ರಾತ್ರೋರಾತ್ರಿ 800 ಅಡಿಕೆ ಗಿಡಗಳು ನೆಲಸಮ: ದುಷ್ಕರ್ಮಿಗಳ ಕೃತ್ಯಕ್ಕೆ ರೈತ ಕಂಗಾಲು
ದಾವಣಗೆರೆ, ಆಗಸ್ಟ್ 07: ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಮದ ದರಿಯಪ್ಪರ ಬೀರಪ್ಪ ಎಂಬ ರೈತನ ಒಂದೂವರೆ ಎಕರೆ ಜಮೀನಿನಲ್ಲಿ 3 ವರ್ಷದ ಸುಮಾರು 800 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ.
ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಸುಮಾರು 800 ಅಡಿಕೆ ಗಿಡಗಳು ನೆಲಸಮವಾಗಿದ್ದು, ಸಣ್ಣ ರೈತನಾಗಿರುವ ಬೀರಪ್ಪನಿಗೆ ಇದರಿಂದ ತೀವ್ರ ನಷ್ಟ ಉಂಟಾಗಿದೆ. ಊರಿನಲ್ಲಿ ಬೀರಪ್ಪ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಯಾರ ಮೇಲೂ ದ್ವೇಷ ಅಸೂಯೆ ಹೊಂದಿಲ್ಲ. ಹೀಗಾಗಿ ಈ ಪ್ರಕರಣ ಗ್ರಾಮಸ್ಥರಿಗೆ ಸೋಜಿಗವೆನಿಸಿದೆ.

ದುಷ್ಕೃತ್ಯ ನಡೆದ ಜಮೀನಿಗೆ ತಾಲೂಕು ತಹಶೀಲ್ದಾರ್ ಡಾ ಅಶ್ವಥ್, ಕಂದಾಯ ನಿರೀಕ್ಷಕ ಬಸವರಾಜು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಪವನ್ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಹದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಜೀವ್ ಪ್ರಕರಣ ದಾಖಲಿಸಿಕೊಂಡಿದ್ದು, ತಮ್ಮ ಸಿಬ್ಬಂದಿಯೊಂದಿಗೆ ಮತ್ತು ಶ್ವಾನದಳದೊಂದಿಗೆ ತನಿಖೆ ಕೈಗೊಂಡಿದ್ದಾರೆ.
ಪ್ರಕರಣವನ್ನು ಕಿಡಿಗೇಡಿಗಳ ದುಷ್ಕೃತ್ಯ ಎಂದು ಭಾವಿಸದೆ ಇದು ಒಂದು ಕಗ್ಗೊಲೆ ಎಂದು ಪರಿಗಣಿಸಿ, ದುಷ್ಕರ್ಮಿಗಳನ್ನು ಭೇದಿಸಿ ಶಿಕ್ಷಿಸಬೇಕು. ಇಂತಹ ದುಷ್ಕೃತ್ಯ ಮುಂದೆಂದೂ ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಷ್ಟ ಹೊಂದಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಜಿ ಸಿ ನಿಂಗಪ್ಪ, ಆರನೇಕಲ್ಲು ವಿಜಯಕುಮಾರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಹೊಸಹಳ್ಳಿ ಶಿವಮೂರ್ತಿ, ಬಿಸ್ಲೇರಿ ಮಲ್ಲಿಕಾರ್ಜುನ, ಮುದಹದಡಿ ಗ್ರಾಮದ ಶಂಭುಲಿಂಗನಗೌಡ್ರು, ಮಹೇಂದ್ರನಂದಿಗೌಡ್ರ, ಟಿ ವಿ ತೇಜಸ್ವಿ, ಎಂ.ನಾಗರಾಜ, ಕೆ ದಿಳ್ಳೇಪ್ಪ, ಷಣ್ಮುಖಪ್ಪ, ಮಿಟ್ಲಕಟ್ಟೆ ನಾಗರಾಜ್ ಮತ್ತಿತರರು ಘಟನಾ ಸ್ಥಳದಲ್ಲಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ
ದಾವಣಗೆರೆ ತಾಲೂಕಿನ ಮುದಹದಡಿಯಲ್ಲಿ ದುಷ್ಕರ್ಮಿಗಳು 800 ಅಡಿಕೆ ಸಸಿಗಳನ್ನು ಕಡಿದ ಜಮೀನಿಗೆ ಜಿಲ್ಲಾಧಿಕಾರಿ ಡಾ.ಎಂ ವಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುಷ್ಕೃತ್ಯದಿಂದ ಆಗಿರುವ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ, ನೊಂದ ರೈತನಿಗೆ ಸಮಾಧಾನ ಹೇಳಿದರು. ದುಷ್ಕೃತ್ಯ ನಡೆಸಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಂದು ಗ್ರಾಮದ ರೈತರಿಗೆ ಭರವಸೆ ನೀಡಿದರು.












Click it and Unblock the Notifications