ಚಾಮರಾಜನಗರದಲ್ಲಿ ಮದ್ಯ ಖರೀದಿಗೆ ಮುಗಿಬಿದ್ದ ಪಾನಪ್ರಿಯರು!
ಚಾಮರಾಜನಗರ, ಜುಲೈ 5: ಸುಪ್ರೀಂಕೋರ್ಟ್ ಆದೇಶದಿಂದ ಹೆದ್ದಾರಿ ಬದಿಯಲ್ಲಿದ್ದ ಮದ್ಯದಂಗಡಿಗಳ ಬಾಗಿಲು ಮುಚ್ಚಿದ ಪರಿಣಾಮವಾಗಿ ಗುಂಡ್ಲುಪೇಟೆಯ ಬೇಗೂರಿನ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಗಟು ಮಾರಾಟ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ತಾಲೂಕಿನಲ್ಲಿ ಹೆದ್ದಾರಿ ಬದಿಯಲ್ಲಿದ್ದ 24 ಮಳಿಗೆಗಳನ್ನು ಮುಚ್ಚಿದ ಪರಿಣಾಮವಾಗಿ ಬೇಗೂರು ಹಾಗೂ ಬೊಮ್ಮಲಾಪುರದಲ್ಲಿರುವ ಮದ್ಯದಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಕೇಂದ್ರಸ್ಥಾನದಲ್ಲಿರುವ ಬೇಗೂರಿನ ಎಂಎಸ್ಐಎಲ್ ಸಗಟು ಮಾರಾಟ ಮಳಿಗೆಯಲ್ಲಿ ಗರಿಷ್ಠ ಮಾರಾಟ ಬೆಲೆಗೆ ಉತ್ಪನ್ನಗಳು ದೊರೆಯುವುದರಿಂದ ಮದ್ಯ ಪ್ರಿಯರು ಇಲ್ಲಿ ಖರೀದಿಸಲು ಮುಗಿಬೀಳುತ್ತಿದ್ದಾರೆ.

ಇಲ್ಲಿಗೆ ತಾಲೂಕಿನವರಲ್ಲದೆ, ನಂಜನಗೂಡು ಹಾಗೂ ಹೆಗ್ಗಡದೇವನಕೋಟೆ ತಾಲೂಕಿನ ವಿವಿಧ ಗ್ರಾಮಗಳಿಂದಲೂ ಜನರು ದ್ವಿಚಕ್ರ ವಾಹನ, ಆಟೋ ಹಾಗೂ ಕಾರುಗಳಲ್ಲಿ ಬಂದು ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ಮಳಿಗೆಯ ಮುಂದೆ ಖರೀದಿದಾರರು ಸಾಲುಗಟ್ಟಿ ನಿಲ್ಲುತ್ತಿದ್ದು, ಸಾರ್ವಜನಿಕರು ತಿರುಗಾಡಲೂ ಸಾಧ್ಯವಿಲ್ಲದಂತಾಗಿದೆ.

ಬೆಳಗ್ಗೆ 10 ಗಂಟೆಗೆ ಬಾಗಿಲು ತೆರೆಯುವ ಮಳಿಗೆಯಲ್ಲಿ ಒಂದು ಕ್ಷಣವೂ ಬಿಡುವಿಲ್ಲದಂತೆ ಮದ್ಯಮಾರಾಟ ಮಾಡಲಾಗುತ್ತಿದ್ದು, ಹಿಂದೆ ದಿನವಹಿ 80 ಸಾವಿರ ರೂಪಾಯಿ ವಹಿವಾಟು ನಡೆಸುತ್ತಿದ್ದ ಮಳಿಗೆಯಲ್ಲಿ ಸದ್ಯ 2.5 ಲಕ್ಷ ರೂಪಾಯಿಗೂ ಹೆಚ್ಚಿನ ಮಾಲು ಮಾರಾಟವಾಗುತ್ತಿದೆ. ತಡರಾತ್ರಿ 10 ಗಂಟೆಯಾದರೂ ಬಾಗಿಲು ಮುಚ್ಚಲು ಅವಕಾಶ ನೀಡದೆ ಖರೀದಿ ಮಾಡಲು ಗ್ರಾಹಕರು ಮುಗಿ ಬೀಳುತ್ತಿರುವುದು ಕಂಡುಬರುತ್ತಿದೆ.












Click it and Unblock the Notifications