ಚಾಮರಾಜನಗರ: ಮನೆ ಮಾಲೀಕನನ್ನು ಹತ್ಯೆ ಮಾಡಿದ ಶ್ರೀಗಂಧ ಕಳ್ಳರು
ಚಾಮರಾಜನಗರ, ಅಕ್ಟೋಬರ್ 5: ಶ್ರೀಗಂಧದ ಮರ ಕದ್ದೊಯ್ಯಲು ಬಂದ ದುಷ್ಕರ್ಮಿಗಳು ಮನೆಯ ಮಾಲೀಕನನ್ನೇ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ಚಂದಕವಾಡಿಯಲ್ಲಿ ನಡೆದಿದೆ.
ಜನನಿಬಿಡ ಪ್ರದೇಶದಲ್ಲೇ ನಡೆದಿರುವ ಈ ಘಟನೆಯಿಂದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಹತ್ಯೆಗೀಡಾದವರನ್ನು ಚಂದಕವಾಡಿ ಗ್ರಾಮದ ಶಿವಬಸಪ್ಪ (80) ಎಂದು ಗುರ್ತಿಸಲಾಗಿದ್ದು, ಮನೆಯ ಅನತಿ ದೂರದಲ್ಲೇ ಇವರ ಶವ ಪತ್ತೆಯಾಗಿದೆ.
ಚಾಮರಾಜನಗರದ ರಾಮಾಪುರ ಆನೆ ಶಿಬಿರದಲ್ಲಿ ಗಜಪಡೆ ಚೆಂಡಾಟ...
ಶಿವಬಸಪ್ಪ ಪ್ರತಿದಿನ ಮನೆಯ ಹೊರಗೆ ಜಗುಲಿಯಲ್ಲಿ ಮಲಗುವುದು ವಾಡಿಕೆ. ಮನೆ ಮುಂದೆ ಬೆಳೆದು ನಿಂತಿದ್ದ ಶ್ರೀಗಂಧ ಮರ ಹಾಗೂ ಮನೆಯ ಮುಂಭಾಗವೇ ಇರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿರುವ ದನಕರುಗಳ ರಕ್ಷಣೆಗೆಂದೇ ಅವರು ಮನೆಯ ಹೊರಗೆ ಮಲಗುತ್ತಿದ್ದರು. ಈ ನಡುವೆ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಶ್ರೀಗಂಧ ಮರದ ಮೇಲೆ ಕಣ್ಣು ಹಾಕಿದ ಖದೀಮರು ಅದನ್ನು ಕದ್ದೊಯ್ಯಲು ಹೊಂಚು ಹಾಕಿದ್ದರು.
ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ
ನಿನ್ನೆ ಮಧ್ಯರಾತ್ರಿ ಶ್ರೀಗಂಧದ ಮರ ಕಡಿದು ಕದ್ದೊಯ್ಯಲು ಬಂದ ಕಳ್ಳರಿಗೆ ಮನೆಯ ಹೊರಗೆ ಮಾಲೀಕ ಶಿವಬಸಪ್ಪ ಮಲಗಿರುವುದು ಕಂಡುಬಂದಿದೆ. ತಕ್ಷಣವೇ ಶಿವಬಸಪ್ಪ ಅವರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಅನತಿ ದೂರಕ್ಕೆ ಎತ್ತೊಯ್ದಿದ್ದಾರೆ. ಬಳಿಕ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ ಮಾಡಿದ್ದಾರೆ. ಇದಕ್ಕೂ ಮೊದಲು ಮನೆಯೊಳಗೆ ಇರುವವರು ಯಾರೂ ಹೊರ ಬಾರದಂತೆ ಮನೆಯ ಬಾಗಿಲಿಗೆ ಚಿಲಕ ಹಾಕಿದ್ದಾರೆ.
ತಂದೆಗಾಗಿ ಗ್ರಾಮಸ್ಥರೊಡನೆ ಹುಡುಕಾಟ
ಶಿವಬಸಪ್ಪ ಅವರನ್ನು ಹತ್ಯೆ ಮಾಡಿದ ನಂತರ ಮನೆ ಬಳಿ ಬಂದ ಖದೀಮರು ಶ್ರೀಗಂಧದ ಮರವನ್ನು ಕೊಯ್ಯಲು ಆರಂಭಿಸಿದ್ದಾರೆ. ಈ ಶಬ್ಧ ಕೇಳಿ ಮನೆಯೊಳಗೆ ಮಲಗಿದ್ದ ಶಿವಬಸಪ್ಪ ಅವರ ಪುತ್ರ ಶಿವಕುಮಾರ್ ಮತ್ತಿತರರು ಚಿಲಕ ಮುರಿದು ಹೊರಬಂದಿದ್ದಾರೆ. ಪ್ರಯಾಸಪಟ್ಟು ಮನೆಯಿಂದ ಹೊರ ಬರುತ್ತಿದ್ದಂತೆ ಮನೆಯ ಮುಂಭಾಗ ಮರ ಕೊಯ್ಯುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ತಮ್ಮ ತಂದೆ ಕಾಣದೆ ಇದ್ದಾಗ ಶಿವಕುಮಾರ್ ಕೂಗಿಕೊಂಡು ಗ್ರಾಮಸ್ಥರೊಡನೆ ಹುಡುಕಾಟ ನಡೆಸಿದಾಗ ಮನೆಯ ಅನತಿ ದೂರದಲ್ಲಿ ಶಿವಬಸಪ್ಪ ಅವರ ಶವ ಪತ್ತೆಯಾಗಿದೆ.
ಪಕ್ಕದ ಗ್ರಾಮದ ವ್ಯಕ್ತಿಗಳ ಮೇಲೆ ಅನುಮಾನ
ಪಕ್ಕದ ಗ್ರಾಮ ಕೋಡಿಮೋಳೆಯ ವ್ಯಕ್ತಿಗಳಿಬ್ಬರು ಈ ಶ್ರೀಗಂಧದ ಮರವನ್ನು ಖರೀದಿಗೆ ಕೊಡುವಂತೆ ಆಗಾಗ ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ. ಅವರೇ ಈ ಕೃತ್ಯ ಎಸಗಿರಬಹುದು ಎಂದು ಸಹ ಶಂಕಿಸಲಾಗಿದೆ. ಜನನಿಬಿಡ ಪ್ರದೇಶದಲ್ಲೇ ನಡೆದಿರುವ ಈ ಘಟನೆಯಿಂದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಕೇವಲ ಒಂದು ಶ್ರೀಗಂದ ಮರಕ್ಕಾಗಿ ನಡೆದಿರುವ ಈ ಹತ್ಯೆಯಿಂದ ಜನರು ಭಯಭೀತರಾಗಿದ್ದಾರೆ.
Recommended Video
ಇನ್ಸ್ ಪೆಕ್ಟರ್ ನೇತೃತ್ವದ ತಂಡ ರಚನೆ
ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಖರೀದಿಗೆ ಮರ ಕೊಡುವಂತೆ ಒತ್ತಾಯ ಮಾಡುತ್ತಿದ್ದವರ ಮೇಲೆ ಶಂಕೆ ಇದ್ದು, ಪ್ರಕರಣದ ತನಿಖೆಗೆ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಅವರ ನೇತೃತ್ವದ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಮರಾಜನಗರದ ರಾಮಸಮುದ್ರ ಪೂರ್ವ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಪಾತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.