ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಅಸ್ಪೃಶ್ಯತೆ ಆಚರಿಸಿದ ಲಿಂಗಾಯತರು: ಪ್ರಕರಣ ದಾಖಲು
ಚಾಮರಾಜನಗರ, ನ. 21: ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂದು ಗೋಮೂತ್ರ ಸಿಂಪಡಿಸಿ ನೀರಿನ ಟ್ಯಾಂಕ್ ಸ್ಬಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.
ದಲಿತ ಮಹಿಳೆ ನೀರು ಕುಡಿದಿದ್ದಾರೆ ಎಂದು ಇಡೀ ಟ್ಯಾಂಕ್ನ ನೀರು ಖಾಲಿ ಮಾಡಿ ಗೋಮೂತ್ರದಿಂದ ಶುದ್ಧಿಕರಿಸಲಾಗಿತ್ತು. ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಸ್ವಚ್ಛ: ಎಲ್ಲಾ ತೊಂಬೆಗಳಲ್ಲಿ ನೀರು ಕುಡಿದ ದಲಿತರು
ಪೊಲೀಸರ ಪ್ರಕಾರ, ದಲಿತ ಮಹಿಳೆ ನೀರು ಕುಡಿದ ಕಾರಣ ಲಿಂಗಾಯತ ಸಮುದಾಯದ ಜನರು ಆಕ್ರೋಶಗೊಂಡು ಟ್ಯಾಂಕ್ನ ನೀರು ಖಾಲಿ ಮಾಡಿ ಗೋಮುತ್ರದಿಂದ 'ಶುದ್ಧಿಕರಣ' ಮಾಡಿರುವ ಘಟನೆ ಹೆಗ್ಗಟೋರಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ" ಎಂದಿದ್ದಾರೆ.
ಘಟನೆಯ ನಂತರ ಗ್ರಾಮಸ್ಥ ಗಿರಿಯಪ್ಪ ನೀಡಿದ ದೂರಿನ ಹಿನ್ನೆಲೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015ರ ಕಲಂ 3(1)(ಝಾ)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
'ದಲಿತ ಮಹಿಳೆ ಶಿವಮ್ಮ ಹೆಗ್ಗತೋರಾದಲ್ಲಿ ಮದುವೆಗೆ ಬಂದಿದ್ದು, ಊಟ ಮುಗಿಸಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೃಷ್ಣದೇವರಾಯ ದೇವಸ್ಥಾನದ ಬಳಿ ಇರುವ ತೊಟ್ಟಿಗೆ ನೀರು ಕುಡಿಯಲು ಹೋಗಿದ್ದರು. ಆಗ ಗ್ರಾಮದ ಲಿಂಗಾಯತ ಮುಖಂಡ ಮಹದೇವಪ್ಪ, ಆಕೆ ಕೆಳಜಾತಿಗೆ ಸೇರಿದವಳಾಗಿದ್ದು, ತೊಂಬೆಯಿಂದ ಕುಡಿಯುವಂತಿಲ್ಲ " ಎಂದು ನಿಂದಿಸಿದ್ದಾರೆ. ಬಳಿಕ ಮೇಲ್ಜಾತಿಯ ಜನರು ಸೇರಿ ತೊಂಬೆಯಲ್ಲಿನ ನೀರನ್ನು ಖಾಲಿ ಮಾಡಿ, ಶುದ್ಧಿಕರಣ ಮಾಡುತ್ತೇವೆ ಎಂದು ಗೋಮುತ್ರ ಸಿಂಪಡಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೆ ಇಂತಹ ತಾರತಮ್ಯವನ್ನು ಸಹಿಸುವುದಿಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಭಾನುವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸುಮಾರು 20 ದಲಿತರನ್ನು ಆ ಭಾಗದ ಎಲ್ಲ ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳಲ್ಲಿ ನೀರು ಕುಡಿಯುವಂತೆ ಕರೆ ನೀಡಿದ್ದರು. ಇದರಂತೆ ದಲಿತ ಯುವಕರು ಎಲ್ಲಾ ಟ್ಯಾಂಕ್ಗಳಲ್ಲಿ ನೀರು ಕುಡಿದು ಅಸ್ಪೃಶ್ಯತೆ ಆಚರಣೆ ಮಾಡುವವರಿಗೆ ಸವಾಲು ಹಾಕಿದ್ದಾರೆ.
ಬಳಿಕ ತಹಶೀಲ್ದಾರ್ ಐ ಇ ಬಸವರಾಜು ಸಹ ಗ್ರಾಮಸ್ಥರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ, ಸಾರ್ವಜನಿಕ ಬಳಕೆಗಿರುವ ನೀರಿನ ಟ್ಯಾಂಕ್ಗಳನ್ನು ಎಲ್ಲಾ ವರ್ಗದವರು ಬಳಸಬಹುದು, ಮತ್ತೆ ಇಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.