ವರದಿ ಇಂಪ್ಯಾಕ್ಟ್; ನಡೆಯಿತು ಜ್ಯೂಲಯ್ಯನಹಟ್ಟಿ ರಸ್ತೆ ಮರುಕಾಮಗಾರಿ
ಚಿತ್ರದುರ್ಗ, ಮಾರ್ಚ್ 16: ಹಿರಿಯೂರು ತಾಲ್ಲೂಕಿನ ಗ್ರಾಮವೊಂದರಲ್ಲಿ 20 ಲಕ್ಷದ ರಸ್ತೆ ಕಾಮಗಾರಿಯೊಂದು ಕೇವಲ ಇಪ್ಪತ್ತು ದಿನಗಳಲ್ಲಿ ಹಾಳಾಗಿದ್ದ ಆರೋಪವೊಂದು ಕೇಳಿ ಬಂದಿತ್ತು.
ಇದನ್ನು ಬೆನ್ನು ಹತ್ತಿದ್ದ "ಒನ್ ಇಂಡಿಯಾ ಕನ್ನಡ" ಮಾರ್ಚ್ 3 ರಂದು "ಹಿರಿಯೂರಿನ ಗ್ರಾಮದಲ್ಲಿ 20 ಲಕ್ಷದ ರಸ್ತೆ ಆಯಸ್ಸು 20 ದಿನ ಅಷ್ಟೆ" ಎಂಬ ಶಿರ್ಷೀಕೆ ಅಡಿಯಲ್ಲಿ ವಿಶೇಷ ವರದಿ ಬಿತ್ತರಿಸಿತ್ತು.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ವ್ಯಾಪ್ತಿಯ ಜೂಲಯ್ಯನಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ಸಿ.ಸಿ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ರಸ್ತೆಯ ಜಲ್ಲಿಕಲ್ಲು, ಸಿಮೆಂಟ್, ಕಾಂಕ್ರಿಟ್ ಕಿತ್ತು ಹಾಳಾಗಿ ಹೋಗಿತ್ತು. ಈ ಕಳಪೆ ಕಾಮಗಾರಿ ವರದಿಯನ್ನು ಒನ್ ಇಂಡಿಯಾ ಕನ್ನಡ ವರದಿ ಮಾಡಿತ್ತು.

ವರದಿಯಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರನ್ನು ಮನವೊಲಿಸಿದ ಅಧಿಕಾರಿಗಳು ಸಿ.ಸಿ.ರಸ್ತೆಗೆ ಮರು ಕಾಮಗಾರಿ ಕೈಗೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಎಂಜಿನಿಯರ್ ಅರ್ಜುನ್ ಶೆಟ್ಟಿ, ಕೆಲವು ಕಾರಣಗಳಿಂದ ರಸ್ತೆ ಸ್ವಲ್ಪ ಹಾಳಾಗಿತ್ತು. ಮತ್ತೆ ಗುಣಮಟ್ಟದ ಕಾಮಗಾರಿಯನ್ನು ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications