ಮೊದಲ ಬಾರಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಹುಂಡಿ ಹಣ ಎಣಿಕೆ!
ಚಾಮರಾಜನಗರ, ಜನವರಿ 07: ವಿಷ ಪ್ರಸಾದದ ಪ್ರಕರಣದಲ್ಲಿ ರಾಜ್ಯಾದ್ಯಂತ ಸುದ್ದಿ ಮಾಡಿದ ದೇವಾಲಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ. ಇದೇ ಮೊದಲ ಬಾರಿಗೆ ದೇವಾಲಯದ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಹೊರವಲಯದಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯವಿದೆ. ಮಜರಾಯಿ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಒಟ್ಟು 1,69,600 ರೂ. ಕಾಣಿಕೆ ಸಂಗ್ರಹವಾಗಿದೆ.
2020ರ ಅಕ್ಟೋಬರ್ 20ರಿಂದ ದೇವಾಲಯದ ಬಾಗಿಲು ತೆರಯಲಾಗಿತ್ತು. ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಹನೂರು ತಾಲೂಕು ತಹಸೀಲ್ದಾರ್ ನಾಗರಾಜು ಸಮ್ಮುಖದಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಯಿತು.

ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಇದೇ ಮೊದಲ ಬಾರಿಗೆ ಎಣಿಕೆ ಕಾರ್ಯ ನಡೆದು ಇಲ್ಲಿನ ಆದಾಯದ ವಿಚಾರ ಹೊರಗೆ ಬಂದಿದೆ. ಹಿಂದೆ ಇದಕ್ಕಿಂತಲೂ ಹೆಚ್ಚಿನ ಹಣ ಸಂಗ್ರಹವಾಗುತ್ತಿತ್ತು. ದೇವಾಲಯದಿಂದ ಬರುತ್ತಿದ್ದ ಆದಾಯದ ಮೇಲೆ ಕಣ್ಣಿಟ್ಟಿದ್ದ ಇಮ್ಮುಡಿ ಮಹದೇವಸ್ವಾಮಿ ಮತ್ತು ತಂಡ ವಾಮಮಾರ್ಗದಲ್ಲಿ ದೇಗುಲವನ್ನು ತಮ್ಮ ವಶಕ್ಕೆ ಪಡೆಯಲು ಪ್ರಸಾದದಲ್ಲಿ ವಿಷ ಹಾಕಿದ್ದರು, 17 ಜನರು ಪ್ರಸಾದ ಸೇವಿಸಿ ಮೃತಪಟ್ಟಿದ್ದರು.
ವಿಷ ಪ್ರಸಾದ ಪ್ರಕರಣದ ಬಳಿಕ ಸರ್ಕಾರ ದೇಗುಲವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆದುಕೊಂಡಿದೆ. ಅಕ್ಟೋಬರ್ನಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಈಗ ಹುಂಡಿ ಎಣಿಕೆ ಮಾಡಲಾಗಿದೆ.












Click it and Unblock the Notifications