ತಂದೆಯ ಸಮವಸ್ತ್ರ ಧರಿಸಿ ಅಂತಿಮ ಸೆಲ್ಯೂಟ್ ಹೊಡೆದ 2 ವರ್ಷದ ಪುತ್ರ!
ಚೆನ್ನೈ, ಫೆಬ್ರವರಿ 17 : ಆತನಿಗಿನ್ನೂ ಎರಡು ವರ್ಷ. ಕಣ್ಣೀರು ಸುರಿಸುತ್ತಿದ್ದ ತಾಯಿ ಆತನನ್ನು ಬಿಗಿದಪ್ಪಿಕೊಂಡಿದ್ದಳು. ತಾಯಿಯ ತೋಳುಗಳಲ್ಲಿ ಬಂಧಿಯಾಗಿದ್ದ ಆತ ಸುತ್ತಲೂ ಬೆರಗು ಕಣ್ಣುಗಳಲ್ಲಿ ನೋಡುತ್ತಿದ್ದ.
ತನ್ನ ದೇಹಕ್ಕಿಂತ ದೊಡ್ಡದಾದ ತಂದೆಯ ಸಮವಸ್ತ್ರ ಧರಿಸಿದ್ದ ಆತ ಕಾಫಿನ್ ಬಾಕ್ಸ್ಗೆ ಮುತ್ತಿಟ್ಟು ಅಂತಿಮ ಸೆಲ್ಯೂಟ್ ಹೊಡೆದ. ಈ ದೃಶ್ಯವನ್ನು ನೋಡಿದ ಜನರ ಕಣ್ಣುಗಳು ತೇವವಾದವು. ತಾನು ಸೆಲ್ಯೂಟ್ ಮಾಡಿದ್ದು ಏಕೆ? ಎಂಬ ಅರಿವು ಪುಟ್ಟ ಪೋರನಿಗೆ ಇತ್ತೋ ಇಲ್ಲವೋ.

ಆತನ ಹೆಸರು ಶಿವಮುನಿಯನ್. ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ತಮಿಳುನಾಡಿನ ವೀರಯೋಧ ಸಿ.ಶಿವಚಂದ್ರನ್ ಅವರ ಪುತ್ರ. ಸಕಲ ಸರ್ಕಾರಿ ಗೌರವದೊಂದಿಗೆ ಶಿವಚಂದ್ರನ್ ಅಂತ್ಯ ಸಂಸ್ಕಾರ ಶನಿವಾರ ನಡೆಯಿತು.

ಶಬರಿಮಲೆಗೆ ಭೇಟಿ ನೀಡಲು ರಜೆ ಮೇಲೆ ಬಂದಿದ್ದ ಶಿವಚಂದ್ರನ್ ಫೆ.9ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸೇವೆಗೆ ಮರಳಿದ್ದರು. ಆದರೆ, ಫೆ.14ರಂದು ನಡೆದ ಉಗ್ರರ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ. ಮೊನ್ನೆ ಮನೆಯಿಂದ ಹೋದ ಮಗ ಶವವಾಗಿ ಬಂದಿದ್ದು ನೋಡಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

20 ಲಕ್ಷ ಪರಿಹಾರ ಘೋಷಣೆ
ವೀರಯೋಧ ಸಿ.ಶಿವಚಂದ್ರನ್ ಪತ್ನಿ ಗಾಂಧಿಮತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾಗಿರುವ ಅವರ ಮುಂದಿನ ಜೀವನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರ ಶಿವಚಂದ್ರನ್ ಅವರ ಕುಟುಂಬಕ್ಕೆ 20 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ.

ಇಬ್ಬರು ಮಕ್ಕಳ ಸಾವು
ಸಿ.ಶಿವಚಂದ್ರನ್ ತಂದೆ ಚಿನ್ನಿಯನ್ ಅಪಾರವಾದ ದುಃಖದಲ್ಲಿದ್ದರು. ಪುತ್ರನ ಹಳೆಯ ಸಮವಸ್ತ್ರವನ್ನು ಧರಿಸಿದ್ದ ಅವರು ಪುತ್ರ ಕುಟುಂಬಕ್ಕೆ ಹೇಗೆ ಆಧಾರವಾಗಿದ್ದ ಎಂಬುದನ್ನು ಸ್ಥಳೀಯರಿಗೆ ವಿವರಿಸುತ್ತಿದ್ದರು. ಎರಡು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಒಬ್ಬ ಮಗನನ್ನು ಕಳೆದುಕೊಂಡ ದುಃಖದಿಂದ ಹೊರಬರುವ ಮೊದಲೇ ಅವರ ಮತ್ತೊಬ್ಬ ಮಗ ಉಗ್ರರ ಹೀನ ಕೃತ್ಯಕ್ಕೆ ಬಲಿಯಾಗಿದ್ದಾನೆ.

ಸಿಆರ್ಪಿಎಫ್ಗೆ ಸೇರಿದರು
ಬಿ.ಎಡ್ ಪದವಿ ಪಡೆದಿದ್ದ ಸಿ.ಶಿವಚಂದ್ರನ್ ಕುಟುಂಬಕ್ಕೆ ಆಧಾರವಾಗಿದ್ದರು. ಸ್ಥಳೀಯ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು, 2010ರಲ್ಲಿ ಸಿಆರ್ಪಿಎಫ್ ಸೇರಿದ್ದರು. ಗುಡಿಸಿಲಿನಲ್ಲಿ ಕುಟುಂಬದವರು ವಾಸ ಮಾಡಬಾರದು ಎಂದು ಹೊಸ ಮನೆಯನ್ನು ಕಟ್ಟಿಸಿದ್ದರು.

ರಕ್ಷಣಾ ಸಚಿವರಿಂದ ಸಾಂತ್ವನ
ಮನೆಯ ಒಬ್ಬ ಮಗನನ್ನು ಎರಡು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಕುಟುಂಬಕ್ಕೆ ಸಿ.ಶಿವಚಂದ್ರನ್ ಆಧಾರವಾಗಿದ್ದರು. ಆದರೆ, ಈಗ ಆತನನ್ನು ಕಳೆದುಕೊಂಡ ಕುಟುಂಬ ಕಂಗೆಟ್ಟಿದೆ. ಮುಂದಿನ ದಾರಿ ಏನು? ಎಂಬ ಚಿಂತೆಯಲ್ಲಿ ಮುಳುಗಿದೆ. ಸಿ.ಶಿವಚಂದ್ರನ್ ಅಂತ್ಯ ಸಂಸ್ಕಾರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾಲ್ಗೊಂಡಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.












Click it and Unblock the Notifications