ಚಾಮರಾಜನಗರ; ಹಿರಿಕೆರೆಯಲ್ಲೀಗ ಜಲಸಡಗರ

ಚಾಮರಾಜನಗರ, ನವೆಂಬರ್ 19; ಚಾಮರಾಜನಗರದಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಜಲಾಶಯ, ಕೆರೆಗಳು ಭರ್ತಿಯಾಗಿವೆ. ಪ್ರಮುಖ ಜಲಾಶಯ ಸುವರ್ಣಾವತಿ ಸುಮಾರು ಹನ್ನೊಂದು ವರ್ಷಗಳ ಬಳಿಕ ಭರ್ತಿಯಾಗಿದ್ದರೆ, ಮತ್ತೊಂದೆಡೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಹೊಂಗನೂರು ಹಿರಿಕೆರೆಯು 6 ವರ್ಷಗಳ ನಂತರ ಭರ್ತಿಯಾಗಿ ಕೋಡಿ ಬಿದ್ದಿದ್ದು ಜಲಧಾರೆ ಧುಮುಕುತ್ತಿರುವ ಸುಂದರ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಈಗಾಗಲೇ ಮಳೆಯಿಂದ ಜಿಲ್ಲೆಯಲ್ಲಿ ಹಲವು ಅನಾಹುತಗಳು ಸಂಭವಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಮಳೆಯಿಂದಾಗಿ ಇದುವರೆಗೆ ತುಂಬದೆ ಖಾಲಿಯಾಗಿದ್ದ ಕೆರೆಗಳೆಲ್ಲವೂ ಭರ್ತಿಯಾಗಿರುವುದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ತರುವ ಸಾಧ್ಯತೆಯಿದೆ. ಆದರೆ ಈಗ ಸುರಿಯುತ್ತಿರುವ ಮಳೆ ರೈತರ ಬೆಳೆಗೆ ಹಾನಿ ತಂದಿದ್ದು ಸಂಕಷ್ಟ ಪಡುವಂತಾಗಿದೆ. ಆದರೆ ಮಳೆಯಿಂದ ಕೆರೆಗಳು ತುಂಬುತ್ತಿರುವುದು ರೈತರಿಗೆ ನೆಮ್ಮದಿ ತರುತ್ತಿದೆ.

ಹಾಗೆ ನೋಡಿದರೆ ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಸುರಿಯುವ ಮಳೆಯ ನೀರನ್ನು ಹಿಡಿದಿಟ್ಟು ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ನೀರೊದಗಿಸುತ್ತಿದ್ದ ಕೆರೆಗಳು ನಂತರ ವರ್ಷಗಳಲ್ಲಿ ಅವುಗಳ ನಿರ್ಲಕ್ಷ್ಯದಿಂದಾಗಿ ಹೂಳು ತುಂಬಿ ಮಳೆ ಕಡಿಮೆಯಾಗಿದ್ದರಿಂದ ಬಹುತೇಕ ಕೆರೆಗಳು ನೀರಿಲ್ಲದೆ ಬರಡಾಗಿದ್ದವು. ಆದರೀಗ ಮಳೆಯಿಂದ ಅವುಗಳೆಲ್ಲವೂ ಭರ್ತಿಯಾಗುತ್ತಿರುವುದು ರೈತರಿಗೊಂದು ವರದಾನವಾಗಿ ಪರಿಣಮಿಸಿದೆ. ಮಳೆಯಿಂದ ಈ ಬಾರಿ ಬೆಳೆಗೆ ಒಂದಷ್ಟು ಸಮಸ್ಯೆಯಾದರೂ ಮುಂದಿನ ವರ್ಷಗಳಲ್ಲಿ ಅಂತರ್ಜಲ ವೃದ್ಧಿಯಾಗುವ ಖುಷಿ ರೈತರಲ್ಲಿದೆ.

Hiri Kere Lake At Chamarajanagar Full After 6 Years

ಬರದಿಂದ ಬತ್ತಿದ್ದ ಕೆರೆಗಳು; ನಾಲ್ಕೈದು ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಕಾಣಿಸಿಕೊಂಡಿದ್ದ ಬರ ಇದ್ದಬದ್ದ ಕೆರೆಗಳನ್ನೆಲ್ಲ ಬತ್ತುವಂತೆ ಮಾಡಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸುರಿಯುತ್ತಿರುವ ಮಳೆ ಒಂದಷ್ಟು ಕೆರೆಗಳಿಗೆ ಜೀವ ತುಂಬಿತ್ತು. ಆದರೆ ಈ ಬಾರಿಯ ಮಳೆಯಂತು ಎಲ್ಲ ಕೆರೆಗಳನ್ನು ಭರ್ತಿ ಮಾಡಿದ್ದು ಕೋಡಿ ಬಿದ್ದಿದೆ.

ಈಗ ಹಿರಿಕೆರೆ ಭರ್ತಿಯಾಗಿರುವುದು ಸುತ್ತಮುತ್ತಲಿನ ಜನರಲ್ಲಿ ಸಂತಸ ತಂದಿದೆ. ಬಹಳ ವರ್ಷಗಳ ಬಳಿಕ ತುಂಬಿದ ಕೆರೆಯನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸುತ್ತಿದ್ದಾರೆ. ಕೆರೆ ತುಂಬಿ ನೀರು ಧುಮ್ಮಿಕ್ಕುವ ದೃಶ್ಯ ಸುಂದರ ಜಲಪಾತವೊಂದನ್ನು ಸೃಷ್ಠಿ ಮಾಡಿದ್ದು, ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದೆ.

ಫಸಲು ನಾಶ; ಈಗ ಕೆರೆ ತುಂಬಿ ಹೆಚ್ಚುವರಿ ನೀರು ಹರಿದು ಹೋಗುತ್ತಿರುವುದರಿಂದ ಕೆರೆಯ ಕೆಳಭಾಗದ ಜಮೀನಿಲ್ಲಿ ಬೆಳೆ ಬೆಳೆದಿರುವ ರೈತರಿಗೆ ಫಸಲು ಕಳೆದುಹೋಗುವ ಭಯ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಎಲ್ಲ ಸಾಧ್ಯತೆಗಳಿವೆ.

ಏಕೆಂದರೆ ಈ ಕೆರೆಯು ಜಿಲ್ಲೆಗಳಲ್ಲಿರುವ ದೊಡ್ಡದಾದ ಕೆರೆಗಳ ಪೈಕಿ ಒಂದಾಗಿದೆ. ಸುಮಾರು 560 ಎಕರೆ ವಿಸ್ತೀರ್ಣದ ಕೆರೆಯು ಭರ್ತಿಯಾದರೆ ಹೊಂಗನೂರು, ಮಸಣಾಪುರ, ಇರಸವಾಡಿ, ಚಾಟೀಪುರ, ಕಳ್ಳಿಪುರ, ಗಂಗವಾಡಿ, ದಾಸನಹುಂಡಿ, ಮೂಕಹಳ್ಳಿ ಸೇರಿದಂತೆ ಹಲವು ಹಳ್ಳಿಗಳ 1,808 ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಬೆಟ್ಟ ತಪ್ಪಲಿನಲ್ಲಿರುವುದರಿಂದ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿದೆ.

ಮಳೆ ನೀರಿನಿಂದಲೇ ಕೆರೆಗಳು ಭರ್ತಿ; ಈ ಕೆರೆ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಸುಮಾರು ಎರಡು ದಶಕಗಳ ಹಿಂದೆಯೇ ಕಬಿನಿ ನೀರನ್ನು ಹಾಯಿಸಿ ನೀರು ತುಂಬಿಸುವ ಯೋಜನೆಗೆ ಚಿಂತನೆ ನಡೆದಿತ್ತು. ಆದರೆ ಹಲವು ಅಡಚಣೆಗಳಿಂದ ಅದು ಕಾರ್ಯಗತವಾಗಲೇ ಇಲ್ಲ. ಕೆರೆ ತುಂಬಲೇ ಇಲ್ಲ. ಈಗ ಮಳೆ ಸುರಿದ ಪರಿಣಾಮ ಕೆರೆ ತುಂಬುತ್ತಿರುವುದು ನೆಮ್ಮದಿ ತಂದಿದೆ.

ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಚಾಮರಾಜನಗರ ತಾಲೂಕಿನ ಅಟ್ಟುಗುಳಿ ಪುರ ಸಮೀಪ ಇರುವ ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯದಿಂದ ಭಾನುವಾರ ಮುಂಜಾನೆಯಿಂದ 400 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ.

ಮಳೆಯ ಕಾರಣ ಬೇಡಗುಳಿ, ಪುಣಜನೂರು, ದಿಂಬಂ ನಿಂದ ನೀರು ಹೆಚ್ಚಾಗಿ ಹರಿದು ಬರುತ್ತಿದೆ. ಇನ್ನೊಂದೆಡೆ ಚಿಕ್ಕಹೊಳೆ ಜಲಾಶಯಕ್ಕೆ ತಾಳವಾಡಿ, ಕೊಂಗಳ್ಳಿ ಸುತ್ತ ಮುತ್ತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು ಜಲಾಶಯ ಭರ್ತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+