ಒಂದಿಷ್ಟು ಲಕ್ಷ್ಯ ನೀಡಿದರೆ ಗುಂಡಾಲ್ ಜಲಾಶಯವಾಗುತ್ತೆ ಸುಂದರ ಪ್ರವಾಸಿ ತಾಣ

ಚಾಮರಾಜನಗರ, ಡಿಸೆಂಬರ್ 10: ನಿಸರ್ಗ ಸೌಂದರ್ಯವನ್ನು ಹೊದ್ದು ನಿಂತಿರುವ ಗುಂಡಾಲ್ ಜಲಾಶಯವನ್ನು ಅಭಿವೃದ್ಧಿಗೊಳಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದ್ದರೆ ಇವತ್ತು ಚಾಮರಾಜನಗರ ಜಿಲ್ಲೆಯತ್ತ ಇನ್ನಷ್ಟು ಪ್ರವಾಸಿಗರ ದಂಡು ದೌಡಾಯಿಸುತ್ತಿತ್ತು. ಆದರೆ ಆಡಳಿತಾರೂಢರ ನಿರ್ಲಕ್ಷ್ಯ ಜಿಲ್ಲೆ ಹಿಂದುಳಿಯಲು ಕಾರಣವಾಗಿದೆ.

ಚಾಮರಾಜನಗರ ಜಿಲ್ಲೆ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರಬೆಟ್ಟ, ಶಿವನ ಸಮುದ್ರ ಮತ್ತು ಹೊಗೇನಕಲ್ ಜಲಪಾತ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡಿದ್ದು, ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ. ಇನ್ನು ಜಿಲ್ಲೆಗೆ ಅತ್ತ ಕೇರಳ ಇತ್ತ ತಮಿಳುನಾಡಿನ ಸಂಪರ್ಕವೂ ಇರುವುದರಿಂದಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಹೆಚ್ಚಾಗಿಯೇ ಪ್ರವಾಸಿಗರು ಬರುತ್ತಾರೆ.

ಕೊಳ್ಳೇಗಾಲ ತಾಲೂಕಿನ ಸತ್ಯಮಂಗಲ ಸಂಪರ್ಕಿಸುವ ರಾಜ್ಯ ಹೆದ್ದಾರಿ 79ರ ಮುಖ್ಯರಸ್ತೆ ಸಮೀಪವಿರುವ ಗುಂಡಾಲ್ ಡ್ಯಾಂ ಅನ್ನು ಸರ್ಕಾರ ಮುತುವರ್ಜಿ ವಹಿಸಿ ಸುಂದರ ಉದ್ಯಾನವನ ಸೇರಿದಂತೆ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಿದರೆ ಈ ಜಲಾಶಯ ಪ್ರವಾಸಿಗರಿಗೆ ಸ್ವರ್ಗವಾಗಿ ಪರಿಣಮಿಸುತ್ತಿತ್ತೇನೋ, ಆದರೆ ಅಭಿವೃದ್ಧಿ ಮಾಡುವುದಿರಲಿ, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರೂ ಸಾಕಾಗಿತ್ತು. ನಿರ್ಲಕ್ಷ್ಯ ವಹಿಸಿರುವ ಕಾರಣ ಅಧೋಗತಿಗೆ ಸಾಗುತ್ತಿದೆ ಎಂಬುದು ಇಲ್ಲಿಗೆ ತೆರಳಿದ ಪ್ರತಿಯೊಬ್ಬರ ಕಣ್ಣಿಗೂ ಕಾಣಿಸುತ್ತಿದೆ.

Gundal Reservoir In Chamarajanagar Will Be A Tourist Place If Developed

ರೈತರಿಗೆ ನೀರು ನೀಡುವ ಉದ್ದೇಶ: ಗುಂಡಾಲ್ ಜಲಾಶಯವನ್ನು ಸುಮಾರು 15,100 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ನಿಸರ್ಗ ರಮಣೀಯ ಬೆಟ್ಟ ಗುಡ್ಡಗಳ ನಡುವೆ ನಿರ್ಮಾಣವಾದ ಈ ಸುಂದರ ಜಲಾಶಯ ಪ್ರವಾಸೋದ್ಯಮಕ್ಕೆ ಯೋಗ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗುತ್ತಾರೆ. ಜಲಾಶಯದ ನೀರನ್ನು ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಬಿಡಲು ಎರಡು ಜಾಕ್ ವೆಲ್ ನಿರ್ಮಾಣ ಮಾಡಿದ್ದು, ಈ ಜಾಕ್ ವೆಲ್ ಗೆ ಅಳವಡಿಸಿರುವ ಕಂಬಿಗಳು ಕಿತ್ತು ಹೋಗಿವೆ. ಇದರಿಂದ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

Gundal Reservoir In Chamarajanagar Will Be A Tourist Place If Developed

ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ: ಜಲಾಶಯದ ಪ್ರವಾಸಿ ಮಂದಿರಕ್ಕೆ ಹೋಗಲು ಪ್ರವಾಸಿಗರ ಮತ್ತು ವಾಹನ ಸವಾರರ ಅನುಕೂಲ ಮತ್ತು ಸುರಕ್ಷತೆಗೆ ಗಾರ್ಡ್ ಸ್ಟೋನ್ (ರಕ್ಷಣಾ ಕಲ್ಲುಗಳು) ಅಳವಡಿಸಲಾಗಿದೆ. ಆದರೆ ಈಗಾಗಲೇ ಇಲ್ಲಿರುವ ಕಲ್ಲುಗಳ ಪೈಕಿ ಕೆಲವು ನೆಲಕ್ಕುರುಳಿವೆ. ಹೀಗಾಗಿ ಕೆಲವೊಮ್ಮೆ ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ಜಲಾಶಯದ ಮೇಲ್ಭಾಗದಲ್ಲಿ ವೀಕ್ಷಣಾ ಗೋಪುರವಿದ್ದು, ಇದು ಪುಂಡ ಪೋಕರಿಗಳ ಆಶ್ರಯ ತಾಣವಾಗಿದೆ. ಇಲ್ಲಿಗೆ ಹೆಣ್ಣು ಮಕ್ಕಳು ತೆರಳಲು ಭಯಪಡುವಂತಾಗಿದೆ.

ಬೇಸಿಗೆಯಲ್ಲಿ ನೀರು ಸಿಗಲ್ಲ ಎಂಬ ಆರೋಪ: ಪ್ರವಾಸಿ ಮಂದಿರದ ಸುತ್ತಲೂ ಪಾರ್ಥೇನಿಯಂ ಸೇರಿದಂತೆ ಗಿಡಗಂಟಿಗಳು ಬೆಳೆದು ನಿಂತಿವೆ. ಇದು ಜಲಾಶಯದ ಸುತ್ತಲಿನ ಸಮಸ್ಯೆಯಾದರೆ, ಇನ್ನೊಂದೆಡೆ ಜಲಾಶಯದಲ್ಲಿ ನೀರು ಸಂಗ್ರಹವಾದರೂ ಕಾಲುವೆಗೆ ಹರಿಸುವಾಗ ಮಾತ್ರವಲ್ಲ ಅದಕ್ಕೂ ಮೊದಲು ಸೋರಿಕೆಯಾಗುವುದರಿಂದ ಬೇಸಿಗೆಯಲ್ಲಿ ನೀರು ಸಿಗಲ್ಲ ಎಂಬುದು ಕೆಲವರ ಆರೋಪ. ಇದಕ್ಕೆ ಕಾರಣ ರೈತರಿಗೆ ನೀರು ಹರಿಸುವ ತೂಬು ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ನೋಡುವವರಿಗೆ ಖುಷಿಕೊಡುತ್ತಿದೆ.

Gundal Reservoir In Chamarajanagar Will Be A Tourist Place If Developed

ಮುಂದಿನ ದಿನಗಳಲ್ಲಾದರೂ ಸರ್ಕಾರವಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ ಇತ್ತ ಗಮನಹರಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಗುಂಡಾಲ್ ಜಲಾಶಯಕ್ಕೊಂದು ಕಳೆ ಬರಲು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಧಾವಿಸಲು ಸಾಧ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+