ಅರಮನೆಯಲ್ಲಿ ಬಾಣಂತನ ಮುಗಿಸಿ ಮಗನೊಂದಿಗೆ ತವರಿಗೆ ಬಂದ ಲಕ್ಷ್ಮೀ
ಚಾಮರಾಜನಗರ, ಅಕ್ಟೋಬರ್ 8: ನಾಡಹಬ್ಬ ದಸರಾ ಮಹೋತ್ಸವಕ್ಕೆ ತೆರಳಿದ್ದ ವೇಳೆ ಗಂಡು ಮರಿಗೆ ಜನ್ಮ ನೀಡಿದ್ದ ಬಂಡೀಪುರದ ರಾಂಪುರ ಆನೆ ಶಿಬಿರದ ಲಕ್ಷ್ಮೀ ಆನೆ(21 ವರ್ಷ) ಮಗ ಶ್ರೀ ದತ್ತಾತ್ತೇಯನೊಂದಿಗೆ ತವರಿಗೆ ಹಿಂತಿರುಗಿದೆ.
ಮರಿಗೆ ಜನ್ಮ ನೀಡಿದ್ದ ಸುದ್ದಿ ದಸರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು. ಅರಮನೆಯ ವಿಶೇಷ ಆತಿಥ್ಯ, ಆರೈಕೆ ಪಡೆದು ತವರಿಗೆ ಆನೆ ಬಂದಿಳಿದಿದೆ. ಶಿಬಿರದ ಸಿಬ್ಬಂದಿ ಮರಿ ಕಂಡು ಮತ್ತಷ್ಟು ಖುಷಿಗೊಂಡಿದ್ದಾರೆ. ಅರಮನೆ ಒಳಗೆ ಇದ್ದ ಶ್ರೀದತ್ತಾತ್ರೇಯ ರಾಂಪುರದ ಕಾಡಿನ ಚಂದ ಕಂಡು ನಲಿದಾಡಿದ್ದಾನೆ.
ಮೈಸೂರು ದಸರಾ; ಆನೆಗಳಿಗೆ ಬೀಳ್ಕೊಡುಗೆ, ಲಾರಿ ಹತ್ತಲು ಶ್ರೀರಾಮ ನಕಾರ
ಅರಮನೆಯೊಂದಿಗೆ ಸಂಬಂಧ ಹೊಂದಿದ್ದ ಲಕ್ಷ್ಮಿ ಮರಿಯೊಂದಕ್ಕೆ ಜನ್ಮ ನೀಡಿದ್ದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಪ್ರಮೋದಾದೇವಿ ಒಡೆಯರ್ ಮರಿ ಆನೆಗೆ 'ಶ್ರೀದತ್ತಾತ್ರೇಯ' ಎಂದು ನಾಮಕರಣ ಮಾಡಿದ್ದರು. ಸುರಕ್ಷತಾ ದೃಷ್ಟಿಯಿಂದ ಅರಮನೆಯಲ್ಲೇ ಲಕ್ಷ್ಮಿ ಹಾಗೂ ಮರಿ ಆನೆ ಇರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಬಳಿ ಯಾರು ಹೋಗದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಲಕ್ಷ್ಮಿ ಗರ್ಭಿಣಿ ಎಂದೇ ಗೊತ್ತಿರಲಿಲ್ಲ
ಜಂಬೂ ಸವಾರಿಗೆ ತಿಂಗಳಿರುವಾಗಲೇ ಎಲ್ಲಾ 14 ಆನೆಗಳಿಗೂ ತರಬೇತಿ ನೀಡಲಾಗುತ್ತಿದೆ. ಈ ಪೈಕಿ 21 ವರ್ಷದ ಆನೆ ಲಕ್ಷ್ಮಿ ಸೆಪ್ಟೆಂಬರ್ 13ರಂದು ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿತ್ತು. ಆದರೆ ಅರಮನೆ ಆವರಣದಲ್ಲಿ ಹೆರಿಗೆಯಾದ ಲಕ್ಷ್ಮಿ ಆನೆ ಗರ್ಭಿಣಿ ಎಂಬುದೇ ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಅಥವಾ ಮಾವುತರಿಗೆ ತಿಳಿದಿರಲಿಲ್ಲ ಎಂಬುದು ಆಶ್ಚರ್ಯದ ಜೊತೆಗೆ ಆಘಾತವನ್ನುಂಟು ಮಾಡಿತ್ತು. ಏಕೆಂದರೆ ದಸರಾ ತಾಲೀಮಿನ ವೇಳೆ ಸಿಡಿಮದ್ದು ತಾಲೀಮು ಸೇರಿದಂತೆ ಹಲವು ರೀತಿಯ ತರಬೇತಿಯನ್ನು ನೀಡಲಾಗುತ್ತಿತ್ತು, ಈ ವೇಳೆ ಗರ್ಭಿಣಿ ಆನೆಗೆ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಹೊಣೆ ಯಾರಾಗುತ್ತಿದ್ದರು ಎಂದು ಪ್ರಗತಿ ಪರ ಸಂಘಟನೆ ಪ್ರತಿಭಟನೆ ಮಾಡಿತ್ತು.
ಎಲೆಕೂಸಿನ ಮೂಟೆಯಲ್ಲಿ ನಾಗಪ್ಪ
ಚಾಮರಾಜನಗರ ಎಪಿಎಂಸಿಗೆ ತಂದಿದ್ದ ಎಲೆಕೋಸಿನ ಮೂಟೆಯಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ಮೂಟೆಯೊಳಗೆ ಬುಸುಗುಟ್ಟಿದ ನಾಗಪ್ಪನನ್ನು ಕಂಡು ಹೌಹಾರಿದ ರೈತರು ಉರಗ ರಕ್ಷಕ ಸ್ನೇಕ್ ಚಾಂಪ್ ಗೆ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ದೌಡಾಯಸಿದ ಸ್ನೇಕ್ ಚಾಂಪ್ ಎಲೆಕೋಸಿನ ಮೂಟೆಯೊಳಗೆ ಅಡಗಿದ್ದ ಹಾವನ್ನು ಹೊರತೆಗೆದು ಕಾಡಿಗೆ ಬಿಟ್ಟು ಬಂದಿದ್ದಾರೆ. ಎಲೆಕೋಸಿನ ಮೂಟೆಯೊಳಗೆ ರೈತನ ಕಣ್ಣು ತಪ್ಪಿಸಿ ಅದ್ಹೇಗೆ ಮೂಟೆ ಹೊಕ್ಕಿತು ಎಂಬುದೇ ಆಶ್ಚರ್ಯಕರ ಸಂಗತಿ.
ಬುತ್ತಿ ಹೊಯ್ಯುತ್ತಿದ್ದ ಬಾಲಕಿಗೆ ಹಾವು ಕಡಿದು ಸಾವು
ಹೊಲದಲ್ಲಿ ಕೆಲಸ ಮಾಡುತಿದ್ದ ತನ್ನ ಕುಟುಂಬ ಸದಸ್ಯರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿದ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಕೋಣನಕೆರೆ ಎಂಬ ಗ್ರಾಮದಲ್ಲಿ ನಡೆದಿದೆ. ಕೋಣನಕೆರೆ ಗ್ರಾಮದ ಮಾದಯ್ಯ ಎಂಬವರ ಪುತ್ರಿ ಶ್ರೇಯಾ (16 ವರ್ಷ) ಮೃತ ಬಾಲಕಿ. ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿರುವಾಗ ಹಾವು ಕಡಿದಿದೆ. ಕಾಮಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾಳೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿಯಾಗಿ ಪಾದಯಾತ್ರಿ ಸಾವು
ಲಾರಿಯೊಂದು ಪಾದಯಾತ್ರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ನಡೆದಿದೆ. ನಂಜನಗೂಡು ಮೂಲದ ಬಸವಣ್ಣ(55) ಮೃತ ದುರ್ದೈವಿ . ಪಾದಯಾತ್ರೆ ಮೂಲಕ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಬಸವಣ್ಣ ತೆರಳುತ್ತಿದ್ದರು, ವೇಗವಾಗಿ ಬಂದ ಲಾರಿ ಹಿಂಬದಿಯಿಂದ ಡಿಕ್ಕೆ ಹೊಡೆದಿದೆ. ಸದ್ಯ, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ; ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.