ಚಾಮರಾಜನಗರ ಗಡಿಭಾಗದಲ್ಲಿ ನಕ್ಸಲರಿರುವ ಶಂಕೆ!
ಚಾಮರಾಜನಗರ, ಫೆಬ್ರವರಿ 8: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಕರ್ನಾಟಕ- ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಅರಣ್ಯಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಸೇರಿದಂತೆ ಪೊಲೀಸರು ಸನ್ನದ್ಧರಾಗಿರಲು ಕಾರ್ಯ ತಂತ್ರ ರೂಪಿಸಿದ್ದಾರೆ.
ಮೂರೂ ರಾಜ್ಯಗಳ ಅಪರಾಧ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ನಡೆಸಲು ತಿರ್ಮಾನಿಸಿದ್ದಾರೆ. ಕೆಲವು ತಿಂಗಳ ಹಿಂದೆಯೇ ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆಯ ಬಗ್ಗೆ ಗುಮಾನಿಯಿತ್ತು. ಈ ಬಗ್ಗೆ ಪೊಲೀಸರು ಕೆಲವು ವ್ಯಕ್ತಿಗಳ ಭಾವಚಿತ್ರಗಳನ್ನು ಪ್ರಕಟಿಸಿ, ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.[ಕಾರ್ಕಳ ನಕ್ಸಲ್ ಮುಖಂಡ ನೀಲಗುಳಿ ಸಿಐಡಿ ಕಸ್ಟಡಿಗೆ]
ದಟ್ಟವಾದ ಅರಣ್ಯ ಇರುವುದರಿಂದ ಮತ್ತು ಮೂರು ರಾಜ್ಯಗಳಿಗೂ ಈ ಅರಣ್ಯ ಸಂಪರ್ಕ ಕಲ್ಪಿಸುವುದರಿಂದ ನಕ್ಸಲರು ತಮ್ಮ ಕಾರ್ಯಸ್ಥಾನವಾಗಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೇರಿದಂತೆ ಪೊಲೀಸ್ ಇಲಾಖೆ ಸನ್ನದ್ಧವಾಗಿರುವುದು ಅನಿವಾರ್ಯವಾಗಿದೆ.
ಹೀಗಾಗಿಯೇ ಈ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾವಹಿಸಲು ಈಗಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಚಾಮರಾಜನಗರ ಡಿಎಸ್ ಪಿ ಗಂಗಾಧರಸ್ವಾಮಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆದಿದೆ.
ಬಂಡೀಪುರದ ಅರಣ್ಯ ಇಲಾಖೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೂರೂ ರಾಜ್ಯಗಳ ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಕ್ಸಲರ ಚಟುವಟಿಕೆಗಳ ಬಗ್ಗೆ ಗಡಿಭಾಗದಲ್ಲಿ ಎಚ್ಚರಿಕೆ ವಹಿಸುವ ಮತ್ತು ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.[ನೋಟು ನಿಷೇಧ ಘೋಷಣೆ ನಂತರ 469 ನಕ್ಸಲ್ಸ್ ಶರಣಾಗತಿ]
ಗಡಿಯಲ್ಲಿ ಯಾವುದೇ ರೀತಿಯಲ್ಲಿ ಶಾಂತಿ ಭಂಗವಾಗದಂತೆ ಕಟ್ಟೆಚ್ಚರ ವಹಿಸಲು, ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದೊಳಗೆ ಘನತ್ಯಾಜ್ಯವನ್ನು ಸುರಿಯುವ ಕಾರ್ಯ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೆ ಅರಣ್ಯದೊಳಗೆ ಆಗಾಗ ದೊರೆಯುತ್ತಿರುವ ಅವರಿಚಿತ ಶವಗಳ ಬಗ್ಗೆ ತನಿಖೆ ನಡೆಸಿ, ಪತ್ತೆಹಚ್ಚಲು ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ ವ್ಯಾಪ್ತಿಯಲ್ಲಿದ್ದ ಕೆಲವು ನಕ್ಸಲರು ಬಂಡೀಪುರ ಅರಣ್ಯದತ್ತ ಧಾವಿಸಿರುವ ಬಗ್ಗೆ ಕೂಡ ಸಂಶಯಗಳಿವೆ.