ಜಿಲ್ಲಾಡಳಿತಕ್ಕೆ ಕಗ್ಗಂಟಾದ ಚಿಕ್ಕಮಗಳೂರು ವಿದ್ಯಾರ್ಥಿಯ ಕೊರೊನಾ ವೈರಸ್ ಸೋಂಕಿನ ಮೂಲ
ಚಿಕ್ಕಮಗಳೂರು, ಜೂನ್ 12: ನಿನ್ನೆಯಷ್ಟೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಲ್ಲಿ ದೃಢಪಟ್ಟ ಕೊರೊನಾ ವೈರಸ್ ಸೋಂಕು ಇಡೀ ಕಾಫಿ ನಾಡನ್ನು ಮತ್ತೆ ಆತಂಕಕ್ಕೆ ದೂಡಿದೆ. ಎಲ್ಲಾ ಪ್ರಕರಣಗಳೂ ಕಳೆದು, ಜಿಲ್ಲೆ ನಿಶ್ಚಿಂತವಾಯಿತು ಎಂದುಕೊಳ್ಳುವಷ್ಟರಲ್ಲಿ ಬೆಳಕಿಗೆ ಬಂದ ಈ ಪ್ರಕರಣ, ಜೊತೆಗೆ ಈ ವಿದ್ಯಾರ್ಥಿಗೆ ಸೋಂಕು ಹೇಗೆ ತಗುಲಿದೆ ಎಂಬ ವಿಷಯ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
Recommended Video
ಈ ವಿದ್ಯಾರ್ಥಿ ಕಳೆದ ಮೂರು ತಿಂಗಳಿಂದ ಎಲ್ಲೂ ಹೋಗಿಲ್ಲ. ಹಳ್ಳಿಯಲ್ಲಿ ಮನೆ, ಹೊಲಗದ್ದೆ, ತೋಟದ ಕೆಲಸ ಮಾಡಿಕೊಂಡು ಇದ್ದ ಈತ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಆದರೆ ಈತನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು ಹೇಗೆ ಎಂಬುದೇ ಈಗ ಚರ್ಚಿತ ವಿಷಯವಾಗಿದೆ. ಎಲ್ಲೂ ಹೋಗದೇ ಇದ್ದರೂ ಕೊರೊನಾ ವೈರಸ್ ಹೇಗೆ ಬಂದಿತು ಎಂಬುದೂ ಪ್ರಶ್ನೆಯಾಗಿ ಕಾಡುತ್ತಿದೆ.

sslc ವಿದ್ಯಾರ್ಥಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಕೆ.ದಾಸರಹಳ್ಳಿಯಲ್ಲಿ 15 ವರ್ಷದ ಬಾಲಕನಿಗೆ ನಿನ್ನೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಆದರೆ ಸೋಂಕು ಎಲ್ಲಿಂದ, ಯಾವ ಮೂಲದಿಂದ ಬಂದಿದೆ ಎನ್ನುವುದು ಮಾತ್ರ ಈವರೆಗೂ ಸ್ಪಷ್ಟವಾಗಿಲ್ಲ. 8 ವಿದ್ಯಾರ್ಥಿಗಳು ಸೇರಿದಂತೆ ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 55ಕ್ಕೂ ಹೆಚ್ಚು ಜನರನ್ನು ಕಡೂರಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಗ್ರಾಮವನ್ನು ಸೀಲ್ ಡೌನ್ ಮಾಡಿದ ಜಿಲ್ಲಾಡಳಿತ
ಮುಂಜಾಗೃತ ಕ್ರಮವಾಗಿ ಕೆ.ದಾಸರಹಳ್ಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. 55 ಜನರಲ್ಲಿ ಎಂಟು ವಿದ್ಯಾರ್ಥಿಗಳು ಇರುವುದರಿಂದ ಮಕ್ಕಳ ಕುಟುಂಬಸ್ಥರಲ್ಲೂ ಕೊರೊನಾ ವೈರಸ್ ಭಯ ಶುರುವಾಗಿದೆ. ಈಗಾಗಲೇ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ತಮ್ಮ ಆರೋಗ್ಯದ ಜೊತೆ ಮಕ್ಕಳ ಭವಿಷ್ಯದ ಚಿಂತೆ ಕೂಡ ಪೋಷಕರನ್ನು ಕಾಡತೊಡಗಿದೆ. ಈ ಮಧ್ಯೆ ಬಾಲಕ ಹಾಗೂ ಆತನ ಸ್ನೇಹಿತರಿಗೆ ಓದಲು ಬೇಕಾದ ಪುಸ್ತಕವನ್ನು ಹಾಗೂ ಇತರೆ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ.

ಶಿವಮೊಗ್ಗ, ತರೀಕೆರೆಗೆ ಓಡಾಡಿದ್ದ ಬಾಲಕ
ಜಿಲ್ಲೆಯಲ್ಲಿ ಮುಂಬೈನಿಂದ ಬಂದವರನ್ನು ಹೊರತುಪಡಿಸಿ ಯಾರಿಗೂ ಸೋಂಕು ಇರಲಿಲ್ಲ. ಕಡೂರು ತಾಲೂಕಿನಲ್ಲೇ ಸೋಂಕು ಯಾರಿಗೂ ಬಂದಿರಲಿಲ್ಲ. ಈ ಬಾಲಕನಿಗೆ ಕೊರೊನಾ ಎಲ್ಲಿಂದ ಬಂತು ಎನ್ನುವುದು ಸ್ಥಳೀಯರು ಹಾಗೂ ಜಿಲ್ಲಾಡಳಿತದ ಯಕ್ಷ ಪ್ರಶ್ನೆಯಾಗಿದೆ. ಈ ಮಧ್ಯೆ ಬಾಲಕ ಶಿವಮೊಗ್ಗ ಹಾಗೂ ತರೀಕೆರೆಗೆ ಓಡಾಟ ಮಾಡಿದ್ದಾನೆ. ಅಷ್ಟೆ ಅಲ್ಲದೇ, ಆರೋಗ್ಯದ ವ್ಯತ್ಯಾಸ ಕಂಡುಬಂದಿದ್ದರಿಂದ ಐ.ಎಲ್.ಐ. ಲಕ್ಷಣ ಇದ್ದ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ಹೋದಾಗ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬಳಿಕ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಬಾಲಕನ ಸೋಂಕಿನ ಮೂಲವನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ನಿರತವಾಗಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ಅಸಮಾಧಾನ
ಈ ಮಧ್ಯೆ ಕಾಮನಕೆರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಜನ, ಸರ್ಕಾರ ನಮಗೆ ಸರಿಯಾದ ಸೌಲಭ್ಯ ಒದಗಿಸಿಲ್ಲ, ಸ್ಯಾನಿಟೈಸರ್ ನೀಡಿಲ್ಲ, ಮಾಸ್ಕ್ ಕೊಟ್ಟಿಲ್ಲ, ಕುಡಿಯಲು ಫ್ಲೋರೈಡ್ ಯುಕ್ತ ಕೊಳಕು ನೀರನ್ನು ಕೊಡುತ್ತಿದೆ. ನಾವು ಶಂಕಿತರಷ್ಟೆ, ಸೋಂಕಿತರಲ್ಲ. ನಮ್ಮ ಬಳಿಯೂ ಬರಲ್ಲ. ಊಟವನ್ನು ಬಿಸಾಡಿ ಹೋಗುತ್ತಾರೆ. ಶೌಚಾಲಯ ನೋಡುವಂತಿಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ. ಇದಕ್ಕಿಂತ ನಮ್ಮನ್ನ ಮನೆಗೆ ಕಳಿಸಿ, ನಾವು ಇದಕ್ಕಿಂತ ಶುಚಿಯಾಗಿರುತ್ತೇವೆ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

18 ಸೋಂಕಿತರಲ್ಲಿ 16 ಮಂದಿ ಮುಂಬೈನಿಂದ ಬಂದವರು
ಚಿಕ್ಕಮಗಳೂರಿನಲ್ಲಿ ಪತ್ತೆಯಾದ 18 ಪ್ರಕರಣಗಳಲ್ಲಿ 16 ಮಂದಿ ಮುಂಬೈನಿಂದ ಬಂದವರು. ಮೊದಲು ಮೂಡಿಗೆರೆ ವೈದ್ಯ ಹಾಗೂ ತರೀಕೆರೆ ಗರ್ಭಿಣಿ ಪ್ರಕರಣ ಇಡೀ ಜಿಲ್ಲೆಯನ್ನು ಕಂಗಾಲಾಗಿಸಿತ್ತು. ಆದರೆ, ಅವೆರಡು ನಾಲ್ಕೈದು ಬಾರಿ ಪರೀಕ್ಷೆಯ ಬಳಿಕ ನೆಗೆಟಿವ್ ಬಂದವು. ನಂತರ ಜಿಲ್ಲೆ ನಿಟ್ಟುಸಿರುಬಿಟ್ಟಿತ್ತು. ಆದರೀಗ, ಹಳ್ಳಿಯಲ್ಲಿದ್ದ ಈ ಹುಡುಗನಿಗೆ ಎಲ್ಲಿಂದ ಕೊರೊನಾ ಬಂತು ಅನ್ನೋದು ಮತ್ತೆ ಜಿಲ್ಲೆ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.












Click it and Unblock the Notifications