ಸಿದ್ದರಾಮಯ್ಯರನ್ನ ಕಂಡರೇ ಮೋದಿಗೆ ಭಯ: ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ವ್ಯಂಗ್ಯ
ಚಾಮರಾಜನಗರ, ಜನವರಿ, 17: ಸಿದ್ದರಾಮಯ್ಯ ಅವರನ್ನು ಕಂಡರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಾಡುವ ಕೆಲಸ ಅಷ್ಟಿದೆ. ಆದರೆ ಸಿದ್ದರಾಮಯ್ಯ ಅವರಿಂದಾಗಿ ಮೋದಿ ರಾಜ್ಯಕ್ಕೆ ಓಡೋಡಿ ಬರುತ್ತಿದ್ದಾರೆ. ನೇರವಾಗಿ, ತೀಕ್ಷ್ಣವಾಗಿ ಬಿಜಿಪಿ ವಿರುದ್ಧ ಮಾತನಾಡುವುದರಿಂದ ಸಿದ್ದರಾಮಯ್ಯನನ್ನು ಕಂಡರೇ ಬಿಜೆಪಿ ಅವರಿಗೆ ನಡುಕ ಶುರುವಾಗುತ್ತದೆ. ರಾತ್ರಿ, ಹಾಗೂ ಬೆಳಗ್ಗೆ ಎದ್ದಾಗಲೂ ಸಿದ್ದರಾಮಯ್ಯ ಅವರ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು.
ಚಾಮರಾಜನಗರ ಪಿಡಿಒ, ಅಧಿಕಾರಿಗಳಿಗೆ ಭರ್ಜರಿ ಔತಣಕೂಟ ನೀಡಿದ ಸಚಿವ ವಿ.ಸೋಮಣ್ಣ
ಸಿದ್ದರಾಮಯ್ಯ ಒಂದು ಕ್ಷೇತ್ರ ಇಲ್ಲವೇ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರಿಗೇ ಬಿಟ್ಟ ವಿಚಾರವಾಗಿದ. ಆದರೆ, ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೆ ಗೆಲ್ಲುತ್ತಾರೆ. ಬಾದಾಮಿ ಜನರಂತೂ ಅಲ್ಲೇ ನಿಲ್ಲಬೇಕೆಂದು ಬೆನ್ನತ್ತಿದ್ದಾರೆ ಎಂದು ಸಿದ್ದರಾಮಯ್ಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗರ ಟೀಕೆಗೆ ತಿರುಗೇಟು
ಇನ್ನು ತಮ್ಮ ಭರವಸೆಗಳನ್ನು ಸುಳ್ಳೆಂದು ಜರಿಯುತ್ತಿರುವ ಬಿಜೆಪಿಗರ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಹುಟ್ಟುಗುಣವೇ ಸುಳ್ಳು. ನಾವು ಕೊಟ್ಟಿದ್ದ 165 ಭರವಸೆಗಳನ್ನಷ್ಟೂ ಈಡೇರಿಸಿದ್ದೇವೆ. ಅವರ ಯೋಗ್ಯತೆಗೆ 20-30 ಈಡೇರಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳನ್ನು ಅವರು ಉಳಿಸಿಕೊಳ್ಳಲಾಗಲಿಲ್ಲ ಎಂದು ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.
ಬಸವರಾಜ ಬೊಮ್ಮಾಯಿಗೆ ಸವಾಲ್
ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿ, ನಾನು ಸಚಿವನಾಗಿದ್ದ ವೇಳೆ ನನ್ನ ಕಚೇರಿಯಲ್ಲಿ ಹಣ ಸಿಕ್ಕಿತು ಎಂದು ಸಿಎಂ ಹೇಳಿದ್ದರು. ಅವರೇನಾದರೂ ಬಂದು ನೋಡಿದ್ದಾರೆಯೆ? ಸ್ಥಾನದ ಘನತೆ ಅರಿತು ಮಾತನಾಡಬೇಕು. ದಾಖಲಾತಿ ತರಿಸಿಕೊಂಡು ಹಣ ಸಿಕ್ಕಿತೆಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.