ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರ್ಧ ಗಂಟೆಯಲ್ಲಿ ಕೋವಿಡ್–19 ವರದಿ
ಚಿತ್ರದುರ್ಗ, ಜುಲೈ 15: "ಕೊರೊನಾ ಪರೀಕ್ಷೆಗೆ ಗಂಟಲ ದ್ರವ ಮಾದರಿ ಸಂಗ್ರಹಿಸಿದ ನಂತರ ವರದಿ ಬರುವುದಕ್ಕೆ ತಡವಾಗುತ್ತಿದೆ ಎಂಬ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ನೂರು ರಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಗಳನ್ನು ಸರ್ಕಾರ ಪೂರೈಸಿದೆ" ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.
ಇಂದು ತಾಲ್ಲೂಕಿನ ಮೇಟಿಕುರ್ಕೆ ಅರಣ್ಯಧಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಕೋವಿಡ್ -19 ನಿಯಂತ್ರಣದ ಕುರಿತು ಹಮ್ಮಿಕೊಂಡಿದ್ದ ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಆರಂಭದಲ್ಲಿ ಸಂಗ್ರಹಿಸಿದ ಸ್ವ್ಯಾಬ್ ಅನ್ನು ದಾವಣೆಗೆರೆ, ಶಿವಮೊಗ್ಗಕ್ಕೆ ಕಳಿಸುತ್ತಿದ್ದರು. ನಂತರ ಚಿತ್ರದುರ್ಗಕ್ಕೆ ಕಳಿಸಲಾಯಿತು. ಕೋವಿಡ್ 19 ಪೀಡಿತರ ಸಂಖ್ಯೆ ಹೆಚ್ಚಿದ ಕಾರಣ ಸಕಾಲಕ್ಕೆ ವರದಿ ಬರುತ್ತಿರಲಿಲ್ಲ. ಈಗ ನಮ್ಮ ಆಸ್ಪತ್ರೆಗೆ ಬಂದಿರುವ ಕಿಟ್ ಗಳಿಂದ ಅರ್ಧ ಗಂಟೆಯಲ್ಲಿ ವರದಿ ಪಡೆಯಬಹುದಾಗಿದೆ. ಸದ್ಯಕ್ಕೆ ನೂರು ಕಿಟ್ ಗಳು ಬಂದಿದ್ದು, ಹೆಚ್ಚು ಕಿಟ್ ಗೆ ಬೇಡಿಕೆ ಸಲ್ಲಿಸಿದ್ದೇವೆ" ಎಂದು ತಿಳಿಸಿದರು.
ಹೊರಗಿನಿಂದ ಬಂದವರ ಮೇಲೆ ನಿಗಾ
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ‘ಧರ್ಮಪುರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ 20 ಸೋಂಕಿತರು ಗುಣಮುಖರಾಗಿ ಹೊರ ಹೋಗಿದ್ದಾರೆ. ನಮ್ಮಲ್ಲಿ 74 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದು ಬೇರೆ ಆರೋಗ್ಯ ಸಮಸ್ಯೆಗಳ ಕಾರಣ. ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಿತಿ ರಚಿಸಿಕೊಂಡು ಬೆಂಗಳೂರು ಸೇರಿದಂತೆ ಹೊರಗಿನಿಂದ ಬರುವವರ ಮೇಲೆ ನಿಗಾ ಇಟ್ಟು ಕ್ವಾರಂಟೈನ್ ಗೆ ಒಳಗಾಗಲು ತಾಕೀತು ಮಾಡಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ' ಎಂದು ಎಚ್ಚರಿಸಿದರು.
ಚಿತ್ರದುರ್ಗದಲ್ಲಿ ಮತ್ತೆ 10 ಜನರಿಗೆ ಕೊರೊನಾ ವೈರಸ್ ಸೋಂಕು ದೃಢ
ಜನರಿಗೆ ತಹಶೀಲ್ದಾರ್, ಡಿವೈಎಸ್ಪಿ ಮನವಿ
ಡಿವೈಎಸ್ಪಿ ರೋಷನ್ ಜಮೀರ್ ಮಾತನಾಡಿ, ‘ಹೊರಗಿನಿಂದ ಬಂದವರು ಕ್ವಾರಂಟೈನ್ ಆಗಲು ಹಿಂಜರಿಯುತ್ತಿರುವುದು ದೊಡ್ಡ ತಲೆ ನೋವಾಗಿದೆ. ಹಳ್ಳಿಗಳಿಂದ ಹೊಸದಾಗಿ ಬಂದವರ ಬಗ್ಗೆ ಯಾರೇ ಮಾಹಿತಿ ನೀಡಿದರೂ ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು. ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ' ಎಂದರು.
ತಹಶೀಲ್ದಾರ್ ಸತ್ಯನಾರಾಯಣ, ‘ಕೊರೊನಾ ಕೇವಲ ಒಂದೆರಡು ಇಲಾಖೆಗೆ ಸಂಬಂಧಿಸಿದ್ದಲ್ಲ. ಅನಗತ್ಯವಾಗಿ ಸಂಚರಿಸುವ ವಾಹನ ಸವಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲು ಮಾಡಬೇಕು. ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ವಹಿವಾಟು ನಡೆಸಿದಲ್ಲಿ ಅಂತಹ ವಹಿವಾಟು ಬಂದ್ ಮಾಡಿಸಬೇಕು. ಗುಂಪು ಸೇರದಂತೆ ಎಚ್ಚರ ವಹಿಸಬೇಕು. ಎಲ್ಲ ಇಲಾಖೆಗಳ ಸಿಬ್ಬಂದಿ ಸಮನ್ವಯದೊಂದಿಗೆ ಕೊರೊನಾ ವಿರುದ್ಧ ಹೋರಾಟ ನಡೆಸೋಣ' ಎಂದು ಮನವಿ ಮಾಡಿದರು.
"ಆಂಧ್ರದ ಗಡಿ ಪ್ರದೇಶದಲ್ಲಿ ಕಾವಲು ಬಿಗಿಗೊಳಿಸಿ"
ಹಿರಿಯೂರು ತಾಲ್ಲೂಕಿನಲ್ಲಿ 37 ಪ್ರಕರಣಗಳು ಪಾಸಿಟಿವ್ ಬಂದಿರುವುದು ಆತಂಕದ ಸಂಗತಿ. ಇವುಗಳಲ್ಲಿ ಬಹುತೇಕ ಬೆಂಗಳೂರಿನ ಸಂಪರ್ಕಿತವಾಗಿವೆ. ಹೀಗಾಗಿ ಜುಲೈ 13 ಮತ್ತು 14 ರಂದು ಬೆಂಗಳೂರಿನಿಂದ ನಮ್ಮ ತಾಲ್ಲೂಕಿಗೆ ಬಂದಿರುವವರ ಮೇಲೆ ಹೆಚ್ಚು ನಿಗಾ ಇಡಬೇಕು. ಕೊರೊನಾ ವಾರಿಯರ್ಸ್ ಗೆ ಎಲ್ಲ ರೀತಿಯ ನೆರವು, ಸಹಕಾರ ನೀಡಲಾಗುವುದು. ಸ್ವಲ್ಪದಿನ ಆಂಧ್ರದ ಗಡಿ ಪ್ರದೇಶದಲ್ಲಿ ಕಾವಲು ಬಿಗಿಗೊಳಿಸಿ' ಎಂದು ಪೂರ್ಣಿಮಾ ಶ್ರೀನಿವಾಸ್ ಸೂಚನೆ ನೀಡಿದರು.
ಚಿತ್ರದುರ್ಗದಲ್ಲಿ ಕೊರೊನಾಗೆ ಎರಡನೇ ಸಾವು; ಜಿಲ್ಲಾಡಳಿತದ ವಿರುದ್ಧ ತಿರುಗಿಬಿದ್ದ ಜನ
ಹಿರಿಯೂರಿನಲ್ಲಿ ಮಧ್ಯಾಹ್ನ 2-ಬೆಳಿಗ್ಗೆ 5ವರೆಗೆ ಲಾಕ್ ಡೌನ್
ಹಿರಿಯೂರು ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ ಪ್ರತಿದಿನ ಮಧ್ಯಾಹ್ನ 2 ರಿಂದ ಬೆಳಿಗ್ಗೆ 5 ವರೆಗೆ ಲಾಕ್ ಡೌನ್ ಮಾಡಲಾಗಿದೆ. ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳು ನಿಗದಿತ ಸಮಯದಲ್ಲಿ ಮಾತ್ರ ತೆರೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರು ಅನವಶ್ಯಕವಾಗಿ ಹೊರಗೆ ತಿರುಗಾಡುವಂತಿಲ್ಲ, ಗುಂಪು ಸೇರುವಂತಿಲ್ಲ ಎಂಬ ಸಂದೇಶವನ್ನು ತಾಲೂಕು ಆಡಳಿತ ನೀಡಿದೆ.