ಬಂಡೀಪುರದಲ್ಲಿ ಟೀಗೆ 20, ಪಾಪ್ ಕಾರ್ನ್ ಗೆ 50, ಊಟಕ್ಕೆ 100 ರುಪಾಯಿ
ಚಾಮರಾಜನಗರ, ನವೆಂಬರ್ 7: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಕಾಫಿ, ತಿಂಡಿಗೆ ದುಬಾರಿ ದರ ವಿಧಿಸುವ ಮೂಲಕ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನವೆಂಬರ್ 1ರಿಂದ ಬಂಡೀಪುರ ಸಫಾರಿ ದುಬಾರಿ
ಈ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಹೋಟೆಲ್, ಅಂಗಡಿಗಳು ಇಲ್ಲದ ಕಾರಣ ಇರುವ ಕ್ಯಾಂಟೀನ್ ನಲ್ಲಿ ಹೆಚ್ಚಿನ ದರ ವಿಧಿಸಿದರೂ ಕೂಡ ಪ್ರವಾಸಿಗರು ಮರು ಮಾತನಾಡದೆ ದುಬಾರಿ ಬೆಲೆ ನೀಡಿ, ಖರೀದಿಸುತ್ತಿರುವುದು ಕಂಡುಬರುತ್ತಿದೆ.
ಪರಿಸರ ಸೂಕ್ಷ್ಮ ವಲಯ ಆಗಿರುವುದರಿಂದ ಇಲ್ಲಿ ಜನರೇಟರ್, ಯಂತ್ರೋಪಕರಣ ಬಳಕೆಗೆ ಅವಕಾಶವಿಲ್ಲ. ಆದರೆ ಇದನ್ನೆಲ್ಲ ಗಾಳಿಗೆ ತೂರಿ ಬಂಡೀಪುರ ಹುಲಿ ಯೋಜನೆಯ ಕ್ಯಾಂಪಸ್ ನಲ್ಲಿ ಎರಡು ಭಾರೀ ಗಾತ್ರದ ಡೀಸೆಲ್ ಜನರೇಟರ್ ಬಳಕೆ ಮಾಡುತ್ತಿದ್ದು, ಇವುಗಳ ಬಳಕೆಯಿಂದ ಉಂಟಾಗುವ ಶಬ್ದ ಹಾಗೂ ಹೊಗೆಯಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ಮಾತ್ರ ಯಾರ ಗಮನಕ್ಕೂ ಬಾರದಂತಾಗಿದೆ.
ಬಂಡೀಪುರಕ್ಕೆ ವಿದ್ಯುತ್ ಸಂಪರ್ಕವಿದ್ದರೂ ವೋಲ್ಟೇಜ್ ಕೊರತೆಯ ಕಾರಣದಿಂದ ಜನರೇಟರ್ ಬಳಕೆ ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ. ಉದ್ಯಾನದಲ್ಲಿ ಟೆಂಡರ್ ಪಡೆದು ನಡೆಸುತ್ತಿರುವ ಕ್ಯಾಂಟಿನ್ ನಲ್ಲಿ ಸಾಧಾರಣ ಗುಣಮಟ್ಟದ ಊಟಕ್ಕೆ 100 ರುಪಾಯಿ ನಿಗದಿ ಮಾಡಲಾಗಿದೆ.
ಅಲ್ಲದೆ ಮಧ್ಯಾಹ್ನದ ನಂತರ ಟಿಕೆಟ್ ಕೌಂಟರ್ ಬಳಿ ಐಸ್ ಕ್ರೀಂ ಮಾರಾಟ ಮಾಡಲು ಅನುಮತಿ ಪಡೆದು ಚಾಟ್ ಸೆಂಟರ್ ತೆರೆದು ಪ್ರವಾಸಿಗರಿಗೆ ಚಾಟ್ಸ್, ಜ್ಯೂಸ್, ವಡೆ, ಬೋಂಡಾ, ಪಾಪ್ ಕಾರ್ನ್, ಟೀ, ಕಾಫಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯೂ ಗ್ಯಾಸ್ ಚಾಲಿತ ಜನರೇಟರ್ ಅಳವಡಿಸಿ ಬಳಸಲಾಗುತ್ತಿದೆ.
ಬಂಡೀಪುರದಲ್ಲಿ ಬೇರೆಲ್ಲೂ ಟೀ, ಕಾಫಿ ಹಾಗೂ ಆಹಾರ ಪದಾರ್ಥಗಳು ದೊರಕದ ಹಿನ್ನೆಲೆಯಲ್ಲಿ ಪ್ರವಾಸಿಗರು ಒಂದು ಕಪ್ ಟೀಗೆ 20 ರುಪಾಯಿ, ಒಂದು ಪಾಪ್ ಕಾರ್ನ್ ಗೆ 50 ರುಪಾಯಿ ದುಬಾರಿ ಬೆಲೆ ನೀಡುವುದು ಅನಿವಾರ್ಯವಾಗಿದ್ದು, ದೂರದಿಂದ ಬರುವ ಪ್ರವಾಸಿಗರು ಇವುಗಳ ಬೆಲೆ ಕೇಳಿ ಹೌಹಾರುವುದು ಮಾಮೂಲಿಯಾಗಿದೆ.
ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಿದೆ. ಪ್ರತಿ ದಿನ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಹೀಗಿರುವಾಗ ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ಹಿಡಿಶಾಪ ಹಾಕಿಕೊಂಡು ಹೋಗುವಂತೆ ಮಾಡುತ್ತಿರುವುದೆಷ್ಟು ಸರಿ?