ಇಂದಿನಿಂದ ವಿವಿ ಸಾಗರಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ
ಚಿತ್ರದುರ್ಗ, ಸೆಪ್ಟೆಂಬರ್ 20: ಜಿಲ್ಲೆಯ ಬಹು ನಿರೀಕ್ಷಿತ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅದರಂತೆ ನೀರು ಹರಿಸಲು ಸಿದ್ಧತೆ ನಡೆಯುತ್ತಿದೆ. ಇಂದಿನಿಂದ ಭದ್ರಾ ನೀರನ್ನು ವಿವಿ ಸಾಗರಕ್ಕೆ ಪ್ರಾಯೋಗಿಕವಾಗಿ ಹರಿಸಲು ಭದ್ರಾ ಮೇಲ್ದಂಡೆ ಉಪವಿಭಾಗದ ಎಂಜಿನಿಯರ್ ಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಭದ್ರಾ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸುತ್ತಿದ್ದಂತೆ ಇತ್ತ ಹಿರಿಯೂರು ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಹೆಬ್ಬೂರು, ಅಬ್ಬಿನಹೊಳಲು, ಕಾಟಿನಗೆರೆ, ಬೇಗೂರು, ಕಲ್ಕೆರೆ ಹಳ್ಳಗಳ ಮುಖಾಂತರ ಕುಕ್ಕೆ ಸಮುದ್ರ ಸೇರಿ, ಚೌಳು ಹಿರಿಯೂರು, ಕೆಲ್ಲೋಡ್ ಚೆಕ್ ಡ್ಯಾಂ ಮೂಲಕ ಕಾರಹಳ್ಳಿ ಮುಖಾಂತರ ವೇದವಾತಿ ನದಿ ಸೇರುವ ಮೂಲಕ ಭದ್ರಾ ನೀರು ವಿವಿ ಸಾಗರ ಸೇರಲಿದೆ.
ಭದ್ರಾ ಜಲಾಶಯದಿಂದ ವಾಣಿವಿಲಾಸ ಜಲಾಶಯಕ್ಕೆ ಇಂದಿನಿಂದ ಪ್ರಯೋಗಾರ್ಥವಾಗಿ ನೀರು ಹರಿಸುವ ಕಾರ್ಯ ಆರಂಭವಾಗಿದ್ದು, ಮಾರ್ಚ್ 2020ರ ಅಂತ್ಯದವರಿಗೆ ನೀರು ವಿವಿ ಸಾಗರಕ್ಕೆ ಹರಿದು ಬರಲಿದೆ ಹಾಗೂ ಹಿರಿಯೂರು ಜನರ ಬಹುದಿನಗಳ ಕನಸು ಈಗ ಈಡೇರಿದೆ ಎಂದು ಶಾಸಕಿ ಕೆ. ಪೂರ್ಣಿಮಾ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕಿ ಪೂರ್ಣಿಮಾ, "ಅಕ್ಟೋಬರ್ 1 ರಂದು ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯ್ಯೂರಪ್ಪ ಅಧಿಕೃತ ಚಾಲನೆ ನೀಡಲಿದ್ದಾರೆ" ಎಂದು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿ ಬಂದ ಶಾಸಕಿ ಕೆ. ಪೂರ್ಣಿಮಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಆ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಜನರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications