ಬಂಡೀಪುರದಲ್ಲಿ ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಕಾಡಾನೆ
ಚಾಮರಾಜನಗರ, ಫೆಬ್ರವರಿ 04 : ಬಂಡೀಪುರಕ್ಕೆ ವೀಕೆಂಡ್ ಸಫಾರಿಗೆ ಬಂದಿದ್ದ ಪ್ರವಾಸಿಗರು ಶನಿವಾರ ಸಂಜೆ (ಫೆ.2) ಸಫಾರಿಗೆ ತೆರಳಿದಾಗ ಒಂಟಿ ಸಲಗವೊಂದು ವಾಹನವನ್ನು ಅಟ್ಟಾಡಿಸಿಕೊಂಡು ಬಂದಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರು ಪಾರಾಗಿದ್ದಾರೆ.
ಶನಿವಾರ ಸಂಜೆ ನಾಲ್ಕು ಮಂದಿ ಪ್ರವಾಸಿಗರು ತೆರೆದ ಜೀಪಿನಲ್ಲಿ ಕಾಡಿನೊಳಗೆ ಸಫಾರಿವಲಯದಲ್ಲಿ ತೆರಳುತ್ತಿದ್ದಂತೆಯೇ ಮರದ ಮರೆಯಲ್ಲಿದ್ದ ಭಾರೀ ಗಾತ್ರದ ಒಂಟಿಸಲಗವೊಂದು 300 ಮೀಟರ್ಗಳಿಗೂ ಹೆಚ್ಚು ಅಂತರದವರೆಗೆ ಜೀಪನ್ನು ಅಟ್ಟಿಸಿಕೊಂಡು ಬಂದಿದೆ. ಇದೇ ವೇಳೆ ಜೀಪ್ ಚಾಲಕ ಸಮಯ ಪ್ರಜ್ಞೆ ತೋರಿದ್ದು, ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವ ಮೂಲಕ ಕಾಡಾನೆ ನಡೆಸಬಹುದಾಗಿದ್ದ ದಾಳಿಯಿಂದ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಸಾವಿನ ತಾಣವಾಗಿ ಮಾರ್ಪಾಡಾದ ಪ್ರವಾಸಿ ತಾಣ ಮುತ್ತತ್ತಿ
ಈ ವಿಷಯ ಹೊರಬರುತ್ತಿದ್ದಂತೆಯೇ ಆತಂಕ ಎದುರಾಗಿದೆ. ಜತೆಗೆ ಸಫಾರಿ ವಾಹನಗಳಲ್ಲಿ ಇಲಾಖೆಯ ಚಾಲಕನನ್ನು ಹೊರತುಪಡಿಸಿ ಬೇರಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳು ಇರುವುದಿಲ್ಲ ಮತ್ತು ವನ್ಯಜೀವಿಗಳ ದಾಳಿ ಎದುರಿಸುವ ಸಂಬಂಧ ಯಾವುದೇ ರೀತಿಯ ಮುಂಜಾಗ್ರತಾ ವ್ಯವಸ್ಥೆಗಳಿರುವುದಿಲ್ಲ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಜನ ಸಾಮಾನ್ಯರು ಕೇಳುತ್ತಿದ್ದಾರೆ.
ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಭಾರೀ ಬೆಲೆ ತೆರಬೇಕಾಗಬಹುದು. ಜತೆಗೆ ಸಫಾರಿಗೆ ತೆರಳುವ ಪ್ರವಾಸಿಗರು ಕೂಡ ಎಚ್ಚರವಾಗಿರಬೇಕು. ಒಂದಷ್ಟು ಸೂಚನೆಗಳನ್ನು ಪಾಲಿಸಬೇಕಿದೆ.