ಮಾದಪ್ಪನ ಬೆಟ್ಟದಲ್ಲಿ 2 ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂದೂಡಿಕೆ, ಬೇಸತ್ತು ಹಸೆಮಣೆ ಏರಿದ 7 ನವಜೋಡಿಗಳು
ಚಾಮರಾಜನಗರ, ಆಗಸ್ಟ್, 29: ರಾಜ್ಯದ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಇನ್ನೂ ಮಹೂರ್ತ ಕೂಡಿಬರದ ಕಾರಣ ಬೇಸತ್ತ 7 ಜೋಡಿಗಳು ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿದ ಕಾರಣ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ 7 ಜೋಡಿಗಳು ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 23 ರಂದು ಸಾಮೂಹಿಕ ವಿವಾಹ ನಿಗದಿಯಾಗಿತ್ತು. ಆದರೆ, ಈ ದಿನಾಂಕ ಮುಂದೂಡಿಕೆಯಾಗಿ ಬಳಿಕ ಆಗಸಟ್ 28ರಂದು ನಿಗದಿಯಾಗಿತ್ತು. ಈಗ ಆಗಸಟ್ 28 ರ ಸಾಮೂಹಿಕ ವಿವಾಹ ಮತ್ತೆ ಮುಂದೂಡಿಕೆಯಾಗಿದ್ದು, ಇದಕ್ಕೆ ಭಕ್ತರು ಬೇಸರ ಹೊರಹಾಕಿದ್ದಾರೆ.

ಮಲೆಮಾದಪ್ಪನ ಸನ್ನಿಧಿಯಲ್ಲಿ ವಿವಾಹ ಆದರೆ ಶುಭ ಎಂಬ ನಂಬಿಕೆಯ ಹಿನ್ನೆಲೆ ಈಗಾಗಲೇ 67 ಜೋಡಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಈಗ ಎರಡು ಬಾರಿ ಮುಂದೂಡಿದ್ದಕ್ಕೆ ಬೇಸರಗೊಂಡು ಸಾಲೂರು ಮಠದಲ್ಲಿ ಸ್ವಂತ ಹಣದಲ್ಲಿ ಸೋಮವಾರ 7 ಜೋಡಿಗಳು ಮದುವೆಯಾಗಿದ್ದಾರೆ.
ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮಹಾದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ 2 ಬಾರಿ ವಿವಾಹ ಮುಂದೂಡಿಕೆಯಾಗಿದೆ.
ಆದ್ದರಿಂದ ಚಾಮರಾಜನಗರದ ಜಗದೀಶ್ ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್ಕುಮಾರ್ -ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯಕುಮಾರ್ - ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ - ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ -ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್ - ಸೌಭಾಗ್ಯ ಹಾಗೂ ಚಾಮರಾಜನಗರದ ರವಿ-ಸೌಮ್ಯ ಜೋಡಿಗಳು ಸಾಲೂರು ಬೃಹನ್ಮಠದಲ್ಲಿ ವಿವಾಹವಾಗಿದ್ದಾರೆ.
ಪ್ರಾಧಿಕಾರದ ಕಾರ್ಯದರ್ಶಿ ಹೇಳಿದ್ದೇನು?
ಇನ್ಮುಂದೆ ಪೋಸ್ಟ್ಪೋನ್ ಮಾಡುವುದಿಲ್ಲ, ಕೆಲವರ ದಾಖಲಾತಿ ಸರಿಪಡಿಸುವಿಕೆ ಹಾಗೂ ಉಸ್ತುವಾರಿ ಸಚಿವರ ಸಮಯಕ್ಕಾಗಿ ಕಾಯುತ್ತಿದ್ದೇವೆ. ಸೆಪ್ಟೆಂಬರ್ 3 ಅಥವಾ 6ರಂದು ಸಚಿವರು ಬರುವುದಾಗಿ ಹೇಳಿದ್ದು, ಈ ಬಾರಿ ಸಾಮೂಹಿಕ ವಿವಾಹ ಖಂಡಿತ ನೆರವೇರುತ್ತದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಚಿವರ ಸಮಯಕ್ಕಾಗಿ ಸಾಮೂಹಿಕ ವಿವಾಹವನ್ನೇ ಪ್ರಾಧಿಕಾರ ಮುಂದೂಡಿಕೆ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಒಂದಲ್ಲ ಎರಡು ಬಾರಿ ಶುಭ ಕಾರ್ಯ ಮುಂದೂಡಿರುವುದು ವಿಪರ್ಯಾಸವಾಗಿದೆ.












Click it and Unblock the Notifications