರಿಗೆ ಅನುಕೂಲ ಸೇರಿದಂತೆ ಜನಪರವಾದ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಹಿಂದೂಗಳ ಭಾವನೆಗೆ ಧಕ್ಕೆ: ಸತೀಶ್ ಜಾರಕಿಹೊಳಿ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ
ಜಾರಕಿಹೊಳಿ ಮುನಿಸು ಬಗ್ಗೆ ಮಾಹಿತಿಯಿಲ್ಲ
ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಜೊತೆ ಮುನಿಸಿಕೊಂಡಿದ್ದಾರೆ, ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹವಿದೆ ಎಂದು ಕೇಳಿದ್ದಕ್ಕೆ ಉತ್ತರ ನೀಡಲು ನಿರಾಕರಿಸಿದ ಅರುಣ್ ಸಿಂಗ್, ಈ ಬಗ್ಗೆ ನನಗೆ ಮಾಹಿತಿ ಇಲ್ಲಾ ಎಂದು ಹೇಳಿದರು.
ಎಲ್ಲಾ ಸೇರಿ ಪಕ್ಷ ಕಟ್ಟುತ್ತೇವೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ. ಈ ನಿಟ್ಟಿನಲ್ಲಿ ಭೇಟಿಯಾಗಿದ್ದೆ. ಕಾರ್ಯಕರ್ತರು, ಮುಖಂಡರೂ ಸಹ ಬಿಜೆಪಿ ಬಲಿಷ್ಠಗೊಳಿಸಲು ಶ್ರಮಿಸುತ್ತೇವೆ ಎಂದು ಹೇಳಿದರು. ಇನ್ನು ಜನಾರ್ದನ ರೆಡ್ಡಿ ಅವರ ಕುರಿತಂತೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಪ್ರಶ್ನೆಗಳು ಜಾಸ್ತಿಯಾದವು ಎಂದು ಹೇಳಿದರು.
ಯತ್ನಾಳ್ ನಮ್ಮ ನಾಯಕರಲ್ಲ ಎಂದಿದ್ದ ಅರುಣ್
ಯಡಿಯೂರಪ್ಪ ಹಾಗೂ ವಿಜಯೇಂದ್ರ ಸೇರಿದಂತೆ ಕೆಲವು ಬಿಜೆಪಿ ನಾಯಕರ ವಿರುದ್ಧ ಬಸನಗೌಡ ಪಾಟೀಲ್ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದರು. ಈ ಕುರಿತು ಜನಸಂಕಲ್ಪ ಯಾತ್ರೆಯ ವೇಳೆ ಪ್ರತಿಕ್ರಿಯಿಸಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ನಮ್ಮ ನಾಯಕರಲ್ಲ, ಅವರು ಪಕ್ಷದ ನೀತಿ ನಿರೂಪಣೆ ಸಮಿತಿಯ ಸದಸ್ಯರಲ್ಲ, ಅವರೊಬ್ಬ ಶಾಸಕ, ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.