ಮಾನವೀಯತೆ ಮರೆತ ಆಲನಹಳ್ಳಿ ಜನರು: ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್ಐ ಯುವಕರು
ಚಾಮರಾಜನಗರ, ಮೇ 10: ಕೊರೊನಾ ಮಹಾಮಾರಿಯ ಭೀಕರತೆಗೆ ಇಂದು ಜನರು ನಿತ್ಯವೂ ಭಯದ ನೆರಳಿನಲ್ಲೆ ಬದುಕುವಂತಾಗಿದೆ. ನಿತ್ಯವೂ ಪ್ರತೀ ಊರಿನಲ್ಲೂ ಸೋಂಕಿತರು ಮರಣ ಹೊಂದುತ್ತಿದ್ದಾರೆ. ಆದರೆ ಈ ನಡುವೆ ಸೋಂಕು ಇಲ್ಲದವರು ಮೃತಪಟ್ಟರೂ ಜನರು ಶವ ಮುಟ್ಟುವುದಿರಲಿ, ನೋಡಲೂ ಹೋಗುತ್ತಿಲ್ಲ.
ಇಂತಹ ಅಮಾನವೀಯ ಘಟನೆಯೊಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಈ ಗ್ರಾಮದ 75 ವರ್ಷ ಪ್ರಾಯದ ವೃದ್ಧರೋರ್ವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ ಇದನ್ನೂ ಕೊರೊನಾ ಸಾವು ಎಂದೇ ತೀರ್ಮಾನಿಸಿಕೊಂಡ ಅಕ್ಕ ಪಕ್ಕದವರು, ಅವರ ಶವಕ್ಕೆ ಹೆಗಲು ಕೊಡಲು ಮುಂದೆ ಬಂದಿಲ್ಲ.
'ಕಾಸ್'ಬಾತ್ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ 300 ರೂ. ಕೊರೊನಾ ಲಸಿಕೆಗೆ 1200 ರೂ.!
ಇದನ್ನು ಕಂಡ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ವಾಹನ ಅಥವಾ ಆಂಬ್ಯುಲೆನ್ಸ್ ಸಿಗದೇ ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ನೆರವೇರಿಸಿದ್ದಾರೆ. ಪಿಎಫ್ಐ ಯುವಕರ ತಂಡದ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ದುರ್ದೈವ ಎಂದರೆ ಮೃತರಾದ ಮಹಾದೇವ ಎಂಬುವವರ ಅಕ್ಕಪಕ್ಕದ ಮನೆಯವರೂ ಕೊರೊನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಂತ್ಯಸಂಸ್ಕಾರಕ್ಕೂ ನೆರವು ನೀಡಲು ನಿರಾಕರಿಸಿದರು.
ಮೃತನ ಅಣ್ಣನ ಮಗ ಗ್ರಾಮದ ಮುಖಂಡನ ಸಹಾಯದಿಂದ ಕೊಳ್ಳೇಗಾಲ ಪಿಎಫ್ಐ ಯುವಕರಿಗೆ ಕರೆ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಹಕರಿಸುವಂತೆ ಕೇಳಿಕೊಂಡಿದ್ದ. ಕೂಡಲೇ ಸ್ಥಳಕ್ಕೆ 8 ಮಂದಿ ಮುಸ್ಲಿಂ ಯುವಕರ ತಂಡ ದೌಡಾಯಿಸಿ ಸಹಾಯಕ್ಕೆ ಬಂದಿದ್ದಾರೆ. ಪಿಎಫ್ಐ ಸಂಘಟನೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಪ್ರಯಾಸಪಟ್ಟು ಕೊಂಡೊಯ್ದಿದ್ದಾರೆ. ಕೊನೆಗೆ ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗಲೂ ಯಾರೊಬ್ಬರು ಸಹ ಮುಂದೆ ಬಾರದೆ ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಷ್ಟೇ ಅಲ್ಲ ಮೃತರ ಜಮೀನಿನಲ್ಲೂ ಮಣ್ಣು ಮಾಡಲು ಅವಕಾಶ ನೀಡದೆ ಸ್ಥಳೀಯರು ಅಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಲಾಯಿತು. ಆಗ ಪೋಲಿಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ, ಶವ ಹೂಳಲು ಗೋಮಾಳದಲ್ಲಿ ಜಾಗ ತೋರಿಸಿದ್ದಾರೆ. ನಂತರ ಸಂಘಟನೆಯ ಯುವಕರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಚಿಕ್ಕಪ್ಪನನ್ನು ಕಳೆದುಕೊಂಡ ಯುವಕನು ಅಂತಿಮ ಸಂಸ್ಕಾರವನ್ನು ಮಾಡಲಾಗದೇ ಹುಟ್ಟಿದ ಊರಿನಲ್ಲೇ ಈ ರೀತಿಯ ಪ್ರಯಾಸ ಅನುಭವಿಸಿದ ಸಂಕಷ್ಟ ಯಾರಿಗೂ ಬರಬಾರದು. ಇದೇ ಅಲ್ಲದೆ ನಿತ್ಯವೂ ಪರಸ್ಪರ ಮಾತನಾಡುತ್ತಿದ್ದ ಅಕ್ಕಪಕ್ಕದ ಮನೆಯವರೂ ಕೂಡ ಅಂತಿಮ ಸಂಸ್ಕಾರಕ್ಕೂ ಕೈ ಜೋಡಿಸದಿರುವುದು ಮಾನವೀಯತೆಯೇ ಸತ್ತು ಹೋಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
Recommended Video