MP Renukacharya : ಚಂದ್ರು ಶವ ಪತ್ತೆ; ರೇಣುಕಾಚಾರ್ಯ ಕುಟುಂಬಸ್ಥರ ಆಕ್ರಂದನ
ದಾವಣಗೆರೆ, ನವೆಂಬರ್, 03: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ (24) ಮೃತದೇಹ ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆ ಬಳಿಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ಪತ್ತೆ ಆಗಿದೆ.
ಗುರುವಾರ ಸಂಜೆ ಕಾಲುವೆಯಲ್ಲಿದ್ದ KA - 17- MA 2534 ನಂಬರ್ನ ಬಿಳಿ ಬಣ್ಣದ ಕ್ರೇಟಾ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಮೃತದೆೇಹ ಸಿಕ್ಕಿದೆ. ಈ ವೇಳೆ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟರು.
ತುಂಗಾ ನಾಲೆ ಬಳಿ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ
ಅಕ್ಟೋಬರ್ 30ರ ರಾತ್ರಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಚಂದ್ರಶೇಖರ್ಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಹೊನ್ನಾಳಿಯಿಂದ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರು ಪತ್ತೆ ಆಗಿದೆ.
ಮುಗಿಲು ಮುಟ್ಟಿದ್ದ ಕುಟುಂಬಸ್ಥರ ಆಕ್ರಂದನ; ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಮೂಲಕ ನೀರಿನಲ್ಲಿದ್ದ ಕಾರನ್ನು ಮೇಲಕ್ಕೆ ಎತ್ತಿದರು. ಈ ವೇಳೆ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಯಿತು. ಈ ವೇಳೆ ಈ ದೇಹ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅವರದ್ದೇ ಎಂಬುದನ್ನು ಸ್ಥಳೀಯರು ಖಚಿತಪಡಿಸಿದರು.
ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಚಂದ್ರುಗೆ ಕರೆ ಮಾಡಿದ್ದು ಯಾರು
ಬಳಿಕ ಕುಟುಂಬಸ್ಥರು ಸಹ ಇದನ್ನು ಖಾತ್ರಿಪಡಿಸಿದರು. ಚಂದ್ರಶೇಖರ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ನೆರೆದಿದ್ದ ನೂರಾರು ಜನರು ಕಣ್ಣೀರು ಸುರಿಸಿದರು. ರೇಣುಕಾಚಾರ್ಯ ಅವರನ್ನೂ ಸಂತೈಸಲು ಜನರು ಮುಂದೆ ಬಂದರು.
ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥ; ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಕಾರು ಪತ್ತೆಯಾಗಿದ್ದು, ಹೊನ್ನಾಳಿ, ನ್ಯಾಮತಿ ಸುತ್ತಮುತ್ತಲಿನ ಗ್ರಾಮಗಳ ಜನರು ಕಾರು ಸಿಕ್ಕ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಚಂದ್ರಶೇಖರ್ ಇನ್ನಿಲ್ಲ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಎಲ್ಲೆಡೆ ಜನರ ಆಕ್ರಂದನ ಮುಗಿಲು ಮುಟ್ಟಿದೆ.
ಸಹೋದರ ಮಗನ ಶವ ನೋಡುತ್ತಿದ್ದಂತೆ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರುವಿನ ಶವ ಸಿಕ್ಕಿದ್ದು, ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.