ಐಐಟಿ ಬಾಂಬೆಯಲ್ಲಿ ಶಿರಸಿ 'ಸುಗಂಧ'ದ ಪರಿಮಳ!
ಕಾರವಾರ, ಜೂ, 20 : ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಂಧ ಎಂಬ ಪ್ರತಿಭಾವಂತ ಯುವತಿ ಐಐಟಿ-ಬಾಂಬೆ ನಡೆಸುವ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಲ್ಲಿ 89ನೇ ಸ್ಥಾನ ಪಡೆದು ಕನ್ನಡ ನಾಡಿಗೆ ಕೀರ್ತಿ ತಂದಿದ್ದಾಳೆ. ಆಕೆಗೆ ಹೃತ್ಪೂರ್ವಕ ಅಭಿನಂದನೆಗಳು.
ಪಿಯುಸಿ ಮುಗಿದ ಬಳಿಕ ಈಕೆಗೆ ಒಲವು ಇದ್ದದ್ದು ಡಾಕ್ಟರ್ ಪದವಿ ಗಳಿಸುವ ಕಡೆಗೆ. ಆದರೆ ಸಂಬಂಧಿಕರಿಂದ ಯಾವ ಬೆಂಬಲ, ನೆರವು ದೊರೆಯಲಿಲ್ಲ. ಇದನ್ನೇ ಸವಾಲಾಗಿ ತೆಗೆದುಕೊಂಡ ಸುಗಂಧ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಗಳಿಸಲು ಮುಂದಾದಳು. ಛಲ ಬಿಡದೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಈಕೆ ಇದೀಗ ಬಯೋಲಾಜಿಕಲ್ ವಿಷಯದಲ್ಲಿ 89ನೇ ಸ್ಥಾನ ಪಡೆದಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾಳೆ.

ಸುಗಂಧ ತಂದೆ ನಾರಾಯಣ ನಾಯಕ್ ಕೆಎಸ್ಆರ್ಟಿಸಿ ಬಸ್ಸಿನ ಕಂಡಕ್ಟರ್ ಆಗಿದ್ದು, ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ನಂತರ ಈಕೆಯ ಬೆಂಬಲಕ್ಕೆ ನಿಂತಿದ್ದು ಶಿಕ್ಷಕಿಯಾದ ತಾಯಿ ಶಕುಂತಲಾ. ಮುಖ್ಯವಾಗಿ ತಾಯಿಯ ಬೆಂಬಲ, ಮಾರ್ಗದರ್ಶನ ಇಲ್ಲದಿದ್ದರೆ ಈ ಸಾಧನೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸುಗಂಧ ಹೇಳಿದ್ದಾಳೆ. ಹಾಗೆಯೇ ಯಶಸ್ಸಿಗೆ ಸಹಕಾರ ನೀಡಿದ ಮಹಾರಾಜ ಕಾಲೇಜಿನ ಉಪನ್ಯಾಸ ವೃಂದದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾಳೆ.
ಶಿರಸಿ ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಆದರೆ, ಇವರಿಗೆ ಪ್ರತಿಷ್ಠಿತ ಐಐಟಿ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾಹಿತಿ ಹಾಗೂ ತರಬೇತಿಯ ಕೊರತೆ ಇದೆ ಎಂದು ಸುಗಂಧ ಬೇಸರ ವ್ಯಕ್ತಪಡಿಸಿದ್ದಾಳೆ.












Click it and Unblock the Notifications