ಯಳಂದೂರಲ್ಲಿ ಕೋತಿ ಕಾಟಕ್ಕೆ ಬಸವಳಿದ ಜನ
ಚಾಮರಾಜನಗರ, ಫೆಬ್ರವರಿ 16 : ಬೇರೆಡೆಯಿಂದ ಬಂದು ಬೀಡು ಬಿಡುತ್ತಿರುವ ಕೋತಿಗಳ ಹಾವಳಿಗೆ ಯಳಂದೂರು ಪಟ್ಟಣದ ಜನ ಬಸವಳಿದಿದ್ದು, ಅವುಗಳಿಂದ ತಪ್ಪಿಸಿಕೊಂಡು ಬದುಕುವುದೇ ಕಷ್ಟವಾಗುತ್ತಿದೆ.
ಪಟ್ಟಣದ ಹಲವು ಬಡಾವಣೆಗಳಿಗೆ ನುಗ್ಗುತ್ತಿರುವ ಈ ಕೋತಿಗಳು ಮನೆಗಳ ಮೇಲೆ, ಅಂಗಡಿಗಳ ಮುಂದೆ, ಎಲ್ಲೆಂದರಲ್ಲಿ ಬೀಡುಬಿಟ್ಟು ತೊಂದರೆ ನೀಡುತ್ತಿವೆ. ಇದರಿಂದ ಜನ ತೊಂದರೆ ಅನುಭವಿಸುತ್ತಿದ್ದು, ಬೇರೆ ಏನೂ ಮಾಡಲಾಗದ ಪರಿಸ್ಥಿತಿ ಸ್ಥಳೀಯರದ್ದಾಗಿದೆ.
ಯಳಂದೂರಿನ ಅಗ್ರಹಾರ ಬಡಾವಣೆ, ದೇವಾಂಗ ಬೀದಿ, ಎಲೆಕೇರಿ ಬಡಾವಣೆ, ಮೊತ್ತದಕೇರಿ, ಗೌತಮ್ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಮನೆಗಳ ಮೇಲೆ ದಾಳಿ ಮಾಡುವ ಕೋತಿಗಳು ಹೆಂಚುಗಳನ್ನು ಒಡೆಯುವುದಲ್ಲದೆ ಕಿಟಕಿ, ಬಾಗಿಲುಗಳ ಮೂಲಕ ಮನೆಗೆ ನುಗ್ಗಿ ಆಹಾರ ಪದಾರ್ಥ ತರಕಾರಿ ಹಣ್ಣುಗಳನ್ನು ಹೊತ್ತೊಯ್ಯುತ್ತವೆ. ಹೀಗಾಗಿ ಜನ ಕೋತಿಗಳ ಹಾವಳಿಯಿಂದ ಭಯಭೀತರಾಗಿ ಕಿಟಕಿ, ಬಾಗಿಲುಗಳನ್ನು ಹಾಕಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.

ಕೆಲವೊಮ್ಮೆ ಕೋತಿಗಳನ್ನು ಓಡಿಸಲು ಹೋದ ವೇಳೆ ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಸಂಗಗಳು ಇಲ್ಲದಿಲ್ಲ. ಕಾಡಂಚಿನ ಜನಕ್ಕೆ ಚಿರತೆ, ಕಾಡಾನೆಗಳ ಕಾಟವಾದರೆ, ಪಟ್ಟಣದಲ್ಲಿರುವ ಹಿಂಡು ಹಿಂಡಾಗಿ ದಾಳಿ ಮಾಡುವ ಕೋತಿಗಳ ಕಾಟ ಆರಂಭವಾಗಿದೆ. ದಾರಿಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರು ಮತ್ತು ಮಕ್ಕಳ ಕೈನಿಂದ ವಸ್ತುಗಳನ್ನು ಕೆಲವು ಕೋತಿಗಳು ಎಳೆದುಕೊಂಡು ಹೋಗುತ್ತಿವೆ. ಒಟ್ಟಾರೆ ಸ್ಥಳೀಯ ಜನಕ್ಕೆ ಕೋತಿಗಳೊಂದಿಗೆ ಹೋರಾಟ ನಡೆಸುತ್ತಾ ಬದುಕುವುದೇ ಸವಾಲ್ ಆಗಿದೆ.
ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಜೀವನ ನಡೆಸುವುದು ಹೇಗೆ ಎಂಬುದರ ಬಗ್ಗೆ ಜನ ಚಿಂತಾಕ್ರಾಂತರಾಗಿದ್ದು, ಸ್ಥಳೀಯ ಪಂಚಾಯಿತಿ ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂಬುದಾಗಿ ಜನ ಆಗ್ರಹಿಸಿದ್ದಾರೆ.












Click it and Unblock the Notifications