ಚಾಮರಾಜನಗರದ ಕೆರೆಯಲ್ಲಿ ಮೀನುಗಳ ಮಾರಣಹೋಮ!
ಚಾಮರಾಜನಗರ, ಜನವರಿ 24: ಕೆರೆಯಲ್ಲಿ ಸಾಕಲಾಗುತ್ತಿದ್ದ ಮೀನುಗಳೆಲ್ಲವೂ ಸತ್ತು ನೀರಿನಲ್ಲಿ ತೇಲುತ್ತಿರುವ ಘಟನೆ ತಾಲೂಕಿನ ಮಲ್ಲೆದೇವನಹಳ್ಳಿಯಲ್ಲಿ ನಡೆದಿದ್ದು, ಗುತ್ತಿಗೆಪಡೆದಿದ್ದ ಗುತ್ತಿಗೆದಾರ ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಲು ಕಾರಣ ಏನಿರಬಹುದು ಎಂಬುದು ಇನ್ನಷ್ಟೆ ಪತ್ತೆಯಾಗಬೇಕಿದೆ.
ಆದರೆ ಕೆರೆಗೆ ಯಾರಾದರೂ ವಿಷ ಚೆಲ್ಲಿದ್ರಾ ಎಂಬ ಸಂಶಯವೂ ವ್ಯಕ್ತವಾಗತೊಡಗಿದೆ. ಕೆರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕಾಣೆ ಮಾಡುತ್ತಿದ್ದರು. ಮೀನುಗಳು ಚೆನ್ನಾಗಿ ಬೆಳೆದಿದ್ದು, ಉತ್ತಮ ಲಾಭ ತಂದುಕೊಡುವಂತಿದ್ದವು.

ಆದರೆ ಇದೀಗ ಕೆರೆಯಲ್ಲಿದ್ದ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಾ ದಡಕ್ಕೆ ಬಂದು ಅಪ್ಪಳಿಸುತ್ತಿರುವುದು ಗುತ್ತಿಗೆದಾರರನ್ನು ಕಂಗೆಡಿಸಿದೆ. ಈಗಾಗಲೇ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ನಷ್ಟವನ್ನು ಸರ್ಕಾರ ಭರಿಸಿಕೊಡಲಿ ಇಲ್ಲಾಂದ್ರೆ ಮೀನು ಮರಿಗಳನ್ನಾದರೂ ನೀಡಲಿ ಎಂದು ಗುತ್ತಿಗೆದಾರರು ಮನವಿ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಅವರನ್ನು ಅವರನ್ನು ಬೆದರಿಸಿ ಓಡಿಸಲಾಗಿತ್ತು ಎನ್ನಲಾಗಿದ್ದು, ಈ ದ್ವೇಷಕ್ಕೆ ದುಷ್ಕರ್ಮಿಗಳು ವಿಷ ಹಾಕಿದ್ರಾ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ.

ಇನ್ನು ಮೀನುಗಳ ಸಾಮೂಹಿಕ ಸಾವಿಗೆ ಕೆರೆಯಲ್ಲಿ ನೀರು ಕಡಿಮೆಯಾಗಿ ಮೀನುಗಳಿಗೆ ಆಮ್ಲಜನಕದ ಕೊರತೆ ಉದ್ಭವಿಸಿ ಇಲ್ಲವೆ ಕೆರೆಯ ಹೂಳಿನ ಮಣ್ಣು ಮೀನುಗಳ ಕಿವಿರುಗಳಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂಬ ಅಭಿಪ್ರಾಯವನ್ನು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ವ್ಯಕ್ತಪಡಿಸಿದ್ದಾರೆ.
ಸತ್ತ ಮೀನುಗಳ ಪರೀಕ್ಷೆ ವರದಿ ಬಂದ ಬಳಿಕವಷ್ಟೆ ಮೀನುಗಳ ಸಾವಿಗೆ ಕಾರಣ ಏನಿರಬಹುದು ಎಂಬುದು ಗೊತ್ತಾಗಲಿದೆ. ಅದು ಏನೇ ಇರಲಿ, ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಜತೆಗೆ ಗ್ರಾಮಗಳಲ್ಲಿ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭಯವೂ ಜನರನ್ನು ಕಾಡತೊಡಗಿದೆ.












Click it and Unblock the Notifications