ಗುಂಡ್ಲುಪೇಟೆ: ಉಪಚುನಾವಣೆಯ ನಂತರವೂ ಅಣಕಿಸುವ ಖಾಲಿ ಕೊಡ!
ರಾಜನಿಗೆ ಪಟ್ಟವಾದರೆ ರಾಗಿ ಬೀಸೋದು ತಪ್ಪುತ್ತಾ? ಅನ್ನೋದು ಗುಂಡ್ಲುಪೇಟೆಯಲ್ಲಿ ಖಾಲಿ ಕೊಡ ಹಿಡಿದು ನೀರಿಗಾಗಿ ಅಲೆಯುವ ಜನರ ಬಾಯಿಯಿಂದ ಸದ್ಯಕ್ಕೆ ಹೊರಬರುತ್ತಿರುವ ಅಸಹಾಯಕ ನುಡಿ!
ಚಾಮರಾಜನಗರ, ಏಪ್ರಿಲ್ 28: ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಿಂದ ಗುಂಡ್ಲುಪೇಟೆ ಕ್ಷೇತ್ರ ರಾಜ್ಯದ ಜನರನ್ನು ಸೆಳೆದಿತ್ತು. ಇಡೀ ಸರ್ಕಾರದ ಆಡಳಿತ ಯಂತ್ರವೇ ಇಲ್ಲಿ ಬೀಡು ಬಿಟ್ಟು ಭರವಸೆಗಳ ಸುರಿಮಳೆಯನ್ನೇ ಸುರಿಸಿತ್ತು. ಆದರೆ ಚುನಾವಣೆಗೂ ಮುನ್ನ ಕ್ಷೇತ್ರದ ಸಮಸ್ಯೆಗಳನ್ನೇ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡ ರಾಜಕಾರಣಿಗಳ್ಯಾರೂ ಇಂದು ಕ್ಷೇತ್ರದತ್ತ ಸುಳಿಯದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣಾ ಪ್ರಚಾರಕ್ಕಾಗಿ ಬಂದ ರಾಜಕಾರಣಿಗಳಿಗೆ ಈ ಭಾಗದ ಜನರು ನೀರಿಗಾಗಿ ಖಾಲಿ ಕೊಡ ಹಿಡಿದು ಅಲೆಯುತ್ತಿರುವ ದೃಶ್ಯ ಮಾಮೂಲೆನ್ನಿಸಿತ್ತು. ಈ ಸನ್ನಿವೇಶವನ್ನೂ ಮತಬೇಟೆಗೆ ಒಂದು ನೆಪವನ್ನಾಗಿಸಿಕೊಂಡ ರಾಜಕಾರಣಿಗಳು 'ನಮಗೆ ಮತ ಹಾಕಿ, ನಿಮಗೆ ನೀರಿನ ಸಮಸ್ಯೆ ಬರದಂತೆ ಮಾಡುತ್ತೇವೆ' ಎಂದು ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಚುನಾವಣೆ ಮುಗಿದು ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ಪತ್ನಿ ಕಾಂಗ್ರೆಸ್ ನ ಡಾ. ಗೀತಾ ಮಹದೇವಪ್ರಸಾದ್ ಶಾಸಕಿಯಾಗಿ ಆಯ್ಕೆಯಾಗಿದ್ದೂ ಆಗಿದೆ. ಆದರೆ ಜನರ ನೀರಿನ ಸಮಸ್ಯೆ ಮಾತ್ರ ಹಾಗೆಯೇ ಇದೆ.[ಗೀತಾ ಮಹದೇವ ಪ್ರಸಾದ್ ರನ್ನು ಸಚಿವರರಾಗಿಸುವರೇ ಸಿದ್ದರಾಮಯ್ಯ?]
ರಾಜನಿಗೆ ಪಟ್ಟವಾದರೆ ರಾಗಿ ಬೀಸೋದು ತಪ್ಪುತ್ತಾ? ಅನ್ನೋದು ಖಾಲಿ ಕೊಡ ಹಿಡಿದು ನೀರಿಗಾಗಿ ಅಲೆಯುವ ಜನರ ಬಾಯಿಯಿಂದ ಸದ್ಯಕ್ಕೆ ಹೊರಬರುತ್ತಿರುವ ಅಸಹಾಯಕ ನುಡಿ![ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ಉಪಚುನಾವಣಾ ವಿಜೇತರು]

ಜಾನುವಾರಿನ ಕಷ್ಟ ಕೇಳೋರಿಲ್ಲ!
ಗುಂಡ್ಲುಪೇಟೆ ಕರ್ನಾಟಕದ ಗಡಿಯಲ್ಲಿದ್ದು, ಬರದ ಹಿನ್ನಲೆಯಲ್ಲಿ ಕೆಲವು ರೈತರು ಜಾನುವಾರುಗಳನ್ನು ಮಾರಿ ನಿರಾಳರಾಗಿದ್ದರೆ, ಮತ್ತೆ ಕೆಲವರು ಇರುವ ಜಾನುವಾರುಗಳಿಗೆ ಮೇವು ಸಿಗದೆ ಪರದಾಡುತ್ತಿದ್ದಾರೆ. ದುಬಾರಿ ಹಣ ನೀಡಿ ಮೇವು ತಂದು ಹಾಕಿ ಸಾಕಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಆದರೂ ಸಾಲ ಮಾಡಿ ಹಣ ತಂದು ಮೇವು ಖರೀದಿಸಿ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಇನ್ನು ಕೂಲಿ ಕಾರ್ಮಿಕರು ಕೇರಳದ ಕಡೆಗೆ ಮುಖ ಮಾಡಿದ್ದಾರೆ.[ಗುಂಡ್ಲುಪೇಟೆ: ಮುಗಿಲು ಮುಟ್ಟಿದ ಕೈ ಕಾರ್ಯಕರ್ತರ ವಿಜಯೋತ್ಸವ]

ನಲ್ಲಿಯ ಮುಂದೆ ನೀರಿನ ನಿರೀಕ್ಷೆ!
ಗುಂಡ್ಲುಪೇಟೆ ಪಟ್ಟಣದಿಂದ ಆರಂಭವಾಗಿ ಹಳ್ಳಿಗಳ ತನಕ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಎಲ್ಲೆಡೆ ಖಾಲಿ ಕೊಡ ಹಿಡಿದು ನೀರಿಗೆ ಪರದಾಡುವ ಜನರೇ ಸಿಗುತ್ತಿದ್ದಾರೆ. ಕೆಲವರು ಸೈಕಲ್, ಬೈಕ್ ಗಳಲ್ಲಿ ದೂರದ ಊರುಗಳಿಂದ ನೀರು ತಂದರೆ, ದೂರ ತೆರಳಿ ನೀರು ತರಲಾಗದವರು ನಲ್ಲಿ ಮುಂದೆ ಕೊಡವಿಟ್ಟು ನೀರಿಗೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.[ಗೆಲುವನ್ನು ಪತಿಗೆ ಅರ್ಪಿಸುತ್ತೇನೆ: ಗೀತಾ ಮಹದೇವಪ್ರಸಾದ್]

ಬರದಿಂದ ತತ್ತರಿಸುತ್ತಿದೆ ತಾಲೂಕು
ಕಳೆದ ಎರಡು ವರ್ಷಗಳಿಂದ ತಾಲೂಕು ಬರದಿಂದ ತತ್ತರಿಸುತ್ತಿದೆ. ಹೀಗಾಗಿ ಅಂತರ್ಜಲ ಸಂಪೂರ್ಣ ನೆಲಕಚ್ಚಿದೆ. ಕಬಿನಿಯಿಂದ ಪಟ್ಟಣಕ್ಕೆ ನೀರು ಸರಬರಾಜಾಗುವ ಮಾರ್ಗದ 28 ಗ್ರಾಮಗಳನ್ನು ಹೊರತು ಪಡಿಸಿ ಬೇರಾವುದೇ ಪ್ರದೇಶಕ್ಕೆ ನದಿ ನೀರು ಸರಬರಾಜಾಗುತ್ತಿಲ್ಲ.[ಗುಂಡ್ಲುಪೇಟೆಯಲ್ಲಿ ಗೆದ್ದ ಗೀತಾ ಮಹದೇವಪ್ರಸಾದ್ ಕಿರುಪರಿಚಯ]

ನೀರಿಗಾಗಿ ನಿರಂತರ ಪರದಾಟ
ತೆರಕಣಾಂಬಿ, ಶ್ಯಾನಡ್ರಹಳ್ಳಿ ಹಾಗೂ ಬಲಚವಾಡಿ ಗ್ರಾಮಗಳ ಕೆರೆಗಳಿಗೆ ನದಿ ನೀರನ್ನು ತುಂಬಿಸಿದ ಪರಿಣಾಮವಾಗಿ ಈ ಗ್ರಾಮಗಳಲ್ಲಿ ನೀರಿನ ಕೊರತೆಯಾಗಿಲ್ಲ. ಇವುಗಳನ್ನು ಹೊರತುಪಡಿಸಿ ಉಳಿದ ಶಿಂಡನಪುರ, ಚಿಕ್ಕತುಪ್ಪೂರು, ದೊಡ್ಡತುಪ್ಪೂರು, ಕಗ್ಗಳ, ಬೊಮ್ಮಲಾಪುರ, ವಡ್ಡಗೆರೆ, ಅಂಕಹಳ್ಳಿ, ಕೊಡಸೋಗೆ, ಬನ್ನಿತಾಳಪುರ, ಭೀಮನಬೀಡು, ಕೂತನೂರು, ಮಲ್ಲಯ್ಯನಪುರ, ಹಂಗಳ, ಮಗುವಿನಹಳ್ಳಿ, ಕಲಿಗೌಡನಹಳ್ಳಿ, ಹುಂಡೀಪುರ, ಬೇಗೂರು, ಮಡಹಳ್ಳಿ, ಸೋಮಹಳ್ಳಿ, ಶೀಗೆವಾಡಿ, ಚಿಕ್ಕಾಟಿ, ತೊಂಡವಾಡಿ, ಸೇರಿದಂತೆ ನೂರಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದ್ದು, ಆಡಳಿತಾರೂಢರಿಗೆ ಶಾಪಹಾಕಿಕೊಂಡು ನೀರಿಗಾಗಿ ಹುಡುಕಾಟ ನಡೆಸುವಂತಾಗಿದೆ.

ಶಾಸಕರ ಮುಂದೆ ಸವಾಲು
ಉಪಚುನಾವಣೆಗೂ ಮುನ್ನ ನೀರಿನ ಕೊರತೆಯನ್ನೇ ಮತ ಕೇಳುವ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡ ರಾಜಕಾರಣಿಗಳು ಈಗೇನು ಮಾಡುತ್ತಿದ್ದಾರೆ? ಜನಾದೇಶದೊಂದಿಗೆ ಆಯ್ಕೆಯಾದ ನೂತನ ಶಾಸಕಿ ಗೀತಾ ಮಹದೇವಪ್ರಸಾದ್ ಅವರ ಮುಂದೆ ಕ್ಷೇತ್ರದ ನೀರಿನ ಸಮಸ್ಯೆ ದೊಡ್ಡ ಸವಾಲಾಗಿ ನಿಂತಿದೆ. ಶಾಸಕಿ ಈ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications