ಎಂ.ರವೀಂದ್ರಪ್ಪನವರೇ ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ: ಡಿ.ಯಶೋಧರ್
ಚಿತ್ರದುರ್ಗ, ಏಪ್ರಿಲ್, 05: ಹಿರಿಯೂರು ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಸತ್ಯ. ಕಳೆದ ಎರಡು ವರ್ಷಗಳಿಂದ ಅನೇಕ ರೀತಿ ಹೂವಪೋಹಗಳು ಕೇಳಿಬಂದಿದ್ದವು. ಇದೀಗ ಈ ಸಮಸ್ಯೆಗಳಿಗೆಲ್ಲ ತೆರೆ ಎಳೆದು ಇಂದು ನಿವೃತ್ತ ಮುಖ್ಯ ಚೀಪ್ ಇಂಜಿನಿಯರ್ ಎಂ.ರವೀಂದ್ರಪ್ಪ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಮೌಖಿಕವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಅಂತಾ ಡಿ.ಯಶೋಧರ ತಿಳಿಸಿದರು.
ಹಿರಿಯೂರಿನ ಅವಧಾನಿ ನಗರದಲ್ಲಿ ನೂತನ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಏ.10ರಂದು ನಗರಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಪಂಚರತ್ನ ಯಾತ್ರೆ ನಗರದ ರಂಜಿತಾ ಹೋಟೆಲ್ನಿಂದ ಎಪಿಎಂಸಿ ಆವರಣದವರೆಗೆ ನಡೆಯಲಿದೆ. ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಮಾವೇಶದಿಂದ ರಾಷ್ಟ್ರೀಯ ಪಕ್ಷಗಳ ಅಬ್ಬರದ ಸದ್ದು ಅಡಗಲಿದೆ ಎಂದು ತಿಳಿಸಿದರು.

ಜೆಡಿಎಸ್ಗೆ ಸ್ಪಷ್ಟ ಬಹುಮತ ಬರಲಿದೆ
ಇನ್ನು ಮೇ 10ರಂದು ನಡೆಯಲಿರುವ ಚುನಾವಣೆ ಮಹತ್ವಪೂರ್ಣವಾಗಿದೆ. ಹಾಗೂ ಜೆಡಿಎಸ್ ಪಕ್ಷಕ್ಕೆ ಅಷ್ಟೇ ಪ್ರತಿಷ್ಠಿತವಾದ ಚುನಾವಣೆ ಎಂದು ಭಾವಿಸಲಾಗಿದೆ. ಅಲ್ಲದೇ ದೇಶಕ್ಕೆ ಸಮರ್ಥ ನಾಯಕತ್ವ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಹಾಗೂ ಪಕ್ಷದ ನಾಯಕರಾದ ಕುಮಾರಣ್ಣನವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ
ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮುಂಬರುವ ಚುನಾವಣೆಯಲ್ಲಿ ಮತದಾರರು ಹೊಸ ಭಾಷೆಯನ್ನು ಬರೆಯಲಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಬ್ಬರ ಎಷ್ಟೇ ಜೋರಗಿದ್ದರೂ ಸಹ ಈ ರಾಜ್ಯದಲ್ಲಿ ಮತ್ತು ನಮ್ಮ ತಾಲೂಕಿನ ಮತದಾರರಲ್ಲಿ ಗಂಭೀರವಾದ ಚಿಂತನೆ ನಡೆಯುತ್ತಿದೆ. ಅದನ್ನು ನಾವು ಗಮನಿಸಿದ್ದೇವೆ ಎಂದರು.

ಈಗಾಗಲೇ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಪಕ್ಷದ ಅಭ್ಯರ್ಥಿ ಆಗಿರುವಂತಹವರು ಎರಡು ಬಾರಿ ಆಯ್ಕೆ ಆಗಿದ್ದಾರೆ. ಹಾಗೆಯೇ ಮತ್ತೊಬ್ಬರು ಜನತಾ ಪಕ್ಷದ ಅಭ್ಯರ್ಥಿ ಆಯ್ಕೆ ಆಗಲಿದ್ದಾರೆ. ಈ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ನೋಡಿದ್ದಾರೆ. ರಾಜ್ಯದ ಮತದಾರರು ಈ ಬಾರಿ ಚುನಾವಣೆಯಲ್ಲಿ ಎರಡು ಪಕ್ಷಗಳನ್ನು ಧಿಕ್ಕರಿಸಿ ಪ್ರಾದೇಶಿಕತೆಯ ಸೊಗಡನ್ನು ಮೇಲೆ ಎತ್ತಲಿದ್ದಾರೆ ಎಂದರು.
ಗ್ರಾಮೀಣ ಜನರ ಒಡನಾಡಿಯಾದ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಹಾಗೆಯೇ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಜ್ಯದ ಜನರು ಸದಾ ಕಾಯುತ್ತಿದ್ದಾರೆ. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮಾಡುವ ತಂತ್ರಕ್ಕೆ ನಮ್ಮ ಪಕ್ಷ ಪ್ರತಿ ತಂತ್ರವನ್ನು ರೂಪಿಸಿ, ನಮ್ಮ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಮತದಾರರನ್ನು ಕಾಲು ಹಿಡಿದು ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.
ನಾಡಿನಲ್ಲಿ ಕುಮಾರಣ್ಣನವರು ಅಧಿಕಾರ ಸ್ವೀಕರಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅವರು ಸಿಎಂ ಆಗಬೇಕೆಂದರೆ ಮತದಾರರು ಈ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
"ಕೈ" ಸೇರಲಿರುವ ಬಿಜೆಪಿ ಕಾರ್ಯಕರ್ತರು
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತ್ತೊಂದೆಡೆ ಎಲ್ಲಾ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚುನಾವಣಾ ಕಾವು ರಂಗೇರಿದ್ದು, 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಅಲ್ಲದೇ ಗುರುವಾರ (ಏಪ್ರಿಲ್ 06) 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಕ್ಷಕ್ಕೆ ಬರುವ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ಮಾಜಿ ಸಚಿವ ಡಿ.ಸುಧಾಕರ್ ಅವರು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿವಿಧ ಸಮುದಾಯಗಳ ಮುಖಂಡರು ಗುರುವಾರ ಸಂಜೆ 3ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ "ಕೈ" ಸೇರ್ಪಡೆಯಾಗಲಿದ್ದಾರೆ.












Click it and Unblock the Notifications