ಗುಂಡ್ಲುಪೇಟೆಯಲ್ಲಿ ಸಭೆ, ಸಮಾರಂಭ, ಪ್ರಚಾರಕ್ಕೆ ನಿಷೇಧ
ಗುಂಡ್ಲುಪೇಟೆ ಉಪ ಚುನಾವಣೆ ಮತದಾನಕ್ಕೂ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಯಾವುದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ, ಏಪ್ರಿಲ್ 5: ಗುಂಡ್ಲುಪೇಟೆ ಉಪ ಚುನಾವಣೆ ಮತದಾನಕ್ಕೂ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಯಾವುದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮತದಾನ ಮುಕ್ತಾಯದ ಅವಧಿಯ ಹಿಂದಿನ 48 ಗಂಟೆಗಳಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಂತಿಲ್ಲ.
ಮತದಾರರಿಗೆ ಸುದ್ದಿ ಮಾಧ್ಯಮಗಳಾದ ಎಫ್.ಎಂ, ರೇಡಿಯೋ, ದೂರದರ್ಶನ, ಸಿನಿಮಾ, ಇತ್ಯಾದಿಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಅಲ್ಲದೆ ಮೊಬೈಲ್, ಫೇಸ್ಬುಕ್, ಟೆಲಿಗ್ರಾಂ, ವಾಟ್ಸಾಪ್, ವಾಯ್ಸ್ ಮೇಲ್, ಎಸ್.ಎಂ.ಎಸ್. ಮೂಲಕವೂ ಪ್ರಚಾರ ಸಂದೇಶ ಕಳುಹಿಸುವಂತಿಲ್ಲ.

ಜನರ ಆಕರ್ಷಣೆಗೆ ನಿರ್ಬಂಧ
ಮತದಾರರಿಗೆ ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸತಕ್ಕದ್ದಲ್ಲ. ಯಾವುದೇ ಮತಗಟ್ಟೆಯ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪಗಳನ್ನು ನಡೆಸುವಂತಿಲ್ಲ. ದಿನ ಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸುವಂತಿಲ್ಲ ಎಂದು ಬಿ.ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿ ಬಿಡಲು ಆದೇಶ
ಉಪ ಚುನಾವಣೆಗೆ ಸಂಬಂಧಿಸಿದಂತೆ 0ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುವ ಕ್ಷೇತ್ರದ ಮತದಾರರಲ್ಲದ ಏಜೆಂಟರು, ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು ಹಾಗೂ ಕ್ಷೇತ್ರದ ಮತದಾರರಲ್ಲದವರು ಏಪ್ರಿಲ್ 7 ರ ಸಂಜೆ 5 ಗಂಟೆಯೊಳಗೆ ಕ್ಷೇತ್ರ ವ್ಯಾಪ್ತಿಯನ್ನು ಬಿಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಮತಗಟ್ಟೆ ಸಮೀಕ್ಷೆ ನಿರ್ಬಂಧ
ಏಪ್ರಿಲ್ 9 ರ (ಭಾನುವಾರ) ಬೆಳಿಗ್ಗೆ 7 ಗಂಟೆಯಿಂದ ಏಪ್ರಿಲ್ 12 ರ (ಬುಧವಾರ) ಸಂಜೆ 6.30 ಗಂಟೆಯವರೆಗೆ ಯಾವುದೇ ಮತಗಟ್ಟೆ, ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು ಹಾಗೂ ಚುನಾವಣಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಪ್ರಕಟಣೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

48 ಗಂಟೆಗಳ ಮೊದಲು ನಿರ್ಬಂಧ
ಮತದಾನ ಪೂರ್ಣಗೊಳ್ಳುವ ಸಮಯಕ್ಕಿಂತ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಗೆಯ ಅಭಿಪ್ರಾಯ ಸರ್ವೇ (ಒಪಿನಿಯನ್ ಪೋಲ್) ಅಥವಾ ಇತರ ಯಾವುದೇ ಪೋಲ್ ಸರ್ವೇ ಸೇರಿದಂತೆ ಚುನಾವಣಾ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ.

ಜ್ಯೋತಿಷಿ-ಪಂಡಿತರಿಗೂ ನಿರ್ಬಂಧ
ನಿರ್ಬಂಧಿತ ಅವಧಿಯಲ್ಲಿ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸದಂತೆ ಯಾವುದೇ ರಾಜಕೀಯ ವಿಶ್ಲೇಷಕರು, ಜ್ಯೋತಿಷಿಗಳು ಅಥವಾ ಯಾವುದೇ ವ್ಯಕ್ತಿಗಳು ಊಹಾತ್ಮಕವಾಗಿ ಹೇಳುವುದು, ಕ್ಷೇತ್ರದ ಮತದಾರರು ಮತದಾನಕ್ಕೆ ಹೋಗುವ ಮುನ್ನ ಯಾವುದೇ ಪ್ರಭಾವಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಮಾಡಲಾಗಿರುವ ಸೆಕ್ಷನ್ 126(ಎ) ಯ ಉಲ್ಲಂಘನೆಯಾಗಲಿದೆ.

126 (ಎ) ಪಾಲನೆ ಕಡ್ಡಾಯ
ಒಟ್ಟಾರೆ ಮುಕ್ತ ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸೇರಿದಂತೆ ಎಲ್ಲಾ ಮಾಧ್ಯಮಗಳು 126 (ಎ) ಉದ್ದೇಶವನ್ನು ಪಾಲನೆ ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.











Click it and Unblock the Notifications