ವಿಡಿಯೋ; ಗ್ರಾಮ ಪಂಚಾಯಿತಿ ಅಧಿಕಾರಕ್ಕೆ ಧರ್ಮಸ್ಥಳದಲ್ಲಿ ಪ್ರಮಾಣ
ಚಾಮರಾಜನಗರ, ಜನವರಿ 25: ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಆಣೆ, ಪ್ರಮಾಣ ಮಾಡುತ್ತಿರುವ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಗ್ರಾಮಸ್ಥರ ಆಣೆ, ಪ್ರಮಾಣ ರಾಜಕೀಯ ಹೇಗೆ ಕೆಲಸ ಮಾಡಲಿದೆ? ಎಂದು ಕಾದು ನೋಡಬೇಕಿದೆ.
ಚೆನ್ನಾಲಿಂಗನಹಳ್ಳಿ, ಜಿ. ಕೆ. ಹೊಸೂರು, ಶಿವಪುರ ಗ್ರಾಮವನ್ನೂ ಒಳಗೊಂಡ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯ ಸ್ಥಾನಗಳಿವೆ. ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿತ ತಲಾ ಐದು ಸದಸ್ಯರು ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಒಟ್ಟು 8 ಮತಗಳು ಬೇಕಾಗಿವೆ.

ಗ್ರಾಮ ಪಂಚಾಯಿತಿಯಲ್ಲಿ ಮೈತ್ರಿ ಮೂಲಕ ಅಧಿಕಾರ ಹಿಡಿಯಲು ಜೆಡಿಎಸ್-ಬಿಜೆಪಿ ಬೆಂಬಲಿತರು ನಿರ್ಧರಿಸಿದ್ದಾರೆ. ಸದಸ್ಯರು ಧರ್ಮಸ್ಥಳಕ್ಕೆ ಪ್ರವಾಸವನ್ನೂ ತೆರಳಿದ್ದರು. ದೇವಾಲಯದ ಹೊರ ಭಾಗದಲ್ಲಿ ಕರ್ಪೂರ ಹಚ್ಚಿ, ಮಾತಿಗೆ ಬದ್ಧರಾಗಿರುತ್ತೇವೆ ಎಂದು ಬಿಜೆಪಿ ಬೆಂಬಲಿತ 5 ಹಾಗೂ ಜೆಡಿಎಸ್ ಬೆಂಬಲಿತ 4 ಸದಸ್ಯರು ಹೇಳುತ್ತಿರುವುದುದ ವಿಡಿಯೋದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆದ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡೂವರೆ ವರ್ಷದ ಅವಧಿಯಲ್ಲಿ ಬಸವಣ್ಣ ಅವರಿಗೆ 10 ತಿಂಗಳು, ಮಮತಾ ರಾಣಿ ಮಲ್ಲಣ್ಣ ಎಂಬವರಿಗೆ 12 ತಿಂಗಳು ಹಾಗೂ ಕೊನೆಯ 8 ತಿಂಗಳು ಶಭಾನ ಖಾನ್ ಅಫ್ರಾನ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದು ಎಂಬುದು ವಿಡಿಯೋದಲ್ಲಿ ದಾಖಲಾಗಿದೆ.
ಅದೇ ರೀತಿ ಉಪಾಧ್ಯಕ್ಷ ಸ್ಥಾನ 18 ತಿಂಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ, ಉಳಿದ 10 ತಿಂಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ. ಹೀಗೆ ಒಟ್ಟು ಐದು ವರ್ಷ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೈತ್ರಿಯಿಂದ ಅಧಿಕಾರ ನಡೆಸಲಿದ್ದಾರೆ ಎಂದು ಮಂಜುನಾಥ ಸ್ವಾಮಿ ಸಾಕ್ಷಿಯಾಗಿ ಪ್ರಮಾಣ ಮಾಡಲಾಗಿದೆ.
"ಈ ಮಾತಿಗೆ ಎಲ್ಲರೂ ಮನ್ನಣೆ ಕೊಡಬೇಕು. ಯಾವುದೇ ಕೆಲಸ ಕಾರ್ಯ ಬಂದರೂ 50:50 ಹಂಚಿಕೊಳ್ಳೋಣ. ದಯಮಾಡಿ ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಮಾತಿನಂತೆ ನಾನು ಇದಕ್ಕೆ ಒಪ್ಪಿಕೊಂಡಿದ್ದೇನೆ. ಈಗ ನಾವು 9 ಮಂದಿ ಇದ್ದೇವೆ. ಜೆಡಿಎಸ್ ಬೆಂಬಲಿತ ಮತ್ತೊಬ್ಬ ಸದಸ್ಯ ಜಿ. ರಮೇಶ್ ಪ್ರವಾಸಕ್ಕೆ ಬಂದಿಲ್ಲ. ಅವರೂ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ" ಎಂದು ಬಿಜೆಪಿ ಮುಖಂಡ ಕೆ. ಎಂ. ಬಸವರಾಜಪ್ಪ ಹೇಳುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.#Hanuru #Grampanchayat #Dharmasthala pic.twitter.com/iqq7jv5bw2
— oneindiakannada (@OneindiaKannada) January 25, 2021
"ದೇವಾಲಯದಲ್ಲಿ ಆಣೆ ಮಾಡಿದ್ದೇವೆ. ಇಲ್ಲಿಂದ ಅಲ್ಲಿ ಹೋಗಿ ಯಾರಾದರೂ ಉಲ್ಟಾ ಹೊಡೆದರೆ ಅವರ ಮನೆ ಮುರಿದು ಹೋಗುತ್ತದೆ" ಎಂದು ಮತ್ತೊಬ್ಬ ಮುಖಂಡ ಫೈರೋಜ್ ಬೆದರಿಕೆ ಹಾಕುವ ದೃಶ್ಯವೂ ವಿಡಿಯೋದಲ್ಲಿದೆ.












Click it and Unblock the Notifications