ಚಾಮರಾಜನಗರದಲ್ಲಿ ಮಳೆಯಲ್ಲೇ ಮಹಿಳೆ ಧರಣಿ; ಎಸ್ಪಿ ಹೇಳಿದ್ದೇನು?
ಚಾಮರಾಜನಗರ, ಜೂನ್ 15: ಜಮೀನನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರು ನೀಡಿ ನಗರದ ಪೂರ್ವ ಪೊಲೀಸ್ ಠಾಣೆ ಎದುರು ಶನಿವಾರ ಒಂಟಿ ಮಹಿಳೆಯೊಬ್ಬರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಎಚ್.ಡಿ.ಆನಂದ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೂರುದಾರ ಮಹಿಳೆಯ ಜಮೀನನ್ನು ಯಾರು ಕೂಡ ಅಕ್ರಮಿಸಿಕೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಳೆಯಲ್ಲಿಯೇ ಠಾಣೆ ಎದುರು ಪ್ರತಿಭಟನೆ ನಡೆಸಿದ ಮಹಿಳೆ ಸುಶೀಲ ಅವರ ದೂರಿನ ಬಗ್ಗೆ ಚಂದಕವಾಡಿ ಹೋಬಳಿ ಎಚ್.ಡಿ. ಫಾರೆಸ್ಟ್ ಸರ್ವೆ ನಂ 1/168 ಸೇರಿದ್ದು, 1/134 ಸರ್ವೆ ನಂ ಎನ್.ಸಿದ್ದಯ್ಯ ಅವರಿಗೆ ಸೇರಿರುವುದು ಮೂಲ ದಾಖಲೆಗಳಿಂದ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಖಾತರಿಯಾಗಿದೆ" ಎಂದು ತಿಳಿಸಿದ್ದಾರೆ.

ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳ ಸ್ಧಳ ಪರಿಶೀಲನೆ ಸಮಯದಲ್ಲಿ ಅರ್ಜಿದಾರರ ಜಮೀನನ್ನು ಸಿದ್ದಯ್ಯ ಅವರು ಅಕ್ರಮವಾಗಿ ಅತಿಕ್ರಮಿಸಿರುವುದು ಕಂಡುಬಂದಿಲ್ಲ್ಲ. ಜಿಲ್ಲಾಧಿಕಾರಿಗಳು ಈಗಾಗಲೇ ಸರ್ವೆ ನಂ 1/134ರ ಪಾಳು ಬಿದ್ದಿರುವ ಮೂರು ಎಕರೆ ಜಮೀನು ಮಂಜೂರು ಅರ್ಜಿದಾರ ಸುಶೀಲ ಎಂಬುವರಿಗೆ ಸೇರಿರುವುದು ಎಂದು ಸ್ಪಷ್ಟಪಡಿಸಿದ್ದಾರೆ. ದೂರುದಾರರ ಜಮೀನನ್ನು ಯಾರು ಕೂಡ ಅಕ್ರಮಿಸಿಕೊಂಡಿಲ್ಲ್ಲ ಎಂದು ತಿಳಿಸಿದ್ದಾರೆ.

ಶನಿವಾರ ಸುಶೀಲ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಮಳೆಯಲ್ಲಿಯೇ ನೆನೆಯುತ್ತಾ ಪ್ರತಿಭಟನೆ ನಡೆಸಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರೊಂದಿಗೆ ಟೀಕೆ ಟಿಪ್ಪಣಿಗೆ ಕಾರಣವಾಗಿತ್ತು. ಆದರೆ ಇದೀಗ ಪೊಲೀಸರು ತನಿಖೆ ನಡೆಸಿ ಸ್ಪಷ್ಟನೆ ನೀಡಿದ್ದು ಪ್ರಕರಣಕ್ಕೆ ತೆರೆಬಿದ್ದಂತಾಗಿದೆ.












Click it and Unblock the Notifications