ಪೊಲೀಸರ ಕಣ್ಣಿಗೆ ಮಣ್ಣೆರಚಿ ಮರಳು ಸಾಗಿಸುತ್ತಿದ್ದವರ ಬಂಧನ
ಚಾಮರಾಜನಗರ, ಫೆಬ್ರವರಿ 13: ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕಿರುವ ಬೆನ್ನಲ್ಲೇ ಮರಳನ್ನು ಬೈಕ್ ಗಳಲ್ಲಿ ಸಾಗಣೆ ಮಾಡುತ್ತಾ ಪೊಲೀಸರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಬೈಕ್ ಸಹಿತ ಮರಳನ್ನು ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಮರಳಿಗೆ ಚಿನ್ನದ ಬೆಲೆ ಬಂದಿದ್ದು ಅದನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಮರಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಅದನ್ನು ಅಕ್ರಮವಾಗಿ ಮಾರಾಟ ಮಾಡಿ ಹೆಚ್ಚು ಹಣ ಸಂಪಾದಿಸಬಹುದೆಂಬ ಮನೋಭಾವ ಹೊಂದಿರುವ ಯುವಕರು ತಮ್ಮ ಬೈಕ್ ನಲ್ಲಿ ಮರಳು ಮೂಟೆಯನ್ನು ಸಾಗಿಸುವ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಾ ಬಂದಿದ್ದರು.
ಆದರೆ ಇದೀಗ ಮೂವರು ಮಾಲು ಸಹಿತ ಸಿಕ್ಕಿ ಬಿದ್ದಿದ್ದು ಒಬ್ಬ ತಪ್ಪಿಸಿಕೊಂಡಿದ್ದಾನೆ. ಟ್ರ್ಯಾಕ್ಟರ್, ಇನ್ನಿತರೆ ವಾಹನಗಳಲ್ಲಿ ಮರಳು ಸಾಗಿಸಿದರೆ ಪೊಲೀಸರಿಗೆ ಸಿಕ್ಕಿ ಬೀಳಬಹುದೆಂಬ ಉದ್ದೇಶದಿಂದ ಚೀಲಗಳಲ್ಲಿ ತುಂಬಿಸಿಕೊಂಡು ಬೈಕ್ ಗಳಲ್ಲಿಯೇ ಸಾಗಿಸುವ ಸಾಹಸಕ್ಕೆ ಈ ಆರೋಪಿಗಳು ಕೈ ಹಾಕಿದ್ದರು.

ಇದು ಒಂದಷ್ಟು ದಿನಗಳ ಕಾಲ ಯಾರ ಗಮನಕ್ಕೂ ಬಾರದ್ದರಿಂದ ಅದನ್ನೇ ದಂಧೆ ಮಾಡಿಕೊಂಡು ಅಕ್ರಮ ಮರಳು ಸಾಗಾಟವನ್ನು ಮುಂದುವರೆಸಿದ್ದರು. ಈ ನಡುವೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಹಂಪಾಪುರ ಗ್ರಾಮದ ಕಾವೇರಿ ನದಿ ತೀರದಿಂದ ಮರಳನ್ನು ಸಂಗ್ರಹಿಸಿ ಅದನ್ನು ಅಕ್ಕಿ ಮೂಟೆಗಳ ರೀತಿ ತಮ್ಮ ಬೈಕ್ ನಲ್ಲಿರಿಸಿಕೊಂಡು ನಾಲ್ವರು ಅಕ್ರಮವಾಗಿ ಸಾಗಿಸಿ ಮತ್ತೊಂದು ಕಡೆ ಸಂಗ್ರಹಿಸಿ ಅಲ್ಲಿಂದ ಮಾರಾಟ ಮಾಡುವ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಕೊಳ್ಳೇಗಾಲ ಪೊಲೀಸರಿಗೆ ಬಂದಿತ್ತು.
ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದರು. ಪಟ್ಟಣ ಪೊಲೀಸ್ ಠಾಣೆಯ ಎಸ್ಐ ವನರಾಜು ಮತ್ತು ಸಿಬ್ಬಂದಿ ರಾಮಚಂದ್ರ, ದುಂಡಪ್ಪ ಪೂಜಾರಿ, ಸುನೀಲ್, ಜಗದೀಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಗೆ ಸಿದ್ಧತೆ ನಡೆಸಿತ್ತು. ಇತ್ತ ಆರೋಪಿಗಳಾದ ಹೊಸಹಂಪಾಪುರ ಗ್ರಾಮದ ಮಲ್ಲಿಕಾರ್ಜುನ, ಮಹೇಶ್, ಸುದೀಪ ಹಾಗೂ ಸಂಜಯ್ ಎಂಬುವರು ಎಂದಿನಂತೆ ಬೈಕ್ ನಲ್ಲಿ ಮರಳು ಮೂಟೆಗಳನ್ನಿರಿಸಿಕೊಂಡು ಬಂದಿದ್ದಾರೆ. ತಕ್ಷಣ ಎಸ್ಐ ವನರಾಜು ನೇತೃತ್ವದ ತಂಡ ಅವರ ಮೇಲೆ ದಾಳಿ ಮಾಡಿದೆ.
ಈ ಸಂದರ್ಭ ಸುಜಯ್ ಎಂಬಾತ ತಪ್ಪಿಸಿಕೊಂಡು ಪರಾರಿಯಾದರೆ ಉಳಿದಂತೆ ಮಲ್ಲಿಕಾರ್ಜುನ, ಮಹೇಶ್, ಸುದೀಪ ಸೇರಿ ಮೂವರು ಸಿಕ್ಕಿ ಬಿದ್ದಿದ್ದಾರೆ. ಇವರಿಂದ ಮರಳಿನ ಮೂಟೆ ಹಾಗೂ ಸಾಗಾಣೆಗೆ ಬಳಸುತ್ತಿದ್ದ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.












Click it and Unblock the Notifications