ಮಹದೇವಪ್ರಸಾದ್ ಎಂಬ 'ಭುಜಕೀರ್ತಿ' ಕಳಚಿದ ಮೇಲೆ 'ಕೈ' ಸ್ಥಿತಿ ಏನು?
ಮೈಸೂರು, ಜನವರಿ 6: ಹಳೇ ಮೈಸೂರು ವ್ಯಾಪ್ತಿಯಲ್ಲಿ ತನ್ನದೇ ಆದ ವರ್ಚಸ್ಸಿನಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಮರಣವನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈಯಂತಿದ್ದ ಮಹದೇವ ಪ್ರಸಾದ್ ಅವರ ಅಗಲಿಕೆ ಸದ್ಯದ ಮಟ್ಟಿಗೆ ಚಾಮರಾಜನಗರಕ್ಕೆ ಮಾತ್ರವಲ್ಲ ಹಳೇ ಮೈಸೂರು ಭಾಗದಲ್ಲಿಯೂ ಸೂತಕದ ಛಾಯೆಯನ್ನು ಮೂಡಿಸಿದೆ. ಮೈಸೂರು ವ್ಯಾಪ್ತಿಯಲ್ಲಿ ಪಾದರಸದಂತೆ ಓಡಾಡುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು ರಾಕೇಶ್ ಸಿದ್ದರಾಮಯ್ಯ.['ಮುಂದಿನ ಚುನಾವಣೆಯಲ್ಲಿ ಮಹದೇವ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೊಡಿ']
ಅವರ ಅಗಲಿಕೆ ಒಂದು ಕಡೆಯಾಗಿದ್ದರೆ, ಮತ್ತೊಂದು ಕಡೆ ಪ್ರಭಾವಿ ನಾಯಕ ಮಹದೇವ ಪ್ರಸಾದ್ ಕೈಬಿಟ್ಟು ಬಾರದ ಲೋಕದತ್ತ ಹೋಗಿರುವುದು ನಿಜಕ್ಕೂ ಸಿದ್ದರಾಮಯ್ಯ ಅವರಿಗೆ ಆಘಾತವೇ. ನಂಜನಗೂಡಿನಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅತ್ತಕಡೆ ಹೆಚ್ಚಿನ ಗಮನ ಹರಿಸುತ್ತಿದ್ದ ಬೆನ್ನಲ್ಲೇ ಮಹದೇವ ಪ್ರಸಾದ್ ಅವರ ನಿಧನದಿಂದ ಮತ್ತೊಂದು ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
ಎರಡು ಕಡೆ ಚುನಾವಣಾ ದೃಷ್ಟಿಯಿಂದ ಹೆಚ್ಚಿನ ಒತ್ತು ನೀಡಲೇಬೇಕಾಗಿದೆ. ಎರಡು ಕ್ಷೇತ್ರದಲ್ಲಿಯೂ ಮತ್ತೆ ಕಾಂಗ್ರೆಸ್ ಸ್ಥಾನವನ್ನು ಉಳಿಸಿಕೊಳ್ಳಲೇ ಬೇಕಾಗಿದೆ.
ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ
ಈ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳದೆ ಹೋದರೆ ಕಾಂಗ್ರೆಸ್ ಗೆ ಮುಖಭಂಗವಾಗುತ್ತದೆ. ಜತೆಗೆ ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಹೆಚ್ಚಿದೆ. ಜನ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬೇರೆ ಪಕ್ಷಗಳ ಆಡಳಿತವನ್ನು ಬಯಸುತ್ತಿದ್ದಾರೆ ಎಂಬರ್ಥದಲ್ಲಿ ಪ್ರತಿಪಕ್ಷಗಳು ಅದನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆಯನ್ನು ಬೆಳೆಸಿಕೊಳ್ಳುವುದಂತೂ ನಿಶ್ಚಿತ.
ವರ್ಚಸ್ಸಿಗೆ ಪೆಟ್ಟು
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕರೆದಿದ್ದ ಕಾರ್ಯಕರ್ತರ ಸಭೆಗೆ ಎಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಕಾರ್ಯಕರ್ತರಿಗಾಗಿ ಹಾಕಿಸಲಾಗಿದ್ದ ಆಸನಗಳೆಲ್ಲವೂ ಖಾಲಿ ಖಾಲಿಯಾಗಿದ್ದವು. ಇದನ್ನೆಲ್ಲ ಗಮನಿಸಿದರೆ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ನ ವರ್ಚಸ್ಸಿಗೆ ಪೆಟ್ಟು ಬೀಳುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
23 ವರ್ಷದಿಂದ ಗೆಲುವು
ಇನ್ನು ಚಾಮರಾಜನಗರದಲ್ಲಿ ಕಾಂಗ್ರೆಸ್ ಪಾಲಿಗೆ ಮಹದೇವಪ್ರಸಾದ್ ಅಗಲಿಕೆ ತುಂಬಲಾರದ ನಷ್ಟವಾಗಿದೆ. ದಿವಂಗತ ನಾಗರತ್ನಮ್ಮ ಅವರ ನಂತರ ಸಮರ್ಥವಾಗಿ ಮತ್ತು ಸತತ 23 ವರ್ಷಗಳ ಕಾಲ ನಿರಂತರ 5 ಗೆಲುವಿನೊಂದಿಗೆ 5 ಬಾರಿ ಶಾಸಕ, 3 ಬಾರಿ ಸಚಿವರಾಗಿ ದುಡಿಯುವುದರೊಂದಿಗೆ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದರು ಮಹದೇವ ಪ್ರಸಾದ್. ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರವಾಗಿತ್ತು.
ಮಹದೇವ ಪ್ರಸಾದ್ ಕುಟುಂಬದವರು ಸ್ಪರ್ಧಿಸುತ್ತಾರಾ?
ಮನೆ ಯಜಮಾನನ ಅಗಲಿಕೆಯಿಂದ ಪತ್ನಿ ಗೀತಾ ಮಹದೇವಪ್ರಸಾದ್ ಮತ್ತು ಸಹೋದರ ನಂಜುಂಡಪ್ರಸಾದ್ ಸೇರಿದಂತೆ ಎಲ್ಲರೂ ಸದ್ಯ ಮೌನಕ್ಕೆ ಜಾರಿದ್ದಾರೆ. ಅವರಿಗೆ ಆಘಾತದಿಂದ ಹೊರಬರಲು ಇನ್ನಷ್ಟು ದಿನಗಳು ಬೇಕಾಗಬಹುದು. ಹೀಗಾಗಿ ಈಗಾಗಲೇ ಅವರೊಂದಿಗೆ ರಾಜಕೀಯವಾಗಿ ವ್ಯವಹರಿಸುವುದು ಕಷ್ಟವೇ. ಒಂದು ವೇಳೆ ಪಕ್ಷದ ನಾಯಕರು ಒಮ್ಮತದಿಂದ ಪತ್ನಿ ಗೀತಾ ಅವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಮಾಡುತ್ತಾರಾ? ಅದಕ್ಕೆ ಅವರು ಒಪ್ಪುತ್ತಾರೋ ಗೊತ್ತಿಲ್ಲ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಂಕು
ಮಹದೇವಪ್ರಸಾದ್ ಸ್ವಕ್ಷೇತ್ರ ಗುಂಡ್ಲುಪೇಟೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಮಂಕು ಕವಿದಿದೆ. ಪರಿಣಾಮ ಕಾಂಗ್ರೆಸ್ ಕಚೇರಿ ಬಿಕೋ ಎನ್ನುತ್ತಿದೆ. ಈಗಾಗಲೇ ಎಪಿಎಂಸಿ ಚುನಾವಣೆ ಬಂದಿದ್ದು, ಮುಖಂಡರು, ಕಾರ್ಯಕರ್ತರು ಜನವರಿ 12ರಂದು ನಡೆಯುವ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಯಾರಲ್ಲೂ ಉತ್ಸಾಹ ಕಾಣುತ್ತಿಲ್ಲ. ಈ ಎಲ್ಲವನ್ನು ಗಮನಿಸಿದರೆ ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೋವು ಬದಿಗೊತ್ತಿ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸುವುದು ಅನಿವಾರ್ಯವಾಗಿದೆ.